Headlines

ಹಿಂದೂ ಜಾಗೃತನಾಗಿರುವ ಕಾರಣ ಭಾರತ ವಿಶ್ವಗುರುವಾಗಿದೆ -ತಾಲೂಕು ಕಾರ್ಯವಾಹ ಅಶ್ವಥ್ ಮೂಗುಡ್ತಿ ಅಭಿಮತ

ಹಿಂದೂ ಜಾಗೃತನಾಗಿರುವ ಕಾರಣ ಭಾರತ ವಿಶ್ವಗುರುವಾಗಿದೆ -ತಾಲೂಕು ಕಾರ್ಯವಾಹ ಅಶ್ವಥ್ ಮೂಗುಡ್ತಿ ಅಭಿಮತ

ಹುಂಚ ಮಂಡಲ ಹಿಂದೂ ಸಂಗಮ ಕಾರ್ಯಕ್ರಮ | ಬೃಹತ್ ಶೋಭಾಯಾತ್ರೆ

POSTMAN NEWS KANNADA

ಹುಂಚ: ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ ಎಂಬಂತಹ ಸಿದ್ಧಾಂತವು ಹಿಂದುಗಳನ್ನು ಜಾಗೃತಗೊಳಿಸಿ ಭಾರತ ವಿಶ್ವಗುರುವನ್ನಾಗಿಸಿದೆ. ಹಿಂದೂ ಸಮಾಜ ಜಗತ್ತಿನ ಅತ್ಯಂತ ಹಿರಿಯ ಸಮಾಜ, ವಸುದೈವ ಕುಟುಂಬಕಂ ಎಂಬ ಸಂದೇಶವನ್ನು ಸಾರಿದ ಸಂಸ್ಕೃತಿ ನಮ್ಮದು ಎಂದು ಆರ್ ಎಸ್ ಎಸ್ ತಾಲೂಕು ಕಾರ್ಯವಾಹ ಅಶ್ವಥ್ ಕುಮಾರ್ ಹೇಳಿದರು.

ಶನಿವಾರ ನಡೆದ ಹುಂಚ ಮಂಡಲದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಆರ್ ಎಸ್ ಎಸ್ ತನ್ನ ಶತಮಾನೋತ್ಸವ ಕಾರ್ಯಕ್ರಮವನ್ನು ಆಚರಿಸಿಕೊಳ್ಳುತ್ತಿಲ್ಲ ಅದರ ಬದಲಾಗಿ ಹಿಂದೂ ಸಮಾಜವನ್ನು ಜಾಗೃತಗೊಳಿಸಲು ಹಿಂದೂ ಸಂಗಮ ಕಾರ್ಯಕ್ರಮವನ್ನು ಸಮಾಜವೇ ಸಂಘಟಿಸಿದೆ ಎಂದರು.

ಆತ್ಮವಿಸ್ಮೃತಿಗೆ ಒಳಗಾಗಿದ್ದ ಹಿಂದೂ ಸಮಾಜವನ್ನು ಸಂಘಟಿಸಿದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘ , ಒಂದು ಕಾಲಘಟ್ಟದಲ್ಲಿ ಹಿಂದೂ ಎಂದು ಹೇಳಿಕೊಳ್ಳಲು ಆತ್ಮವಿಶ್ವಾಸವಿಲ್ಲದಂತಹ ಕಾಲದಲ್ಲಿ ಹಿಂದೂ ಸಮಾಜವನ್ನು ಸಂಘಟಿಸಿ ನಾನೊಬ್ಬ ಹಿಂದೂ ಇಂದು ಎದೆಯುಬ್ಬಿಸಿ ಹೇಳುವಂತೆ ಮಾಡಿದ್ದು ಸಂಘ ಎಂದು ಹೇಳಿದರು.

ಇದು ಪರಿವರ್ತನೆಯ ಕಾಲ, ಸಂಘವು ಪಂಚಪರಿವರ್ತನೆಯ ಮುಖಾಂತರ ಭಾರತವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ವ್ಯಕ್ತಿ- ಕುಟುಂಬ-ಸಮಾಜವಾಗಿ ನಾವು ಜಾಗೃತವಾಗಬೇಕೆಂಬ ಆಶಯದಿಂದ ಸಂಘವು ಕುಟುಂಬ ಪ್ರಬೋಧನ, ಸ್ವದೇಶಿ, ಪರಿಸರ ಸಂರಕ್ಷಣೆ, ಸಾಮರಸ್ಯ, ನಾಗರಿಕ ಶಿಷ್ಟಾಚಾರ ಎಂಬಂತಹ ಸಮಾಜ ಪರಿವರ್ತನೆಯ ಜಾಗೃತಿಯ ಸಂದೇಶವನ್ನು ಸಾರುತ್ತಿದೆ ಎಂದು ಹೇಳಿದರು.

