Kashmira Terrorist Attack: ಮಂಜುನಾಥ್‌ ರಾವ್ ಪಾರ್ಥಿವ ಶರೀರ ತಡರಾತ್ರಿ ಶಿವಮೊಗ್ಗಕ್ಕೆ

Kashmira Terrorist Attack: ಮಂಜುನಾಥ್‌ ರಾವ್ ಪಾರ್ಥಿವ ಶರೀರ ತಡರಾತ್ರಿ ಶಿವಮೊಗ್ಗಕ್ಕೆ

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಶಿವಮೊಗ್ಗ ಮೂಲದ ಮಂಜುನಾಥ್ ರಾವ್ ಸಾವನ್ನಪ್ಪಿದ್ದಾರೆ. ಪಾರ್ಥಿವ ಶರೀರವನ್ನು ಶಿವಮೊಗ್ಗಕ್ಕೆ ತರುವ ಪ್ರಕ್ರಿಯೆ ಪ್ರಾರಂಭವಾಗಿದೆ.

ನವದೆಹಲಿಯ ಕರ್ನಾಟಕ ಭವನದ ಸಿಬ್ಬಂದಿ ಮಂಜುನಾಥ್ ರಾವ್ ಪಾರ್ಥಿವ ಶರೀರವನ್ನು ಕಳಿಸುವ ಕುರಿತು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿದ್ದು, ಬುಧವಾರ ತಡರಾತ್ರಿ ಪಾರ್ಥಿವ ಶರೀರ ಬೆಂಗಳೂರು ನಗರಕ್ಕೆ ಬರಲಿದೆ.

ಬಳಿಕ ರಸ್ತೆ ಮೂಲಕ ಶಿವಮೊಗ್ಗಕ್ಕೆ ತಲುಪಲಿದೆ.
ಪಹಲ್ಗಾಮ್‌ ಉಗ್ರರ ದಾಳಿಯಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ಕರ್ನಾಟಕ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ರಾಜ್ಯ ಸರ್ಕಾರದಿಂದ ಹೆಚ್ಚಿನ ನೆರವಿನ ಅಗತ್ಯ ಇದೆ ಎನ್ನುವುದನ್ನು ಅರಿತು ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರನ್ನು ಕಾಶ್ಮೀರಕ್ಕೆ ಕಳಿಸಲಾಗಿದೆ. ಇಡೀ ಕಾರ್ಯಾಚರಣೆಯ ಮೇಲ್ವಿಚಾರಣೆಯನ್ನು ಅವರು ನೋಡಿಕೊಳ್ಳುತ್ತಿದ್ದಾರೆ.

46 ವರ್ಷದ ರಿಯಲ್‌ ಎಸ್ಟೇಟ್‌ ಉದ್ಯಮಿ ಮಂಜುನಾಥ್‌ ರಾವ್‌, ಪತ್ನಿ ಪಲ್ಲವಿ ಮತ್ತು ಪುತ್ರ ಅಭಿಜೇಯ ಜೊತೆ ಕಾಶ್ಮೀರ ಪ್ರವಾಸಕ್ಕೆ ಹೋಗಿದ್ದರು. ಮಂಗಳವಾರ ಸಂಜೆಯ ವೇಳೆಗೆ ಪಹಲ್ಗಾಮ್‌ನಲ್ಲಿ ಪತ್ನಿ, ಪುತ್ರರ ಮುಂದೆಯೇ ಉಗ್ರರು ಮಂಜುನಾಥ್ ರಾವ್ ಹತ್ಯೆ ಮಾಡಿದ್ದರು. ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ, ಶಾಸಕ ಎಸ್‌. ಎನ್. ಚನ್ನಬಸಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮುಂತಾದವರು ಮಂಜುನಾಥ್‌ ರಾವ್‌ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.

ಪಹಲ್ಗಾಮ್‌ ಉಗ್ರರ ದಾಳಿಯಲ್ಲಿ ಮೃತಪಟ್ಟ ಎಲ್ಲಾ ಪ್ರವಾಸಿಗರ ಪಾರ್ಥಿವ ಶರೀರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ರೀನಗರದಲ್ಲಿ ಅಂತಿಮ ನಮನ ಸಲ್ಲಿಕೆ ಮಾಡಿದ್ದಾರೆ. ವಿಶೇಷ ವಿಮಾನದ ಮೂಲಕ ಪಹಲ್ಗಾಮ್‌ ದಾಳಿಯಲ್ಲಿ ಮೃತಪಟ್ಟ ಕನ್ನಡಿಗರ ಶವಗಳನ್ನು ಬೆಂಗಳೂರಿಗೆ ತರಲಾಗುತ್ತದೆ. ಮಧ್ಯರಾತ್ರಿ 1 ಗಂಟೆಗೆ ವಿಮಾನ ಬೆಂಗಳೂರು ನಗರ ತಲುಪಲಿದೆ ಎಂದು ಅಂದಾಜಿಸಲಾಗಿದೆ.

