Headlines

ಅಂಬೇಡ್ಕರ್ ಪೋಟೊ ಹಿಡಿದು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮುಂದೆ ಮಹಿಳೆಯ ಪ್ರತಿಭಟನೆ

ಅಂಬೇಡ್ಕರ್ ಪೋಟೊ ಹಿಡಿದು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮುಂದೆ ಮಹಿಳೆಯ ಪ್ರತಿಭಟನೆ

A woman staged a solo protest in front of Ripponpet police station holding Dr. Ambedkar’s photo, alleging land encroachment and seeking justice and protection from authorities.

ರಿಪ್ಪನ್‌ಪೇಟೆ: ಬಾಬಾಸಾಹೇಬ ಡಾ. ಅಂಬೇಡ್ಕರ್ ಅವರ ಜನ್ಮದಿನದಂದು ನ್ಯಾಯಕ್ಕಾಗಿ ಒತ್ತಾಯಿಸಿ ಮಹಿಳೆಯೊಬ್ಬರು ಠಾಣೆ ಎದುರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.

ರಿಪ್ಪನ್‌ಪೇಟೆ ಸಮೀಪದ ಗವಟೂರು ಗ್ರಾಮದ ನವ್ಯ ದೇವರಾಜ್ ಎಂಬ ಮಹಿಳೆ, ಅಂಬೇಡ್ಕರ್ ಅವರ ಭಾವಚಿತ್ರವನ್ನು ಕೈಯಲ್ಲಿ ಹಿಡಿದು ನ್ಯಾಯ ಕೋರಿ ಠಾಣೆ ಎದುರು ನಿಂತು ಗಮನ ಸೆಳೆದರು.

ಕೆರೆಹಳ್ಳಿ ಹೋಬಳಿಯ ಗವಟೂರು ಗ್ರಾಮದ ಸರ್ವೇ ನಂ.101ರಲ್ಲಿ ಪರಿಶಿಷ್ಟ ಜನಾಂಗದ ರೈತ ಕುಟುಂಬವಾದ ಭೀಮಣ್ಣ ಬಿನ್ ಪುಟ್ಟಪ್ಪ ಅವರಿಗೆ ಸರ್ಕಾರದಿಂದ ದರಖಾಸು ಜಮೀನು ಮಂಜೂರಾಗಿ ಹಕ್ಕುಪತ್ರ ನೀಡಲಾಗಿದೆ. ಆದರೆ, ಆ ಜಾಗವನ್ನು ಮೇಲ್ವರ್ಗದ ಕೆಲವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಅನ್ಯಾಯ ಮಾಡುತ್ತಿದ್ದಾರೆಂದು ಮಹಿಳೆ ಆರೋಪಿಸಿದ್ದಾರೆ.

ಈ ಅನ್ಯಾಯದ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಹಲವು ಬಾರಿ ಮನವಿ ಮಾಡಿದ್ದರೂ, ತಮಗೆ ಸೂಕ್ತ ರಕ್ಷಣೆ ನೀಡಲಾಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. “ನಮಗೆ ಸೇರಿದ ಜಾಗವನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದೇವೆ. ಸರ್ವೇ ಇಲಾಖೆ ಮೂಲಕ ಜಮೀನಿನ ಸರಿಯಾದ ಅಳತೆ ಮಾಡಿಸಿದರೆ ಯಾರು ತಪ್ಪು ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ,” ಎಂದು ನವ್ಯ ದೇವರಾಜ್ ತಮ್ಮ ನೋವನ್ನು ಹೊರಹಾಕಿದರು.

ಘಟನೆಯ ಮಾಹಿತಿ ತಿಳಿದ ತಕ್ಷಣ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಮಹಿಳೆಗೆ ಬೆಂಬಲ ಸೂಚಿಸಿದರು. ಬಳಿಕ ಪಿಎಸ್‌ಐ ರಾಜು ರೆಡ್ಡಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸಮಸ್ಯೆಗೆ ಪರಿಹಾರ ಕಲ್ಪಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ, ಮಹಿಳೆ ತನ್ನ ಪ್ರತಿಭಟನೆಯನ್ನು ಹಿಂಪಡೆದರು.

ಒಟ್ಟಾರೆ, ಅಂಬೇಡ್ಕರ್ ಅವರ ಸ್ಮರಣೆಯ ದಿನದಂದು ನಡೆದ ಈ ಏಕಾಂಗಿ ಹೋರಾಟ ಸ್ಥಳೀಯರಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ನ್ಯಾಯಕ್ಕಾಗಿ ಹೋರಾಟ ಇನ್ನಷ್ಟು ಗಂಭೀರತೆ ಪಡೆದುಕೊಂಡಿದೆ.

About The Author