ರಸ್ತೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷ : ಹೆದ್ದಾರಿಯಲ್ಲಿ ಆತಂಕ!
ಶಿವಮೊಗ್ಗ: ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಮಂಡಗದ್ದೆ ಸಮೀಪ ರಸ್ತೆಯಲ್ಲೇ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದೆ.
ಮಂಡಗದ್ದೆ ಬಳಿ ವೇಗವಾಗಿ ಬರುತ್ತಿದ್ದ ಬಸ್ಗೆ ಕಾಡಾನೆ ದಿಢೀರ್ ಎದುರಾಗಿದೆ. ಅನಿರೀಕ್ಷಿತವಾಗಿ ಆನೆಯನ್ನು ನೋಡಿದ ಬಸ್ ಚಾಲಕ ತಕ್ಷಣವೇ ಬಸ್ ಅನ್ನು ನಿಲ್ಲಿಸಿ ಅಪಾಯವನ್ನು ತಪ್ಪಿಸಿದ್ದಾರೆ.
ಈ ಘಟನೆಯಿಂದಾಗಿ ಬಸ್ನಲ್ಲಿದ್ದ ಪ್ರಯಾಣಿಕರು ಒಮ್ಮೆಲೆ ಆತಂಕಕ್ಕೊಳಗಾದರು. ಹಲವರು ತಮ್ಮ ಮೊಬೈಲ್ ಕ್ಯಾಮರಾಗಳಲ್ಲಿ ಆನೆಯ ಚಿತ್ರಗಳನ್ನು ಸೆರೆಹಿಡಿದರೆ, ಇನ್ನು ಕೆಲವರು ಗಾಬರಿಯಾಗಿದ್ದರು. ಕೆಲಕಾಲ ರಸ್ತೆಯಲ್ಲೇ ನಿಂತಿದ್ದ ಸಲಗ ನಂತರ ನಿಧಾನವಾಗಿ ಕಾಡಿನತ್ತ ತೆರಳಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ಇದರಿಂದ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು.




