ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಹೊಸಮನೆ ಪ್ರದೇಶದಲ್ಲಿ ನಿನ್ನೆ ಯುವಕನೊಬ್ಬನಿಗೆ ಮಾರಕಾಸ್ತ್ರದಿಂದ ಇರಿಯಲಾಗಿದೆ. ಘಟನೆಯ ಸಂಬಂಧ 9 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು
ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ಘಟನೆಯ ಹಿನ್ನಲೆ :
ಭದ್ರಾವತಿಯ ಹೊಸಮನೆಯ ಹನುಮಂತನಗರದಲ್ಲಿ ಗಾರೆ ಕೆಲಸ ಮಾಡುವ ಯುವಕ ನಂದಾ ಎಂಬಾತ ತನ್ನ ಮೊಬೈಲ್ವೊಂದನ್ನ ಅಡವಿಟ್ಟಿದನಂತೆ. ಅದನ್ನು ಬಿಡಿಸಿಕೊಳ್ಳಲು ಹೋಗಿದ್ದ ಸಂದರ್ಭದಲ್ಲಿ ,ಅಡವಿಟ್ಟುಕೊಂಡಿದ್ದವರು ಮೊಬೈಲ್ ಕೊಡಲು ನಿರಾಕರಿಸಿದ್ದಾರೆ.
ಈ ಸಂಬಂಧ ನಂದಾ ಎಂಬಾತನು ಪೊಲೀಸರಿಗೆ ದೂರು ಕೊಡಲು ಮುಂದಾಗಿದ್ದಾನೆ. ಇದೇ ವಿಚಾರಕ್ಕೆ ಮೊಬೈಲ್ ಅಡವಿಟ್ಟುಕೊಂಡವರು ಜಗಳ ತೆಗೆದು ನಂದಾನಿಗೆ ಮಾರಕಾಸ್ತ್ರದಿಂದ ಇರಿದಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ವಾಟ್ಸ್ಯಾಪ್ ಮೆಸೇಜ್ನಲ್ಲಿ ಮಾಹಿತಿ ನೀಡಿರುವ ಎಸ್ಪಿ ಮಿಥುನ್ ಕುಮಾರ್, ನಿನ್ನೆ ರಾತ್ರಿ ಭದ್ರಾವತಿಯಲ್ಲಿ ಯುವಕನೊಬ್ಬನಿಗೆ ಚೂಪಾದ ವಸ್ತುವಿನಿಂದ ಇರಿಯಲಾಗಿದ್ದು, ಮೈನರ್ ಇಂಜುರಿಯಾಗಿದೆ.ಪ್ರಕರಣ ಸಂಬಂಧ ಒಂಬತ್ತು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ಮೊಬೈಲ್ ಫೋನ್ ಅಡವಿಟ್ಟಿರುವ ವಿಚಾರದಲ್ಲಿ ಹಾಗೂ ವೈಯಕ್ತಿಕ ಕಾರಣಕ್ಕೆ ಈ ಘಟನೆ ನಡೆದಿದ್ದು, ಇದರಲ್ಲಿ ಯಾವುದೇ ಕೋಮು ವಿಚಾರ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.