Headlines

‘ಕಳೆದು ಹೋದ ಬಾವಿ ಹುಡುಕಿ ಕೊಡಿ’ – ಗ್ರಾಮಸ್ಥರ ವಿಚಿತ್ರ ಪ್ರತಿಭಟನೆ | ಕಾಮಗಾರಿ ನಡೆಸದೇ ₹1.24 ಲಕ್ಷ ಬಿಲ್ ಪಾವತಿ!

A well construction scam has surfaced in Kudumallige Gram Panchayat of Thirthahalli taluk, Shivamogga district, where ₹1.24 lakh was allegedly withdrawn without building the well. The issue came to light four years later, triggering protests by villagers demanding accountability.

‘ಕಳೆದು ಹೋದ ಬಾವಿ ಹುಡುಕಿ ಕೊಡಿ’ – ಗ್ರಾಮಸ್ಥರ ವಿಚಿತ್ರ ಪ್ರತಿಭಟನೆ | ಕಾಮಗಾರಿ ನಡೆಸದೇ ₹1.24 ಲಕ್ಷ ಬಿಲ್ ಪಾವತಿ!

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಡುಮಲ್ಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗಬೇಕಿದ್ದ ಕುಡಿಯುವ ನೀರಿನ ಬಾವಿ ಕಾಮಗಾರಿ ನಿರ್ಮಾಣವಾಗದೇ ಇದ್ದರೂ ₹1.24 ಲಕ್ಷ ಬಿಲ್ ಪಾವತಿಯಾದ ಘಟನೆ ನಾಲ್ಕು ವರ್ಷಗಳ ಬಳಿಕ ಬೆಳಕಿಗೆ ಬಂದಿದೆ. “ಕಳೆದು ಹೋದ ಬಾವಿ ಹುಡುಕಿ ಕೊಡಿ” ಎಂದು ಕುಡುಮಲ್ಲಿಗೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

2021–22ನೇ ಸಾಲಿನಲ್ಲಿ ನಡೆದಿರುವ ಈ ಪ್ರಕರಣ ಸಾರ್ವಜನಿಕ ಲೆಕ್ಕಪರಿಶೋಧನಾ ಸಮಿತಿಯ ತನಿಖೆ ವೇಳೆ ಬಹಿರಂಗವಾಗಿದೆ. ಭೆಕ್ಷೆ ಗ್ರಾಮದ ಧಾರ್ಮಿಕ ಕೇಂದ್ರದ ಸಮೀಪ ಬಾವಿ ನಿರ್ಮಾಣಕ್ಕೆ ಮಂಜೂರಾಗಿದ್ದ ಹಣ ದುರುಪಯೋಗವಾಗಿರುವ ಆರೋಪ ಕೇಳಿಬಂದಿದ್ದು, ಇದರ ಬಗ್ಗೆ ಅಧಿಕಾರಿಗಳು ಹೆಚ್ಚಿನ ವಿವರಗಳನ್ನು ಕಲೆಹಾಕುತ್ತಿದ್ದಾರೆ.

ಕುಡುಮಲ್ಲಿಗೆ ಸಮೀಪದ ಭೆಕ್ಷೆ ಗ್ರಾಮದಲ್ಲಿರುವ ಶ್ರೀ ಸತ್ಯಸಾರಮಾನಿ ಧರ್ಮದೈವ ಹಾಗೂ ಶ್ರೀ ಆತೀರ ಪಂಜುರ್ಲಿ ದೇವಸ್ಥಾನದ ಬಳಿ ಕುಡಿಯುವ ನೀರಿನ ಬಾವಿ ನಿರ್ಮಾಣಕ್ಕಾಗಿ ತಾಲೂಕು ಪಂಚಾಯಿತಿ ಅನುದಾನದಲ್ಲಿ ₹1.24 ಲಕ್ಷ ಮಂಜೂರಾಗಿತ್ತು. ಆದರೆ ಕಾಮಗಾರಿ ಸ್ಥಳಕ್ಕೆ ಸುಮಾರು 30 ಬಾವಿ ರಿಂಗ್‌ಗಳನ್ನು ಮಾತ್ರ ತಂದು ಹಾಕಿ, ಬೇರೊಂದು ಸ್ಥಳದಲ್ಲಿ ನಿರ್ಮಿಸಿದ ಬಾವಿಯ ಫೋಟೋವನ್ನು ಲಗತ್ತಿಸಿ ಹಣವನ್ನು ಡ್ರಾ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಕಾಮಗಾರಿಗಾಗಿ ತಂದಿರುವ ಸುಮಾರು 30 ಬಾವಿ ರಿಂಗ್‌ಗಳು ಈಗ ಸ್ಥಳದಲ್ಲೇ ಬಿದ್ದಿದ್ದು, ಅವುಗಳೂ ಕೂಡ ಶಿಥಿಲಗೊಂಡಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ. ಈ ಅಕ್ರಮದಲ್ಲಿ ಗುತ್ತಿಗೆದಾರನೊಂದಿಗೆ ಕೈಜೋಡಿಸಿರುವ ಗ್ರಾಮೀಣ ಕುಡಿಯುವ ನೀರಿನ ಯೋಜನಾ ಅಧಿಕಾರಿಗಳು ಹಾಗೂ ಬಾವಿ ನಿರ್ಮಾಣವಾಗಿದೆ ಎಂದು ಧೃಡೀಕರಣ ಪತ್ರ ನೀಡಿದ ಕುಡುಮಲ್ಲಿಗೆ ಗ್ರಾಮ ಪಂಚಾಯಿತಿಯ ಅಂದಿನ ಪಿಡಿಓ ಶಾಮೀಲಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಸಂಬಂಧ ಸಾರ್ವಜನಿಕ ಲೆಕ್ಕಪರಿಶೋಧನಾ ಸಮಿತಿಯ ಅಧಿಕಾರಿಗಳು ಕುಡುಮಲ್ಲಿಗೆ ಗ್ರಾಮ ಪಂಚಾಯಿತಿಯಲ್ಲಿ ದಾಖಲೆಗಳನ್ನು ಪರಿಶೀಲಿಸಿ ವಿವರಣೆ ಪಡೆದುಕೊಳ್ಳುತ್ತಿದ್ದಾರೆ.

ಇದೀಗ ಈ ಘಟನೆ ಕುರಿತು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬಾವಿ ಕಾಮಗಾರಿಯ ಅಕ್ರಮದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

About The Author