ಸಹೋದರಿಯ ಪ್ರೀತಿಗೆ ಅಡ್ಡಿಯಾದ ತಂದೆಯನ್ನು ಸುತ್ತಿಗೆಯಲ್ಲಿ ಹೊಡೆದು ಹತ್ಯೆಗೈದ ಮಗ
ಸಹೋದರಿಯ ಪ್ರೀತಿಗೆ ಒಪ್ಪದ ತಂದೆಯನ್ನು ಮಗನೇ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಆಶ್ರಯ ಬಡಾವಣೆಯಲ್ಲಿ ನಡೆದಿದೆ.
ಸಂಬಂಧಿಕರೊಬ್ಬರ ಮಗನನ್ನು ಪ್ರೀತಿಸುತಿದ್ದ ಮಗಳಿಗೆ ಹಿಂಸೆ ನೀಡುತ್ತಿದ್ದ ತಂದೆಯನ್ನು ಮಗ ಕೊಲೆ ಮಾಡಿದ್ದಾನೆ. ಸಹೋದರಿಯ ಪ್ರೀತಿಯನ್ನು ತಂದೆಯ ಬಳಿ ಒಪ್ಪಿಸಲು ಹೋದ ಮಗನ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ.
ಜಗಳದಲ್ಲಿ ಶಿಕಾರಿಪುರ ಆಶ್ರಯ ಬಡಾವಣೆ ನಿವಾಸಿ ಮುಸ್ತಾಫ ಬೇಗ್(42) ಸಾವನ್ನಪ್ಪಿದ್ದಾನೆ.ಶಾಹಿದ್ ಬೇಗ್ (22) ಕೊಲೆಗೈದ ಆರೋಪಿಯಾಗಿದ್ದಾನೆ.
ಭಾನುವಾರ ಮಧ್ಯಾಹ್ನ ಊಟ ಮಾಡುವ ವೇಳೆ ತಂದೆ ಮಗನ ನಡುವೆ ಜಗಳ ನಡೆದು ಮಗ ಅಪ್ಪನನ್ನ ಸುತ್ತಿಗೆಯಲ್ಲಿ ಹೊಡೆದು ಕೊಲೆ ಮಾಡಿದ್ದಾನೆ. ಸಹೋದರಿಯ ಪ್ರೀತಿಯ ವಿಚಾರದಲ್ಲಿ ಅಪ್ಪನ ಕಿರುಕುಳ ಹೆಚ್ಚಾದ ಪರಿಣಾಮ ಈ ಘಟನೆ ನಡೆದಿದೆ. ಅಪ್ಪ ಅಡುಗೆ ಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ.
ಶಿಕಾರಿಪುರ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಡೆದಿದ್ದೇನು..!!??
ತಂದೆ ಮುಸ್ತಫ ಬೇಗ್ ಕಾಂರ್ಪೆಂಟರ್ ಕೆಲಸ ಮಾಡಿಕೊಂಡಿದ್ದು 23 ವರ್ಷದ ಹಿಂದೆ ಉಮ್ಮೇ ಸಲ್ಮಾ ಎಂಬುವರೊಂದಿಗೆ ಮುಸ್ತಫಾ ಬೇಗ್ ಮದುವೆಯಾಗಿದ್ದು ಶಾಹೀದ್ ಬೇಗ್ ಮತ್ತು ಮತ್ತೊರ್ವ ಮಗಳಿದ್ದು ಇಬ್ಬರು ಮಕ್ಕಳೊಂದಿಗೆ ಚೊಕ್ಕ ಸಂಸಾರ ನಡೆಸಿಕೊಂಡು ಹೋಗುತ್ತಿದ್ದರು.
ಮಗಳು ಸಂಬಂಧಿಕರೋರ್ವರ ಮಗನನ್ನು ಪ್ರೀತಿಸುತ್ತಿದ್ದ ವಿಷಯ ಮುಸ್ತಫಾಗೆ ಇಷ್ಟಿರಲಿಲ್ಲ. ಮಗಳ ಪ್ರೀತಿಯ ವಿಷಯ ಗೊತ್ತಾಗುತ್ತಿದ್ದಂತೆ ಮದ್ಯ ಸೇವಿಸಿ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಹೆಂಡತಿ ಮತ್ತು ಮಗಳ ಶೀಲದ ಮೇಲೆ ಅನುಮಾನ ಪಡುತ್ತಿದ್ದ ಎಂದು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ಮನೆಯ ಮರ್ಯಾದೆ ಹೋದರೆ ಮಗಳನ್ನ ಬೇರೆ ಯಾರೂ ಮದುವೆಯಾಗೊಲ್ಲ ಎಂದು ಮಗ ಶಾಹೀದ್ ಅಪ್ಪನನ್ನ ಜಗಳ ತೆಗೆದಾಗಲೆಲ್ಲ ಸಮಧಾನಪಡಿಸುತ್ತಿದ್ದನು.
ಆದರೆ ಮುಸ್ತಫಾನ ಹಿಂಸೆ ವಿಪರೀತಗೊಂಡ ಹಿನ್ನಲೆಯಲ್ಲಿ ಮಗಳು ಹೇಳದೆ ಕೇಳದೆ ಮನೆ ಬಿಟ್ಟು ಹೋಗಿದ್ದು, ಅವಳನ್ನ ತಾಯಿ ಹುಡುಕಿ ಬೆಂಗಳೂರಿನಿಂದ ವಾಪಾಸ್ ಕರೆದುಕೊಂಡು ಬಂದಿದ್ದರು.
ನಂತರ ತಾಯಿ ಮಗನಿಗೆ ಕರೆಮಾಡಿ ತಂದೆ ಎಷ್ಟು ಹೇಳಿದರೂ ಒಪ್ಪುತ್ತಿಲ್ಲ. ಪೊಲೀಸ್ ದೂರು ಕೊಡೋಣ ಎಂದು ತಿಳಿಸಿದ್ದಾಳೆ. ದೂರು ಕೊಟ್ಟರೆ ಮರ್ಯಾದೆ ಹೋಗುತ್ತದೆ. ನಾನು ಅಪ್ಪನ ಬಳಿ ಮಾತನಾಡುತ್ತೇನೆಂದು ಭರವಸೆ ನೀಡಿ ಮದ್ಯಾಹ್ನದ ಊಟದ ವೇಳೆಗೆ ಆಶ್ರಯ ಬಡಾವಣೆಯಲ್ಲಿರುವ ಮನೆಗೆ ಹೋಗಿ ಅಪ್ಪನೊಂದಿಗೆ ಮಾತನಾಡುತ್ತಾನೆ.
ಮಾತನಾಡಿದರೂ ಒಪ್ಪದ ಹಿನ್ನೆಲೆಯಲ್ಲಿ ಮಗನನ್ನು ತಂದೆ ಹೊಡೆಯಲು ಬಂದಿದ್ದು ಮಗ ಸುತ್ತಿಗೆಯಿಂದ ತಂದೆಯನ್ನ ಹೊಡೆದು ಕೊಲೆ ಮಾಡಿರುವುದಾಗಿ ಎಫ್ಐಆರ್ ನಲ್ಲಿ ದಾಖಲಾಗಿದೆ.