ಆತ್ಮ ಶುದ್ಧೀಕರಣಕ್ಕಾಗಿ ಇರುವುದೇ ಧರ್ಮ – ವಿಧಾನ ಪರಿಷತ್ ಸದಸ್ಯೆ ಬಲ್ಕೀಸ್ ಭಾನು


ರಿಪ್ಪನ್ಪೇಟೆ : ನಮ್ಮ ಆತ್ಮ ಶುದ್ದೀಕರಣವಿದ್ದರೆ ಮಾತ್ರ ಅದು ಧರ್ಮವಾಗಿರುತ್ತದೆ, ಆಯಾ ಧರ್ಮದ ಸಾರವನ್ನು ಅರ್ಥ ಮಾಡಿಕೊಂಡು ಆ ಪ್ರಕಾರ ಜೀವನ ನಡೆಸಿದಲ್ಲಿ ಎಲ್ಲರೂ ಸಂತಸದಿಂದ ಬದುಕಿ ಬಾಳಬಹುದು ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕೀಸ್ ಭಾನು ಹೇಳಿದರು.
ಪಟ್ಟಣದಲ್ಲಿ ಈದ್ ಮಿಲಾದ್ ಅಂಗವಾಗಿ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ವತಿಯಿಂದ ಆಯೋಜಿಸಿದ್ದ ಸೌಹಾರ್ಧ ಸಂಗಮ ಹಾಗೂ ಶಾಸಕರುಗಳಿಗೆ ಸನ್ಮಾನ ಕಾರ್ಯಕ್ರಮವನ್ನುದೇಶಿಸಿ ಅವರು ಮಾತನಾಡಿ ದೇವರ ನಾಮದಿಂದ ನಮ್ಮ ಮನಸ್ಸು ಹತೋಟಿಯಲ್ಲಿರುತ್ತದೆ ಆ ನಿಟ್ಟಿನಲ್ಲಿ ಪ್ರವಾದಿಯವರು ಹಾಕಿಕೊಟ್ಟ ದಾರಿಯಲ್ಲಿ ನಡೆದರೆ ಬಾಳು ಬಂಗಾರವಾಗುತ್ತದೆ ಎಂದರು.
ಇತ್ತೀಚೆಗೆ ಕೆಲವು ಕೋಮು ಶಕ್ತಿಗಳು ದೇಶದ ಜನರ ನಡುವಿನ ಭಾಂದವ್ಯಗಳನ್ನು ಕೆಡಿಸಲು ಕುರಾನ್ ಗ್ರಂಥದ ಸೂಕ್ತಗಳ ಬಗ್ಗೆ ಅಪಪ್ರಚಾರಕ್ಕೆ ಮುಂದಾಗಿದ್ದಾರೆ ಅಂತಹ ಪಟ್ಟಭದ್ರ ಶಕ್ತಿಗಳ ವಿರುದ್ದ ಭಾರತೀಯರೆಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕಾಗಿದೆ ಎಂದರು.
ಇಸ್ಲಾಂ ನಲ್ಲಿರುವ ಐದು ನಿಯಮಗಳನ್ನು ಸವಿವರವಾಗಿ ವಿವರಿಸಿ ಹೇಳಿದ ಅವರು ಅಂತಹ ಸುಂದರ ನಿಯಮಗಳನ್ನು ಪಾಲಿಸದೇ ಇರುವಂತವರು ಶತ ಮೂರ್ಖರಾಗಿದ್ದಾರೆ ಎಂದು ಹೇಳಿ ಇಂದಿನ ಈ ಸೌಹಾರ್ಧ ಸಂಗಮದ ಮೂಲಕ ಜಗತ್ತಿಗೆ ಉತ್ತಮ ಸಂದೇಶ ಸಾರಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ,ವಿಧಾನ ಪರಿಷತ್ ಸದಸ್ಯೆ ಬಲ್ಕೀಷ್ ಭಾನು ಹಾಗೂ ರಾಜ್ಯ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡ ರವರನ್ನು ಜುಮ್ಮಾ ಮಸೀದಿ ಹಾಗೂ ಈದ್ ಮಿಲಾದ್ ಸಮಿತಿ ವತಿಯಿಂದ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷ ಹಸನಬ್ಬ ಬಾವಬ್ಯಾರಿ ವಹಿಸಿದ್ದರು.
ಈ ಸಂಧರ್ಭದಲ್ಲಿ ಈದ್ ಮಿಲಾದ್ ಸಮಿತಿ ಅಧ್ಯಕ್ಷ ನಾಸೀರ್ ಹಮೀದ್ ಸಾಬ್ , ತೀರ್ಥಹಳ್ಳಿ ಪಪಂ ಅಧ್ಯಕ್ಷ ರಹಮತುಲ್ಲಾ ಅಸಾದಿ, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ , ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್ ಎ ಚಾಬುಸಾಬ್ , ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮೀರ್ ಹಂಜಾ , ಕೆಡಿಪಿ ಸದಸ್ಯರಾದ ಆಸೀಫ಼್ ಭಾಷಾ , ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ್ , ಉಪಾಧ್ಯಕ್ಷ ಸುಧೀಂದ್ರ ಪೂಜಾರಿ , ಕೆಂಚನಾಲ ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರೀಫ್ , ಮುಖಂಡರಾದ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಸಾಧಿಕ್ ಕಚ್ಚಿಗೆಬೈಲು, ಶಂಶುದ್ದೀನ್ ಆರ್ ಎಸ್ , ಮಹಮ್ಮದ್ ಹನೀಫ಼್ , ರವೀಂದ್ರ ಕೆರೆಹಳ್ಳಿ , ರಿಪ್ಪನ್ಪೇಟೆ ಗ್ರಾಪಂ ಸದಸ್ಯರುಗಳು ,ssf ಅಧ್ಯಕ್ಷ ಅಜ್ಮಲ್ ಹಾಗೂ ಇನ್ನಿತರರಿದ್ದರು.