SHIVAMOGGA | ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವಕ್ಕೆ ಚಾಲನೆ
ಶಿವಮೊಗ್ಗ: ಹಿಂದೂ ಮಹಾಸಭಾ ವತಿಯಿಂದ ಆಯೋಜಿಸಲಾದ ಗಣಪತಿ ರಾಜಬೀದಿ ಉತ್ಸವವು ಶನಿವಾರ ಬೆಳಿಗ್ಗೆ ಭವ್ಯವಾಗಿ ಆರಂಭವಾಯಿತು. ಬೆಳಿಗ್ಗೆ 11 ಗಂಟೆಗೆ ಗಣಪತಿ ಮೂರ್ತಿಯ ಮೆರವಣಿಗೆ ಜೈಕಾರಗಳ ನಡುವೆ ಪ್ರಾರಂಭಗೊಂಡು ಕೋಟೆ ಮಾರಿಕಾಂಬ ದೇವಾಲಯ ತಲುಪಿದೆ.
ಈ ಸಂದರ್ಭದಲ್ಲಿ ಶಾಸಕರಾದ ಚೆನ್ನಬಸಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್, ಎಂ. ಶ್ರೀಕಾಂತ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಹಣ್ಣಿನ ಹಾರ, ಹೂವಿನ ಹಾರಗಳಿಂದ ಅಲಂಕರಿಸಲಾದ ಮೂರ್ತಿಯ ಮೆರವಣಿಗೆಯಲ್ಲಿ ಜಾನಪದ ಕಲಾಮೇಳ, ಹುಲಿವೇಷ, ಕೀಲುಗೊಂಬೆ, ಡೊಳ್ಳು ನೃತ್ಯ ಹಾಗೂ ಮಂಗಳವಾದ್ಯಗಳ ಪ್ರದರ್ಶನಗಳು ವಿಶೇಷ ಆಕರ್ಷಣೆಯಾಗಿದ್ದವು. ಮೆರವಣಿಗೆಯ ಮಾರ್ಗದಲ್ಲಿ ಜನಸಾಗರ ಕಾಣಿಸಿಕೊಂಡಿದ್ದು, ಸಾಂಪ್ರದಾಯಿಕ ಕಲಾ ವೈಭವಕ್ಕೆ ಸಾಕ್ಷಿಯಾಯಿತು.
ಭಕ್ತರ ಸೌಲಭ್ಯಕ್ಕಾಗಿ ಮೆರವಣಿಗೆ ಆರಂಭವಾದ ಕ್ಷಣದಿಂದಲೇ ಕುಡಿಯುವ ನೀರಿನ ವ್ಯವಸ್ಥೆ, ಅನ್ನಸಂತರ್ಪಣೆ, ಪ್ರಸಾದ ವಿತರಣೆ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ವಿವಿಧ ಸಂಘ ಸಂಸ್ಥೆಗಳು ಸೇವಾ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು, ಎಲ್ಲೆಡೆ ಭಕ್ತರಿಗೆ ಆತಿಥ್ಯ ನೀಡುವ ವಾತಾವರಣ ನಿರ್ಮಾಣಗೊಂಡಿತ್ತು.
ಶಾಂತಿ-ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಬಿಗಿ ಪೊಲೀಸ್ ಬಂದೋಬಸ್ತ್ ಜಾರಿಗೊಳಿಸಲಾಗಿದೆ, ಟ್ರಾಫಿಕ್ ನಿಯಂತ್ರಣಕ್ಕಾಗಿ ವಿಶೇಷ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಮೆರವಣಿಗೆ ಯಾವುದೇ ಅಡಚಣೆಗಳಿಲ್ಲದೆ ಶಿಸ್ತಿನಿಂದ ಸಾಗಿದೆ.