ತದನಂತರ ಮಾತನಾಡಿದ ಲೋಹಿತಾಶ್ವ ಕೇದಿಗ್ಗೆರೆ ಮಕ್ಕಳಲ್ಲಿ ಸನಾತನ ಸಂಸ್ಕೃತಿಯ ಸಂಸ್ಕಾರಗಳನ್ನು ಬಾಲ್ಯದಲ್ಲಿಯೇ ತಿಳಿಸಿ. ತಂದೆ ತಾಯಿ ಆಲೋಚಿಸಿ ನಾವು ನಮ್ಮ ಮಕ್ಕಳಿಗೆ ಮಾತೃಭಾಷೆಯಲ್ಲಿಯೇ ಶಿಕ್ಷಣ ಕೊಡಬಹುದಾ? , ನಮ್ಮ ಮಕ್ಕಳ ಹುಟ್ಟುಹಬ್ಬವನ್ನು ಹಿಂದೂ ಸಂಸ್ಕೃತಿಯಂತೆ ಆಚರಿಸಬಹುದಾ?, ಸ್ವದೇಶಿ ಬಟ್ಟೆಗಳನ್ನೇ ಧರಿಸುವಂತೆ ಮಕ್ಕಳಿಗೆ ತಿಳಿ ಹೇಳಬಹುದಾ? ಎಂದು ಪೋಷಕರಿಗೆ ಕಿವಿಮಾತು ಹೇಳಿದರು.

ಭಾರತೀಯ ಇತಿಹಾಸವನ್ನು ತಿರುಚಿ ನಮ್ಮ ಮಕ್ಕಳಿಗೆ ನೈಜ ಇತಿಹಾಸವನ್ನು ಹೇಳದೆ ಈ ಹಿಂದಿನ ಸರಕಾರಗಳು ವಂಚಿಸಿದೆ.
ಭಾರತದ ಗತವೈಭವದ ಇತಿಹಾಸವನ್ನು ನಮ್ಮ ಮಕ್ಕಳು ಅರಿತರೆ ಎಲ್ಲಿ ಹಿಂದೂ ಭಾವ ಜಾಗೃತವಾಗುತ್ತದೋ ಎಂದು ಸ್ವಾತಂತ್ರ್ಯದ ನಂತರ ಬಂದಂತಹ ಶಿಕ್ಷಣ ಸಚಿವರು ಬ್ರಿಟಿಷ್ ಇತಿಹಾಸವನ್ನು ಮತ್ತು ತಮ್ಮ ಅಜೆಂಡಗಳನ್ನು ಪಠ್ಯದಲ್ಲಿ ಸೇರಿಸಿದರು ಎಂದು ಹೇಳಿದರು.

ಹಿಂದೂ ಸಂಗಮ ಆಯೋಜನ ಸಮಿತಿಯ ಅಧ್ಯಕ್ಷ ವಿನಯ್ ವಿ ಎಂ ಮಾತನಾಡಿ ಹೊಸನಗರ ತಾಲೂಕಿನ ಕೊನೆಯ ಕಾರ್ಯಕ್ರಮವಿದು ಇಡೀ ತಾಲೂಕಿನಲ್ಲಿ ಹಿಂದೂಸಂಗಮ ಕಾರ್ಯಕ್ರಮ ಅತ್ಯಂತ ಸಂಘಟಿತವಾಗಿ ನಡೆದಿದೆ. ಹಿಂದೂ ಸಂಗಮದಿಂದ ಹೊಸನಗರ ತಾಲೂಕಿನ ಹಿಂದೂ ಸಮಾಜ ಜಾಗೃತಿಯಾಗಿದೆ ಎಂಬ ಸಂದೇಶವು ರವಾನೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಬೃಹತ್ ಶೋಭಯಾತ್ರೆಯಲ್ಲಿ ಕುಣಿತ ಭಜನೆ, ಮಕ್ಕಳ ಛದ್ಮವೇಷ, ಡೊಳ್ಳು ಕುಣಿತ ಆಕರ್ಷಕವಾಗಿತ್ತು.

ರಂಗೋಲಿ ಸ್ಪರ್ಧೆ, ಛದ್ಮವೇಷ, ಪ್ರಬಂಧ ಸ್ಪರ್ಧೆ ಭಾಗವಹಿಸಿದ ಸ್ಪರ್ಧಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವು ಜನಮನ ಸೆಳೆಯಿತು.

ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡ ನಾಗೇಶ್ ಪೈ ,ಸುಬ್ರಮಣ್ಯ,ಸುರೇಂದ್ರ ಗೌಡ್ರು ಇವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನಂತ್ ಹೆಚ್. ಕೆ ವಹಿಸಿದ್ದರು.
ನಿರ್ವಹಣಾ ಸಮಿತಿ ಅಭಿಷೇಕ್, ವಿನಾಯಕ,ಕಿರಣ್, ನಾಗೇಂದ್ರ, ಯದು, ವೃಷಭೇಂದ್ರ, ನಟೇಶ್,ಸಂಜಯ, ಜಗದೀಶ್,ಪರ್ವತಣ್ಣ, ಶ್ರೀಧರ್, ಚರಣ್ ಮತ್ತು ಅನೇಕ ಕಾರ್ಯಕರ್ತರು ಹಾಜರಿದ್ದರು.

ಕಾರ್ಯಕ್ರಮದಲ್ಲಿ ಶ್ರೀನಿವಾಸ್ ಸ್ವಾಗತಿಸಿದರು, ರಾಜಶೇಖರ್ ಪಟೇಲ್ ವಂದಿಸಿದರು.

About The Author