Headlines

ಐದು ತಿಂಗಳ ಗರ್ಭಿಣಿಯನ್ನು ಪೆಟ್ರೋಲ್ ಸುರಿದು ಜೀವಂತ ದಹನ!? : ಕ್ರೂರ ವರದಕ್ಷಿಣೆ ಕೊಲೆಯೆಂದು ಕುಟುಂಬಸ್ಥರ ಆರೋಪ!?

ಐದು ತಿಂಗಳ ಗರ್ಭಿಣಿಯನ್ನು ಪೆಟ್ರೋಲ್ ಸುರಿದು ಜೀವಂತ ದಹನ!? : ಕ್ರೂರ ವರದಕ್ಷಿಣೆ ಕೊಲೆಯೆಂದು ಕುಟುಂಬಸ್ಥರ ಆರೋಪ!?

A five-month pregnant nurse was allegedly burned alive in Soraba, Shivamogga district over dowry harassment. Police have registered a murder case and launched a search for the accused.

ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನಲ್ಲಿ ಅಮಾನವೀಯತೆಯ ಅತಿ ಕ್ರೂರ ರೂಪ ಹೊರಬಂದಿದ್ದು, ಐದು ತಿಂಗಳ ಗರ್ಭಿಣಿ ನರ್ಸ್‌ ಶ್ವೇತಾ (30) ಅವರನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಭೀಕರ ಘಟನೆ ಬಗ್ಗೆ ಕುಟುಂಬಸ್ಥರ ಗಂಭೀರ ಆರೋಪ ಕೇಳಿಬಂದಿದೆ.

ವರದಕ್ಷಿಣೆ ಕಿರುಕುಳವೇ ಈ ದುರಂತಕ್ಕೆ ಕಾರಣವೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.ಉಳವಿಯ ಮಂಜಪ್ಪ–ನಾಗರತ್ನ ದಂಪತಿಯ ಪುತ್ರಿಯಾದ ಶ್ವೇತಾ, ನವೀನ್ ಅವರನ್ನು ಪ್ರೀತಿಸಿ 2020ರ ಮೇ ತಿಂಗಳಲ್ಲಿ ವಿವಾಹವಾಗಿದ್ದರು. ದಂಪತಿಗೆ ಈಗಾಗಲೇ ಒಂದು ಹೆಣ್ಣು ಮಗು ಇದ್ದು, ಮತ್ತೊಮ್ಮೆ ತಾಯಿಯಾಗುವ ಸಂಭ್ರಮದಲ್ಲಿದ್ದ ಶ್ವೇತಾ ಐದು ತಿಂಗಳ ಗರ್ಭಿಣಿಯಾಗಿದ್ದರು. ಸಮಾಜ ಸೇವೆಯ ಮನೋಭಾವ ಹೊಂದಿದ್ದ ಅವರು ನರ್ಸ್‌ ಆಗಿ ಸೇವೆ ಸಲ್ಲಿಸುತ್ತಿದ್ದರು.

ಆದರೆ, ವೈವಾಹಿಕ ಜೀವನ ಸುಖಕರವಾಗಿರಲಿಲ್ಲ. ಅತ್ತೆ ಜಾನಕಿ, ಮಾವ ಸಣ್ಣಪ್ಪ ಸೇರಿದಂತೆ ಮನೆಯ ಕೆಲವರು ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಹಿರಿಯ ಮಗನ ಮೇಲೆ ಹೆಚ್ಚಿನ ಮಮತೆ ತೋರಿಸುತ್ತಿದ್ದ ಕುಟುಂಬಸ್ಥರು, ನವೀನ್ ಮತ್ತು ಶ್ವೇತಾ ವಿರುದ್ಧ ದ್ವೇಷಪೂರ್ವಕವಾಗಿ ವರ್ತಿಸುತ್ತಿದ್ದರು ಎನ್ನಲಾಗಿದೆ.

