ಅಂಗಲಾಚಿದರು ಬಿಡದ ದುಷ್ಕರ್ಮಿಗಳು, ಬೇಕರಿಗೆ ನುಗ್ಗಿ ವ್ಯಕ್ತಿಯ ಬರ್ಬರ ಹತ್ಯೆ – ಹಳೇ ವೈಷಮ್ಯಕ್ಕೆ ಸಿನಿಮೀಯ ಶೈಲಿಯಲ್ಲಿ ಕೊಲೆ

ಅಂಗಲಾಚಿದರು ಬಿಡದ ದುಷ್ಕರ್ಮಿಗಳು, ಬೇಕರಿಗೆ ನುಗ್ಗಿ ವ್ಯಕ್ತಿಯ ಬರ್ಬರ ಹತ್ಯೆ – ಹಳೇ ವೈಷಮ್ಯಕ್ಕೆ ಸಿನಿಮೀಯ ಶೈಲಿಯಲ್ಲಿ ಕೊಲೆ

ಸಿನಿಮಾ ಶೈಲಿಯಲ್ಲಿ ಬೇಕರಿಗೆ ನುಗ್ಗಿ ಮನಬಂದಂತೆ ಓರ್ವ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ
ಮಾಡಿರುವಂತಹ ಘಟನೆ ಶನಿವಾರ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾದಲ್ಲಿ ನಡೆದಿದೆ.

ಚನ್ನಪ್ಪ ಹುಸೇನಪ್ಪ ನಾರಿನಾಳ (35) ಹತ್ಯೆಗೊಳಗಾದ ವ್ಯಕ್ತಿ. ಚನ್ನಪ್ಪ ಕೈ ಮುಗಿದು ಪರಿಪರಿಯಾಗಿ ಬೇಡಿಕೊಂಡರೂ ದುಷ್ಕರ್ಮಿಗಳು ಬೇಕರಿಯಲ್ಲಿ ಅಟ್ಟಾಡಿಸಿ ಮನಸೋಇಚ್ಛೆ ಹಲ್ಲೆ ಮಾಡಿದ್ದಾರೆ. ಬಳಿಕ ಬೇಕರಿಯಿಂದ ಹೊರಗಡೆ ಎಳೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ. ಸದ್ಯ ತಾವರಗೇರಾ ಠಾಣೆಯ ಪೊಲೀಸರಿಂದ 7 ಆರೋಪಿಗಳನ್ನು ಬಂಧಿಸಲಾಗಿದೆ.

20 ವರ್ಷಗಳ ಹಿಂದಿನ ದ್ವೇಷ ಕೊಲೆಗೆ ಕಾರಣ

ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ನಿನ್ನೆ ರಾತ್ರಿ ಚನ್ನಪ್ಪ ನಾರಿನಾಳ (35) ಕೊಲೆ ನಡೆದಿದೆ.‌ ಅಷ್ಟಕ್ಕೂ ಈ ವ್ಯಕ್ತಿಯ ಕೊಲೆಗೆ ಕಾರಣವಾಗಿದ್ದು, ನಾರಿನಾಳ ಕುಟುಂಬಗಳ ಮಧ್ಯೆ 20 ವರ್ಷಗಳ ಹಿಂದಿನ ದ್ವೇಷ. ಹೀಗಾಗಿ ನಿನ್ನೆ ರಾತ್ರಿ ಚನ್ನಪ್ಪ ನಾರಿನಾಳ ಆಸ್ಪತ್ರೆಗೆ ಹೋಗಿ ಬರುವಾಗ ಕಾದು ಕುಳಿತಿದ್ದ ದುಷ್ಕರ್ಮಿಗಳು ಸಿಂಧನೂರು ಕ್ರಾಸ್ ಬಳಿ ಬಂದಾಗ ಬೈಕ್ ಮೇಲೆ ಹೊರಟಿದ್ದ ಚನ್ನಪ್ಪ ಮೇಲೆ ಮಚ್ಚುನಿಂದ ಹಲ್ಲೆ ಮಾಡಿದ್ದಾರೆ.‌ ಕೂಡಲೇ ಬೈಕ್ ಬಿಟ್ಟ ಚನ್ನಪ್ಪ ಅಲ್ಲಿಯೇ ಇದ್ದ ಬೇಕರಿಯೊಂದಕ್ಕೆ ರಕ್ಷಣೆ ಕೋರಿ ಹೋಗಿದ್ದಾರೆ. ಈ ವೇಳೆ ಅಲ್ಲಿಗೂ ಬಂದ ದುಷ್ಕರ್ಮಿಗಳು ಚನ್ನಪ್ಪನ ಮೇಲೆ ಮಚ್ಚಿನಿಂದ ನಿರಂತರವಾಗಿ ಹಲ್ಲೆ ಮಾಡಿದ್ದಾರೆ.

