ಜಾನುವಾರು ಕಳ್ಳರ ಹೆಡೆಮುರಿ ಕಟ್ಟಿದ ಬಂಕಾಪುರ ಪೊಲೀಸರು – ಶಿಕಾರಿಪುರದ ಇಬ್ಬರ ಬಂಧನ
ಬಂಕಾಪುರ : ಜಾನುವಾರುಗಳನ್ನು ಕಳ್ಳತನಗೈಯುತಿದ್ದ ನಟೋರಿಯಸ್ ಗ್ಯಾಂಗ್ ನ್ನು ಬಂಕಾಪುರ ಠಾಣೆ ಪಿಎಸ್ಐ ನಿಂಗರಾಜ್ ಕೆ ವೈ ನೇತ್ರತ್ವದ ಸಿಬ್ಬಂದಿಗಳು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕವಾಸಪೂರ ಗ್ರಾಮದ ದಾದಾಫೀರ್ (35) ಅಬ್ದುಲ್ ಸತ್ತಾರ (38) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ ಕೃತ್ಯಕ್ಕೆ ಉಪಯೋಗಿಸಿದ್ದ ಒಂದು ಬುಲೆರೋ ಪಿಕ್ ಅಪ್ ವಾಹನ ಮತ್ತು ಕಳ್ಳತನ ಮಾಡಿದ್ದ ಮೂರು ಎತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇವೆಲ್ಲವುಗಳ ಒಟ್ಟು ಮೌಲ್ಯ ರೂ. 7,50,000/- ಎಂದು ಅಂದಾಜಿಸಲಾಗಿದೆ.
ದಿನಾಂಕ 22-2-2025ರಂದು ರಾತ್ರಿ, ಕಲ್ಯಾಣ ಗ್ರಾಮದ ಮನೆಯೊಂದರ ಶೆಡ್ನಲ್ಲಿ ಕಟ್ಟಿದ್ದ ಒಂದು ಎತ್ತನ್ನು, ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ದಾಖಲಾಗಿದ್ದ ಪ್ರಕರಣದ ತನಿಖೆಯಲ್ಲಿದ್ದ, ಬಂಕಾಪುರ ಠಾಣೆ ಪೊಲೀಸರಿಗೆ, ದಿನಾಂಕ 26-2-2025ರಂದು ಬಾಡ ಗ್ರಾಮದ, ಅರಮನೆ ಹತ್ತಿರ, ನಂಬರ್ ಪ್ಲೇಟ್ ಇಲ್ಲದೆ, ಒಂದು ಎತ್ತನ್ನು ತುಂಬಿಕೊಂಡು ಬಂದ ಬುಲೆರೋ ವಾಹನ ಅನುಮಾನಾಸ್ಪದವಾಗಿ ಕಂಡು ಬರುತ್ತದೆ. ತಕ್ಷಣ ವಾಹನದಲ್ಲಿದ್ದವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಎತ್ತುಗಳ ಕಳ್ಳನನದ ಬಗ್ಗೆ ಒಪ್ಪಿಕೊಂಡಿದ್ದಾರೆ.
ಅವರುಗಳು ನೀಡಿದ ಮಾಹಿತಿ ಮೇಲೆ ಕಲ್ಯಾಣ ಗ್ರಾಮದಲ್ಲಿ ಕದ್ದಿದ್ದ ಒಂದು ಎತ್ತು ಮತ್ತು ಅಗಡಿ ಗ್ರಾಮದಲ್ಲಿ ಕದ್ದಿದ್ದಎರಡು ಎತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು ತಲೆಮರೆಸಿಕೊಂಡಿರುವ, ಮತ್ತೆ ಮೂವರ ಪತ್ತೆಕಾರ್ಯ ಮುಂದುವರೆದಿದೆ.
ಹಾವೇರಿ ಜಿಲ್ಲೆ ಎಸ್ಪಿ ಅಂಶುಕುಮಾರ್, ಅಡಿಷನಲ್ ಎಸ್ಪಿ ಲಕ್ಷ್ಮಣ ವೈ. ಶಿರಕೋಳ ಮತ್ತು ಶಿಗ್ಗಾಂವಿ ಉಪವಿಭಾಗದ ಡಿವೈಎಸ್ಪಿ ಕೆ.ವಿ. ಗುರುಶಾಂತಪ್ಪ ರವರುಗಳ ಮಾರ್ಗದರ್ಶನ, ಶಿಗ್ಗಾವಿ ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್ ಸುರೇಶ್ ಜಿ.ಕುಂಬಾರ್ ರವರ ಸಾರಥ್ಯದಲ್ಲಿ, ನಡೆದ ಕಾರ್ಯಾಚರಣೆಯಲ್ಲಿ ಬಂಕಾಪುರ ಠಾಣೆ ಸಬ್ ಇನ್ಸ್ ಪೆಕ್ಟರ್ ನಿಂಗರಾಜ್ ಕೆ ವೈ ಮತ್ತು ಎಸ್.ಎಂ. ವನಹಳ್ಳಿ ಹಾಗೂ ಸಿಬ್ಬಂದಿಯವರಾದ ಹೆಚ್ ಎ.ಕೆ. ನದಾಫ್, ಪಿಸಿರವರಾದ ವೆಂಕಟೇಶ ಲಮಾಣಿ, ಗೋವಿಂದ ಲಮಾಣಿ, ಬೀರಪ್ಪ ಕಳ್ಳಿಮನಿ ಮತ್ತು ಜಬೀವುಲ್ಲಾ ದೊಡ್ಡಮನಿ ಪಾಲ್ಗೊಂಡಿದ್ದರು.