ಮಾರ್ಚ್ 29ರಂದು ಮನೆಯಲ್ಲಿ ನಡೆದ ಕ್ಷುಲ್ಲಕ ಜಗಳ ಭೀಕರ ತಿರುವು ಪಡೆದುಕೊಂಡಿತು. ಈ ಜಗಳವು ರಾಜಿ ಪಂಚಾಯಿತಿಯಲ್ಲಿ ಮುಗಿಯಬೇಕಿದ್ದರೂ, ಆರೋಪಿಗಳು ಕ್ರೌರ್ಯದ ಮಿತಿ ಮೀರಿ ನಡೆದುಕೊಂಡಿದ್ದಾರೆ. ನಡುಮನೆಯಲ್ಲೇ ಶ್ವೇತಾ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ. ಪರಿಣಾಮವಾಗಿ, ಅವರ ದೇಹದ ಶೇ.90ರಷ್ಟು ಭಾಗ ಸುಟ್ಟು ಕರಕಲಾಗಿದೆ ಎಂದು ಕುಟುಂಬಸ್ಥರು ಆರೋಪಿಸುತಿದ್ದಾರೆ.

ತೀವ್ರವಾಗಿ ಗಾಯಗೊಂಡ ಶ್ವೇತಾರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಮೂರು ದಿನಗಳ ಕಾಲ ಜೀವ-ಮರಣದ ಮಧ್ಯೆ ಹೋರಾಡಿದ ಅವರು, ಏಪ್ರಿಲ್ 1ರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಅವರ ಹೊಟ್ಟೆಯಲ್ಲಿದ್ದ ಐದು ತಿಂಗಳ ಗರ್ಭದಲ್ಲಿದ್ದ ಶಿಶುವನ್ನು ಉಳಿಸಲು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದರೂ ಪ್ರಯತ್ನ ವಿಫಲವಾಯಿತು.

ಘಟನೆಯ ಬಗ್ಗೆ ಶ್ವೇತಾ ತಾಯಿ ನಾಗರತ್ನ ಆಕ್ರೋಶ ವ್ಯಕ್ತಪಡಿಸಿದ್ದು, “ಅತ್ತೆ ಜಾನಕಿ, ಮಾವ ಸಣ್ಣಪ್ಪ, ದೊಡ್ಡ ಮಗ ಹೇಮಂತ್, ಅವರ ಪತ್ನಿ ದಿವ್ಯ ಸೇರಿದಂತೆ ಕುಟುಂಬದವರು ಸೇರಿ ನನ್ನ ಮಗಳನ್ನು ಹತ್ಯೆ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ. ತಮ್ಮ ಯೋಗೇಶ್ ಕೂಡ “ಇದು ಆತ್ಮಹತ್ಯೆಯಲ್ಲ, ಖಚಿತವಾಗಿ ಕೊಲೆ” ಎಂದು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ಪತಿ ನವೀನ್ ಅವರೂ ಕುಟುಂಬದವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ತಮಗೆ ಹಾಗೂ ಶ್ವೇತಾಗೆ ನಿರಂತರ ಕಿರುಕುಳ ನೀಡಲಾಗುತ್ತಿತ್ತು ಎಂದು ಹೇಳಿದ್ದಾರೆ.

ಸದ್ಯಕ್ಕೆ ಪ್ರಮುಖ ಆರೋಪಿಗಳು ಪರಾರಿಯಾಗಿದ್ದು, ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

ಈ ಘಟನೆ ಮತ್ತೊಮ್ಮೆ ವರದಕ್ಷಿಣೆ ಎಂಬ ಸಾಮಾಜಿಕ ಪಿಡುಗಿನ ಕ್ರೂರತೆಯನ್ನು ಬಯಲಿಗೆಳೆದಿದ್ದು, ಸಮಾಜದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ನ್ಯಾಯ ದೊರಕಬೇಕು ಎಂಬುದು ಕುಟುಂಬಸ್ಥರು ಮತ್ತು ಸಾರ್ವಜನಿಕರ ಒಕ್ಕೂಟದ ಆಗ್ರಹವಾಗಿದೆ.

About The Author