ರೈತರ ಅಡಿಕೆ ಗೋಡೌನ್ ಮೇಲೆ ಜಿಎಸ್ ಟಿ ಅಧಿಕಾರಿಗಳ ದಾಳಿ
ಹೊಳೆಹೊನ್ನೂರು ಸಮೀಪದ ಅರಹತೊಳಲು- ಕೈಮರದಲ್ಲಿ ಅಡಿಕೆ ಗೋಡೌನ್ ಮೇಲೆ ಜಿಎಸ್ಟಿ ಅಧಿಕಾರಿಗಳು ದಾಳಿ ನಡೆಸಿ ಸುಮಾರು 23 ಕ್ವಿಂಟಾಲ್ ಅಡಕೆ ಮುಟ್ಟುಗೋಲು ಹಾಕಿಕೊಂಡು ತೆರಿಗೆ ಕಟ್ಟುವಂತೆ ರೈತರಿಗೆ ನೋಟೀಸ್ ನೀಡಿದ್ದಾರೆ.
ಚಂದ್ರಪ್ಪ ಎಂಬುವವರಿಗೆ ಸೇರಿದ ಗೋಡೌನ್ನಲ್ಲಿ ಸುಮಾರು 65 ಕ್ವಿಂಟಾಲ್ ಅಡಿಕೆ ದಾಸ್ತಾನು ಮಾಡಲಾಗಿದ್ದು, ಎಮ್ಮೆಹಟ್ಟಿ ಗ್ರಾಮದ ಕೋಟೇಶ್ ಎಂಬುವರಿಗೆ ಸೇರಿದ 23 ಕ್ವಿಂಟಾಲ್ ಅಡಿಕೆಯನ್ನು ಸೋಮವಾರ ಸಂಜೆ ವೇಳೆಯಲ್ಲಿ ಮಾರಾಟ ಮಾಡಲು ಕ್ಯಾಂಟರ್ನಲ್ಲಿ ತುಂಬಿಸಲಾಗಿತ್ತು.
ಆ ಸಮಯಕ್ಕೆ ಖಚಿತ ಮಾಹಿತಿ ಮೇರೆಗೆ ಬಂದ ಅಧಿಕಾರಿಗಳು ರೈತರ ಗೋಡೌನ್ ಹಾಗೂ ಕ್ಯಾಂಟರ್ ಅನ್ನು ತಡೆಹಿಡಿದು ಮುಟ್ಟುಗೋಲು ಹಾಕಿಕೊಂಡು ಹೋಗಿದ್ದಾರೆ.
ಇದರಿಂದ ರೊಚ್ಚಿಗೆದ್ದ ಕೆಲವು ರೈತರು, ರೈತರು ಬೆಳೆದ ಬೆಳೆಗೆ ಇದುವರೆಗೂ ಯಾವುದೇ ಸರ್ಕಾರ ತೆರಿಗೆ ಹಾಕಿಲ್ಲ. ರೈತರು ಸಾಲಸೋಲ ಮಾಡಿ ಬೆಳೆದ ಬೆಳೆಗಳಲ್ಲಿ ಜೀವನ ನಡೆಸುವುದೇ ಕಷ್ಟವಾಗಿದೆ. ರೈತರು ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ರೀತಿ ರೈತರು ಬೆಳೆದ ಬೆಳೆಗೆ ಅಧಿ ಕಾರಿಗಳು ಏಕಾಏಕಿ ಬಂದು ತೆರಿಗೆ ವಿಧಿಸುತ್ತಿದ್ದಾರೆ. ಇಲ್ಲಿ ಯಾರು ಕೂಡ ವ್ಯಾಪಾರದಾರರಲ್ಲ. ರೈತರು ಬೆಳೆದ ಬೆಳೆಗೆ ಮನೆಯಲ್ಲಿ ಸ್ಥಳಾವಕಾಶವಿಲ್ಲದೆ ಇರುವುದರಿಂದ ಬಾಡಿಗೆ ಗೋಡೌನ್ನಲ್ಲಿ ಅಡಿಕೆ ದಾಸ್ತಾನು ಇಡಲಾಗಿದೆಯೇ ಹೊರತು ಸರ್ಕಾರದ ಕಣ್ಣುತಪ್ಪಿಸಿ ವ್ಯಾಪಾರ ಮಾಡುವ ಯಾವುದೇ ಉದ್ದೇಶವಿಲ್ಲ. ಇದೇ ರೀತಿ ದಾಳಿ ಮುಂದುವರಿದರೆ ರೈತರು ಒಗ್ಗಟ್ಟಾಗಿ ಸರ್ಕಾರದ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯ ಎಂದು ಎಚ್ಚರಿಸಿದರು.