ಹಿಂದುತ್ವದ ಬಗ್ಗೆ ಮಾತನಾಡಿದವರನ್ನೆಲ್ಲ ಬಿಜೆಪಿ ಮುಗಿಸುತ್ತಿದೆ : ಶಾಸಕ ಬೇಳೂರು ಗೋಪಾಲಕೃಷ್ಣ
ಸಾಗರ: ಹಿಂದುತ್ವದ ಬಗ್ಗೆ ಯಾರು ಮಾತನಾಡಿದ್ದಾರೋ ಅವರನ್ನೆಲ್ಲ ಬಿಜೆಪಿ ಮುಗಿಸಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ.
ಮಾಧ್ಯಮಗಳೆದುರು ಮಾತನಾಡಿದ ಅವರು, ಉತ್ತರ ಕನ್ನಡದ ಮಾಜಿ ಸಂಸದ ಅನಂತ್ಕುಮಾರ್ ಹೆಗಡೆ, ಶಿವಮೊಗ್ಗದ ಕೆ ಎಸ್ ಈಶ್ವರಪ್ಪ, ಮೈಸೂರಿನ ಪ್ರತಾಪ್ ಸಿಂಹನ್ನು ಈವರೆಗೆ ಮುಗಿಸಿದ್ದರು. ಈಗ ಆ ಸಾಲಿಗೆ ಶಾಸಕ ಬಸವನಗೌಡ ಪಾಟೀಲ್ ಸೇರಿದ್ದಾರೆ ಎಂದು ಹೇಳಿದ್ದಾರೆ.
ಹಿಂದೂ ಹುಲಿಯನ್ನು ಬಿಜೆಪಿಯ ರಾಷ್ಟ್ರೀಯ ಮತ್ತು ರಾಜ್ಯಾಧ್ಯಕ್ಷರು ಬೋನಿನಲ್ಲಿ ಹಾಕಿದ್ದಾರೆ. ಯತ್ನಾಳ್ ಯಡಿಯೂರಪ್ಪ ಮತ್ತು ಅವರ ಮಕ್ಕಳನ್ನು ಬೈದಿದ್ದಾರೆ. ಹೀಗೆ ಹಿಂದುತ್ವದ ಬಗ್ಗೆ ಮಾತನಾಡುವ ಬಿಜೆಪಿಯ ಬಹುತೇಕರನ್ನು ಆ ಪಕ್ಷವೇ ರಾಜಕೀಯವಾಗಿ ಮುಗಿಸಿದೆ. ಮುಂದೆ ಸಿಟಿ ರವಿಯನ್ನು ಕೂಡ ಮುಗಿಸಬಹುದು ಎಂದು ಶಂಕೆ ವ್ಯಕ್ತಪಡಿಸಿದರು.
ಈಶ್ವರಪ್ಪನವರು ಏನು ತಪ್ಪು ಮಾಡಿದ್ದರು, ಟಿಕೆಟ್ ಕೇಳಿದೆ ತಪ್ಪಾ ಅವರದ್ದು? ಇಡೀ ಜಿಲ್ಲೆಯಲ್ಲಿ ಹಿಂದುತ್ವ ಪ್ರತಿಪಾದನೆ ಮಾಡುತ್ತಿದ್ದ ಈಶ್ವರಪ್ಪನವರನ್ನೇ ಹೊರಹಾಕಿದ ಮೇಲೆ ಯತ್ನಾಳರನ್ನು ಬಿಡುತ್ತಾರಾ?. ರೇಣುಕಾಚಾರ್ಯ ನಮ್ಮನ್ನೆಲ್ಲ ಹೈದರಾಬಾದಿಗ್ಗೆ ಕರೆದುಕೊಂಡು ಹೋದಾಗ ಅಪ್ಪ ಮಕ್ಕಳ ಚಡ್ಡಿ ಬಿಚ್ಚುತ್ತೇನೆ ಎಂದಿದ್ದರು. ಅಂದು ಅಷ್ಟೆಲ್ಲ ಯಡ್ಯೂರಪ್ಪ ಮತ್ತು ಅವರ ಮಕ್ಕಳನ್ನು ಬೈದಿದ್ದ ರೇಣುಕಾಚಾರ್ಯ ಇಂದು ಬಿಎಸ್ವೈ ಮಾನಸಪುತ್ರರಾಗಿದ್ದಾರೆ. ಯತ್ನಾಳ್ಗೆ ಪಂಚಮಸಾಲಿ ಸಮಾಜವಿದೆ. ಅವರ ಪರವಾಗಿ ಹೋರಾಟ ಮಾಡುವುದಾಗಿ ಪಂಚಮಸಾಲಿ ಗುರುಗಳು ಹೇಳಿಕೆ ಕೊಟ್ಟಿದ್ದಾರೆ ಎಂದರು.
ಯತ್ನಾಳ್ ಪಂಚಮಸಾಲಿ ಮುಖಂಡನಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗಿಂತ ಬಿಜೆಪಿಗೆ ಹೆಚ್ಚು ಹೊಡೆತ ಬೀಳುತ್ತದೆ. ಬಿಜೆಪಿ ಈ ರೀತಿ ಗೊಂದಲದ ಗೂಡಾಗಿದೆ ನಮಗೇನು ಅದು ಸಮಸ್ಯೆ ಅಲ್ಲ. ನಾವು ಕಳೆದ ವಾರ ೧೮ ಶಾಸಕರನ್ನು ಅಮಾನತು ಮಾಡಿದ್ದಕ್ಕೆ ದೊಡ್ಡ ವಿಷಯ ಮಾಡಿದಿರಿ. ಈಗ ಯತ್ನಾಳರನ್ನು ಹೊರ ಹಾಕಿದ್ದಾರಲ್ಲ, ಯೋಗಿ ಆದಿತ್ಯನಾಥರಂತಹವರನ್ನು ಕೂಡ ಇವರು ತೆಗೆಯುತ್ತಾರೆ. ರಾಹುಲ್ ಗಾಂಧಿಯನ್ನು ಹೊಗಳಿದ್ದು ನೋಡಿದರೆ ಯೋಗಿ ಆದಿತ್ಯನಾಥ ಅವರನ್ನು ಬಿಜೆಪಿ ಹೊರಹಾಕುವ ಸಾಧ್ಯತೆಯಿದೆ ಎಂದರು.
ಈಗ ಬಿ ವೈ ವಿಜಯೇಂದ್ರ ಗೆದ್ದಂತೆ ಎಂದು ಭಾವಿಸಬಾರದು. ಅವರಿಗೆ ಪವರ್ ಇದೆ. ಯಡಿಯೂರಪ್ಪ ಮತ್ತು ಅವರ ಮಕ್ಕಳ ಬಳಿ ೩.೫೦೦ ಕೋಟಿ ಇದೆ ಎಂದು ಯತ್ನಾಳ್ ಹೇಳಿದ್ದಾರೆ. ಹಡಬೆ ದುಡ್ಡು ಇದೆ ಎಂದಿದ್ದಾರೆ. ಯತ್ನಾಳ್ ಪಕ್ಷದಿಂದ ಉಚ್ಛಾಟಿತರಾದರೂ ಅವರ ಎಂಎಲ್ಎ ಇರುತ್ತದೆ ಎಂದ ಬೇಳೂರು, ಯಡ್ಯೂರಪ್ಪ ಮತ್ತು ಅವರ ಮಕ್ಕಳು ನನ್ನನ್ನು ಮುಗಿಸಲಿಕ್ಕೆ ಹೊರಟಿದ್ದರು. ಯಾರನ್ನೂ ಯಾರೂ ಮುಗಿಸಲು ಸಾಧ್ಯವಿಲ್ಲ. ಒಂದಲ್ಲ ಒಂದು ದಿವಸ ಇವರು ಹೊರಗೆ ಹೋಗೆಹೋಗುತ್ತಾರೆ ಎಂದರು.
ಕಾಂಗ್ರೆಸ್ ಪಕ್ಷದಲ್ಲೂ ಕೂಡ ಗೊಂದಲವಿದೆ. ಕಾಂಗ್ರೆಸ್ ಹೈಕಮಾಂಡ್ ನಮ್ಮಲ್ಲಿರೋ ಗೊಂದಲವನ್ನು ಹೋಗಲಾಡಿಸಬೇಕು. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತದೆ. ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ಮುಸ್ಲಿಮರಿಗೆ ಮೀಸಲಾತಿ ವಿಷಯದಲ್ಲಿ ಬಿಜೆಪಿ ಹೋರಾಟ ಸರಿಯಲ್ಲ. ೩೫ ಲಕ್ಷ ಬಡ ಕುಟುಂಬಗಳಿಗೆ ಆಹಾರ ಕೊಡುವುದಾಗಿ ಮೋದಿ ಹೇಳಿದ್ದಾರೆ. ಇದಕ್ಕೆ ಬಿಜಪೆಇ ಬಹಿಷ್ಕಾರ ಹಾಕುತ್ತದೆಯೇ, ಸ್ಟ್ರೈಕ್ ಮಾಡುವುದೇ. ಮುಸ್ಲಿಮರಿಗೆ ನಾವು ಕೊಟ್ಟಿರೋದು ಕೇವಲ ಒಂದು ಪರ್ಸೆಂಟ್ ಮಾತ್ರ. ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲಾ ಧರ್ಮದ ಮಕ್ಕಳು ಶಿಕ್ಷಣ ಪಡೆಯಬೇಕು ಎಂದು ಮೋದಿ ಹೇಳಿದ್ದಾರಲ್ಲ. ಇದು ಬಿಜೆಪಿಯವರಿಗೆ ಮರೆತು ಹೋಗಿದೆಯೇ – ಬೇಳೂರು ಗೋಪಾಲಕೃಷ್ಣ