ಬೆಂಗಳೂರು ನಗರದಿಂದ ರಸ್ತೆ ಮಾರ್ಗದ ಮೂಲಕ ಮಂಜುನಾಥ್ ರಾವ್ ಪಾರ್ಥಿವ ಶರೀರವನ್ನು ಕುಟುಂಬ ಸದಸ್ಯರ ಜೊತೆ ಕಳಿಸಿಕೊಡಲಾಗುತ್ತದೆ. ಇದಕ್ಕಾಗಿ ಅಗತ್ಯವಿರುವ ವ್ಯವಸ್ಥೆಯನ್ನು ಮಾಡಲಾಗಿದ್ದು, ಶಿವಮೊಗ್ಗ ಜಿಲ್ಲಾಧಿಕಾರಿಗಳು ರಾಜ್ಯದ ಹಿರಿಯ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ.

ಮಂಜುನಾಥ್ ರಾವ್ ನಿವಾಸಕ್ಕೆ ಭೇಟಿ ನೀಡಿದ್ದ ಸಂಸದ ಬಿ. ವೈ. ರಾಘವೇಂದ್ರ ಸಾಂತ್ವನ ಹೇಳಿದ್ದರು. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ ಇಂದು ನಡೆದ ಭೀಕರ ಭಯೋತ್ಪಾದಕರ ದಾಳಿಯಲ್ಲಿ ಕುಟುಂಬದೊಂದಿಗೆ ಪ್ರವಾಸಕ್ಕೆ ತೆರಳಿದ್ದ ಶಿವಮೊಗ್ಗದ ವಿಜಯನಗರ ನಿವಾಸಿ ಮಂಜುನಾಥ್ ಅವರು ಗುಂಡೇಟಿಗೆ ಬಲಿಯಾದ ವಿಷಯ ತೀವ್ರ ವಿಷಾದನೀಯ ಹಾಗೂ ದುಃಖಕರ ಎಂದು ಪೋಸ್ಟ್ ಹಾಕಿದ್ದಾರೆ.

ವಿಷಯ ತಿಳಿದ ಮರುಕ್ಷಣ ಮೃತ ಮಂಜುನಾಥ್ ಅವರ ನಿವಾಸಕ್ಕೆ ತೆರಳಿ ಅವರ ಕುಟುಂಬ ವರ್ಗದವರಿಗೆ ಹಾಗೂ ಸಂಬಂಧಿಕರಿಗೆ ಸಾಂತ್ವನ ಹೇಳಿ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಧೈರ್ಯದ ಮಾತುಗಳನ್ನು ತುಂಬಲಾಯಿತು.
ಈಗಾಗಲೇ ಕೇಂದ್ರ ಸರ್ಕಾರ ಈ ಹೀನ ಕೃತ್ಯ ಎಸಗಿದ ಭಯೋತ್ಪಾದಕರ ತಂಡದ ಹೆಡೆಮುರಿ ಕಟ್ಟಲು, ದಾಳಿ ಮಾಡಿದ ಉಗ್ರ ಸಂಘಟನೆಯ ಸದ್ದಡಗಿಸಲು, ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನಿಸಲು ಯುದ್ಧೋಪಾದಿಯಲ್ಲಿ ಕ್ರಮಕ್ಕೆ ಮುಂದಾಗಿದೆ.

ಈಗಾಗಲೇ ಕೇಂದ್ರ ಸರ್ಕಾರ ಈ ಹೀನ ಕೃತ್ಯ ಎಸಗಿದ ಭಯೋತ್ಪಾದಕರ ತಂಡದ ಹೆಡೆಮುರಿ ಕಟ್ಟಲು, ದಾಳಿ ಮಾಡಿದ ಉಗ್ರ ಸಂಘಟನೆಯ ಸದ್ದಡಗಿಸಲು, ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನಿಸಲು ಯುದ್ಧೋಪಾದಿಯಲ್ಲಿ ಕ್ರಮಕ್ಕೆ ಮುಂದಾಗಿದೆ.

ಇಂತಹ ಉಗ್ರ ದಾಳಿಯನ್ನು ತೀವ್ರವಾಗಿ ಖಂಡಿಸುತ್ತಾ, ಉಗ್ರ ದಾಳಿಗೆ ತನ್ನ ಅಮೂಲ್ಯ ಪ್ರಾಣ ಬಿಟ್ಟ ಮಂಜುನಾಥ್ ಅವರ ಅತ್ಮಕ್ಕೆ ಸದ್ಗತಿ ಕೊರುತ್ತಾ, ಅವರ ಕುಟುಂಬ ವರ್ಗದವರಿಗೆ ಹಾಗೂ ಸಂಬಂಧಿಕರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ವಿಶೇಷವಾಗಿ ಪ್ರಾರ್ಥಿಸುತ್ತೇನೆ ಎಂದು ಸಂಸದರು ಹೇಳಿದ್ದಾರೆ.

Leave a Reply

Your email address will not be published. Required fields are marked *