ಇನ್ನು ಚನ್ನಪ್ಪ‌ ನಾರಿನಾಳ ಹಾಗೂ ಶ್ಯಾಮಣ್ಣ ನಾರಿನಾಳ ಕುಟುಂಬಗಳ ನಡುವೆ ಎರಡು ದಶಕಗಳಿಂದ ಹಗೆತನ ಇತ್ತು. ಆ ಹಗೆತನ ಮತ್ತಷ್ಟು ಹೆಚ್ಚಾಗುವುದಕ್ಕೆ ಕಾರಣ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಶ್ಯಾಮಣ್ಣ ನಾರಿನಾಳ ಕುಟುಂಬದ ಸದಸ್ಯರೊಬ್ಬರು ಸ್ಪರ್ಧೆ ಮಾಡಿದ್ದು. ಈ ವೇಳೆ ಚನ್ನಪ್ಪ ನಾರಿನಾಳ ಶ್ಯಾಮಣ್ಣ ನಾರಿನಾಳ ಕುಟುಂಬದವರಿಗೆ ಬೆಂಬಲ ನೀಡುವುದರ ಬದಲಾಗಿ ಅವರ ಪ್ರತಿಸ್ಪರ್ಧಿಯಾಗಿ ಸ್ಪರ್ಧಿಸಿದ್ದ ಬಿಸ್ತಿ ಕುಟುಂಬದವರಿಗೆ ಬೆಂಬಲ ನೀಡಿದ್ದರು. ಆ ಚುನಾವಣೆಯಲ್ಲಿ ಬಿಸ್ತಿ ಕುಟುಂಬದವರೇ ಗೆದ್ದರು.‌ ಇದು ಸಹಜವಾಗಿಯೇ ಶ್ಯಾಮಣ್ಣ ನಾರಿನಾಳ‌ ಕುಟುಂಬದವರನ್ನು ಆಕ್ರೋಶಕ್ಕೀಡು ಮಾಡಿದೆ.

ಇದರ ಜೊತೆಗೆ ಇತ್ತೀಚಿಗೆ ಚನ್ನಪ್ಪ ನಾರಿನಾಳ ಕುಟುಂಬದವರಿಗೆ ಸೇರಿದೆ ಎನ್ನಲಾದ ಎರಡೂವರೆ ಜಮೀನನ್ನು ಶ್ಯಾಮಣ್ಣ ನಾರಿನಾಳ ಕುಟುಂಬದವರು ಮಾರಾಟ ಮಾಡಲು ಮುಂದಾಗಿದ್ದರು ಎನ್ನಲಾಗಿದೆ.‌ ಈ ಕುರಿತಂತೆ ಚನ್ನಪ್ಪ ನಾರಿನಾಳ ಜಮೀನು ಮಾರಾಟ ಮಾಡದಂತೆ ಕೋರ್ಟ್​ನಿಂದ ತಡೆಯಾಜ್ಞೆ ತಂದಿದ್ದರು. ಇದು ಈ ವಿಚಾರ ಕೂಡ ಶ್ಯಾಮಣ್ಣ ನಾರಿನಾಳ ಕುಟುಂಬವದರ ಆಕ್ರೋಶಕ್ಕೆ ಕಾರಣವಾಗಿತ್ತು.‌ ಈ ಹಿನ್ನಲೆಯಲ್ಲಿ ಹೊಂಚು ಹಾಕಿ ಕೊಲೆ ಮಾಡಿರುವುದಾಗಿ ಚನ್ನಪ್ಪ ನಾರಿನಾಳ‌ ಕುಟುಂಬದವರು ಆರೋಪಿಸಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ ಡಾ ರಾಮ್ ಅರಸಿದ್ದಿ ಹೇಳಿದ್ದಿಷ್ಟು

ಘಟನೆ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಡಾ ರಾಮ್ ಅರಸಿದ್ದಿ ಪ್ರತಿಕ್ರಿಯಿಸಿದ್ದು, ನಿನ್ನೆ ಇಬ್ಬರ ಬಂಧನವಾಗಿತ್ತು. ಇಂದು ಐದು ಜನರ ಬಂಧನವಾಗಿದೆ. ಏಳು ಜನರ ಬಂಧನವಾಗಿದ್ದು, ಇನ್ನು ಮೂರು ಜನರನ್ನ ಕೂಡಲೇ ಅರೆಸ್ಟ್ ಮಾಡುತ್ತೇವೆ. ಒಟ್ಟು 10 ಜನರ ಪ್ರಕರಣ ಮೇಲೆ ದೂರು ದಾಖಲಾಗಿತ್ತು. ಇಬ್ಬರು ಮಚ್ಚು ಬಳಸಿ‌ ಕೊಲೆ ಮಾಡಿದ್ದಾರೆ. ಕೊಲೆಗೆ ಬಳಸಿದ ಮಚ್ಚುಗಳನ್ನ ವಶಕ್ಕೆ ಪಡೆಯಲಾಗಿದೆ. ಇದರ ಹೊರತಾಗಿ ಪೊಲೀಸ್ ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.

ತಾವರಗೇರಾ ಪಟ್ಟಣದಲ್ಲಿ ಬಿಗಿ ಬಂದೋಬಸ್ತ ಕಲ್ಪಿಸಲಾಗಿದೆ. ಕೊಲೆಗೆ ಹಳೇ ವೈಷಮ್ಯ ಕಾರಣ ಎನ್ನಲಾಗಿದೆ. ಆದರೆ ಕೊಲೆ ಕೇಸ್​ನಲ್ಲಿ ಪೊಲೀಸರ ಲೋಪದೋಷ ಆಗಿಲ್ಲ. ಪೊಲೀಸ್ ಕಡೆಯಿಂದ ಯಾವ ನಿರ್ಲಕ್ಷ್ಯವಾಗಿಲ್ಲ. ಎರಡು ಕುಟುಂಬದ ನಡುವೆ ಕೇಸ್ ಕೊಟ್ಟಿದ್ದರು. ಕೇಸ್ ಕೂಡ ತಗೆದುಕೊಂಡಿದ್ದೇವೆ. ಅಲ್ಲದೆ ಕೆಲವರನ್ನ ಗಡಿಪಾರಿಗೆ ಸೂಚನೆ‌ ನೀಡಲಾಗಿತ್ತು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *