January 11, 2026

Ripponpete | ವ್ಯಸನ ಮುಕ್ತ ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರ ಸಹಕಾರ ಮುಖ್ಯ – ಪಿಎಸ್‌ಐ ಪ್ರವೀಣ್ ಎಸ್ ಪಿ

ವ್ಯಸನ ಮುಕ್ತ ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರ ಸಹಕಾರ ಮುಖ್ಯ – ಪಿಎಸ್‌ಐ ಪ್ರವೀಣ್ ಎಸ್ ಪಿ

ಉತ್ತಮ ಸಮಾಜ ನಿರ್ಮಾಣದ ಸತ್ಕಾರ್ಯ ಈಡೇರಿಕೆಗೆ ಸಮುದಾಯದ ಒಳಗೊಳ್ಳುವಿಕೆ ಮತ್ತು ವಿದ್ಯಾರ್ಥಿಗಳ ಕೊಡುಗೆ ಅತ್ಯಂತ ಪ್ರಮುಖ ಪಾತ್ರ ವಹಿಸಲಿದೆ ಎಂದು ಪಿಎಸ್‌ಐ ಪ್ರವೀಣ್ ಎಸ್ ಪಿ ತಿಳಿಸಿದರು.

ರಿಪ್ಪನ್‌ಪೇಟೆ ಪಟ್ಟಣದ ಪದವಿ ಪೂರ್ವ ಕಾಲೇಜು ಹಾಗೂ ಅಮೃತ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪೊಲೀಸ್ ಇಲಾಖೆ ವತಿಯಿಂದ ಬುಧವಾರ ಆಯೋಜಿಸಿದ್ದ ‘ಅಂತರರಾಷ್ಟ್ರೀಯ ಮಾದಕ ವ್ಯಸನ ಮತ್ತು ಕಳ್ಳ ಸಾಗಣೆ ವಿರೋಧಿ ದಿನಾಚರಣೆ’ಯಲ್ಲಿ ಅವರು ಮಾತನಾಡಿ ‘ಹದಿಹರೆಯದವರು ಮತ್ತು ಯುವಜನರಲ್ಲಿ ಸಣ್ಣ, ಸಣ್ಣ ಆಕರ್ಷಣೆ ಮಾದಕ ಸೇವನೆಯ ಪ್ರಯತ್ನ ಮಾಡಿಸುತ್ತದೆ. ಪ್ರಯತ್ನ ಚಟವಾಗಿ ಬದಲಾಗಲಿದೆ. ಒಂದು ಬಾರಿ ಮಾದಕ ವಸ್ತುಗಳ ದುಶ್ಚಟಕ್ಕೆ ಸಿಲುಕಿದರೆ, ಮಾದಕ ಜಗತ್ತು ತನ್ನ ಭ್ರಮಾ ಲೋಕಕ್ಕೆ ಸೆಳೆದುಕೊಳ್ಳುತ್ತದೆ. ಸಣ್ಣದಾಗಿ ಆರಂಭವಾದ ಚಟ ಹಂತ ಹಂತವಾಗಿ ದೊಡ್ಡದಾಗುತ್ತದೆ. ಕೆಲಸವಿಲ್ಲದ ಯುವಕರು ಹಣ ಹೊಂದಿಸಲು ಸಾಧ್ಯವಾಗದೇ, ದುಶ್ಚಟವನ್ನು ಬಿಡಲು ಸಾಧ್ಯವಾಗದೇ, ಕಳ್ಳತನ ಮತ್ತು ದರೋಡೆಗಳಂತಹ ಸಮಾಜಘಾತುಕ ಕೃತ್ಯಗಳಿಗೆ ಇಳಿಯುತ್ತಾರೆ. ಯುವಕರು ಈ ಮೋಸದ ಜಾಲಕ್ಕೆ ಸಿಲುಕುವ ಮುನ್ನ ಜಾಗೃತರಾಗಿರಬೇಕು ಮತ್ತು ಸುತ್ತಮುತ್ತಲಿನ ಸಮಾಜಕ್ಕೂ ಈ ದುಷ್ಕೃತ್ಯದ ಬಗ್ಗೆ ಜಾಗೃತಿ ಮೂಡಿಸಿ’ ಎಂದು ಸಲಹೆ ನೀಡಿದರು.

ನಿಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ಬಗೆಯ ಮಾದಕ ವಸ್ತುಗಳ ಬಳಕೆ ಮಾಡುವುದು, ಮತ್ತು ಸಾಗಣೆ ಮಾಡುವುದು ಕಂಡು ಬಂದರೇ, ಜಾಲದ ಬಗ್ಗೆ ನಿಮಗೆ ಮಾಹಿತಿ ದೊರತರೂ ಅಪರಾಧ ಕೃತ್ಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು. ಮಾದಕ ವಸ್ತುಗಳ ಸಾಗಣೆಯ ಜಾಲ ತಡೆಗಟ್ಟುವ ಮೂಲಕ ಸದೃಢ ಭಾರತ ಕಟ್ಟುವ ಸಂಕಲ್ಪಕ್ಕೆ ಕೈಜೋಡಿಸಬೇಕೆಂದು ಮನವಿ ಮಾಡಿದರು.

ಕಾಲೇಜು ದಿನಗಳಲ್ಲಿ ಕಾಣಿಸುವ ಕುತೂಹಲಗಳನ್ನು ಬದಿಗೊತ್ತಿ, ದುಶ್ಚಟಗಳಿಂದ ದೂರವಿರಿ. ಉತ್ತಮ ಕಲಿಕೆಯ ಕಡೆಗೆ ಗಮನ ಕೊಡಿ, ಜ್ಞಾನ ಹೆಚ್ಚಿಸಿಕೊಳ್ಳುವ ಮೂಲಕ ಜಗತ್ತನ್ನು ಅರಿತುಕೊಳ್ಳಿ, ಸಕಾಲಕ್ಕೆ ಸಮಾಜದಲ್ಲಿ ಸೂಕ್ತ ಸ್ಥಾನಮಾನ ಲಭಿಸಲಿದೆ. ಆಗ ಸಮಾಜವೇ ನಿಮ್ಮನ್ನು ಗೌರವಿಸಲಿದೆ ಎಂದರು.

ಈ ಸಂದರ್ಭದಲ್ಲಿ ರಿಪ್ಪನ್‌ಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಎ ಮಂಜುನಾಥ್ , ಅಮೃತ ಕಾಲೇಜಿನ ಪ್ರಾಂಶುಪಾಲ ಮಹಮದ್ ನಜಹತ್ ಉಲ್ಲಾ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಉಮೇಶ್ , ಚೆನ್ನಪ್ಪ ಡಿ, ಸಂತೋಷ್ ಕೊರವರ ಮತ್ತು ಮಧುಸೂಧನ್ ಇದ್ದರು.

About The Author

Leave a Reply

Your email address will not be published. Required fields are marked *