ರಿಪ್ಪನ್ಪೇಟೆ ಪೊಲೀಸರ ದಾಳಿ: ಅಕ್ರಮ ಗೋ ಸಾಗಾಣಿಕೆ ಪತ್ತೆ, ಮೂವರ ಬಂಧನ
ರಿಪ್ಪನ್ಪೇಟೆ – ಅಕ್ರಮವಾಗಿ ಗೋವುಗಳನ್ನು ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿಯ ಆಧಾರದ ಮೇಲೆ ಗ್ರಾಮಸ್ಥರ ಸಹಕಾರದೊಂದಿಗೆ ರಿಪ್ಪನ್ಪೇಟೆ ಪೊಲೀಸ್ ಠಾಣೆಯ ಪಿಎಸ್ಐ ರಾಜುರೆಡ್ಡಿ ಅವರ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿ ಜಾನುವಾರು ಸಹಿತ ಆರೋಪಿಗಳನ್ನು ಬಂಧಿಸಿದೆ.
ಪೊಲೀಸರು ಬಂಧಿಸಿದವರನ್ನು ನಲ್ಲಿಹೊಂಡಾ ಗ್ರಾಮದ ಅರಣ್ಯ ಇಲಾಖೆಯ ವಾಚರ್ ಹಾಗೂ ತಾಲ್ಲೂಕು ದಿನಗೂಲಿ ನೌಕರರ ಸಂಘದ ಅಧ್ಯಕ್ಷ ರಮೇಶ್ ಹಾಗೂ ಶಿಕಾರಿಪುರ ಬೆಂಡೆಕಟ್ಟ ಗ್ರಾಮದ ಹರೀಶ್ ಮತ್ತು ಪುನೀತ್ ಎಂದು ಗುರುತಿಸಲಾಗಿದೆ.
ಇವರು ಅಕ್ರಮ ಗೋ ಸಾಗಾಣಿಕೆಯಲ್ಲಿ ತೊಡಗಿದ್ದು, ಮೂರು ಮಲೆನಾಡು ಗಿಡ್ಡಗಳನ್ನು ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಸ್ಥಳೀಯರಾದ ಹರತಾಳು ಗೋಪಾಲಕೃಷ್ಣ, ಅಭಿಶೆಟ್ಟಿ, ಶರತ್, ಸುರೇಶ್, ನಾಗೇಶ, ನಾಗರಾಜ್, ಚಂದ್ರು, ಚಂದ್ರಶೇಖರ್, ಕಿರಣ್ ಮತ್ತಿತರರು ಪೊಲೀಸರಿಗೆ ಸಹಕರಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.



