Tension erupted in Ripponpet as gram panchayat officials attempted to clear alleged encroachment on village site land, leading to a verbal clash and police case.
ರಿಪ್ಪನ್ ಪೇಟೆ : ಪಟ್ಟಣದ ಹಳೆಯ ಸಂತೇ ಮಾರ್ಕೆಟ್ ಪ್ರದೇಶದಲ್ಲಿ ಇರುವ ಸರ್ವೆ ನಂ. 43 ರ ಗ್ರಾಮ ಪಂಚಾಯತ್ ಸುಪರ್ದಿಯ ಜಾಗದಲ್ಲಿ ಅಕ್ರಮ ಒತ್ತುವರಿ ಆರೋಪದ ಹಿನ್ನೆಲೆ ಗ್ರಾಮ ಪಂಚಾಯತ್ ವತಿಯಿಂದ ನಡೆಸಿದ ತೆರವು ಕಾರ್ಯಾಚರಣೆ ವೇಳೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ, ಒತ್ತುವರಿದಾರರು ಮತ್ತು ಗ್ರಾಪಂ ಸಿಬ್ಬಂದಿಗಳು , ನಿಕಟಪೂರ್ವ ಗ್ರಾಪಂ ಸದಸ್ಯರುಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.
ಗ್ರಾಮ ಪಂಚಾಯತ್ ಅಧಿಕಾರಿಗಳ ಪ್ರಕಾರ, ಸರ್ವೆ ನಂ. 43ರ ಜಾಗದಲ್ಲಿ ಕೆಲವರು ರಾತ್ರೋರಾತ್ರಿ ಬೇಲಿ ನಿರ್ಮಿಸಿ ಶೆಡ್ ಹಾಕಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು. ಆದರೆ, ಸ್ಥಳದಲ್ಲಿದ್ದ ಒತ್ತುವರಿದಾರರು ತಮ್ಮ ಬಳಿ ಜಾಗಕ್ಕೆ ಸಂಬಂಧಿಸಿದ ಹಕ್ಕುಪತ್ರವಿದೆ ಎಂದು ಹೇಳಿ ವಿರೋಧ ವ್ಯಕ್ತಪಡಿಸಿದರು.
ಈ ವೇಳೆ ಎರಡೂ ಪಾಳಯಗಳ ನಡುವೆ ವಾಗ್ವಾದ ತೀವ್ರಗೊಂಡು, ಪರಿಸ್ಥಿತಿ ನಿಯಂತ್ರಣ ತಪ್ಪುವ ಮಟ್ಟಕ್ಕೆ ತಲುಪಿತು. ಎರಡು ಪಾಳಯದವರು ಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪರಸ್ಪರ ದೂರು-ಪ್ರತಿ ದೂರುಗಳನ್ನು ದಾಖಲಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂದಿಸಿದಂತೆ ಕಳೆದ ಎರಡು ವರ್ಷಗಳ ಹಿಂದೆ ಇದೇ ಗುಂಪಿನವರು ಸದರಿ ಜಾಗದಲ್ಲಿ ಬೇಲಿ ಹಾಗೂ ಶೆಡ್ ನಿರ್ಮಿಸಿದ್ದು ಆ ಸಂಧರ್ಭದಲ್ಲಿ ಗ್ರಾಪಂ ವತಿಯಿಂದ ತೆರವುಗೊಳಿಸಲಾಗಿತ್ತು ಸದರಿ ಪ್ರಕರಣ ನ್ಯಾಯಲಯದ ಮೆಟ್ಟಿಲೇರಿತ್ತು..
ನಿಕಟಪೂರ್ವ ಗ್ರಾಪಂ ಸದಸ್ಯರಾದ ನಿರೂಪ್ ಕುಮಾರ್, ಪ್ರಕಾಶ್ ಪಾಲೇಕರ್, ಮಲ್ಲಿಕಾರ್ಜುನ್, ಸುಂದರೇಶ್ ಹಾಗೂ ಸಿಬ್ಬಂದಿಗಳಾದ ನಾಗೇಶ್ ಮೋರೆ, ರಾಜೇಶ್ ಸೇರಿದಂತೆ ಇತರರು ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಈ ಘಟನೆ ಈಗ ರಿಪ್ಪನ್ಪೇಟೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ.