ರಿಪ್ಪನ್ ಪೇಟೆ : 4.30 ಕೋಟಿ ವೆಚ್ಚದ ರಸ್ತೆ ಕಾಮಗಾರಿ ಪರಿಶೀಲಿಸಿದ ಶಾಸಕ ಹರತಾಳು ಹಾಲಪ್ಪ : ಫೆ.12 ರಂದು ಧರ್ಮಸ್ಥಳಕ್ಕೆ ಆರೋಪಿತರಿಗೆ ಶಾಸಕ ಹಾಲಪ್ಪ ಆಹ್ವಾನ

ರಿಪ್ಪನ್ ಪೇಟೆ : ಸುಳ್ಳು ಹೇಳಿಕೆ ಕೊಟ್ಟು ಪಲಾಯನಗೈಯುವ ಹುಡುಗಾಟದ ಕೆಲಸವನ್ನು ಮಾಡದೇ ಫೆಬ್ರವರಿ 12 ರಂದು ಧರ್ಮಸ್ಥಳದ ಶ್ರೀಮಂಜುನಾಥನ ಸನ್ನಿಧಿಗೆ ಬಂದು ನಾನು ಹಣ ಪಡೆದಿರುವುದನ್ನು ಸಾಬೀತುಪಡಿಸಲಿ ಎಂದು ಸಾಗರ – ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರತಾಳು ಹಾಲಪ್ಪ ಸವಾಲು ಹಾಕಿದರು.

ಬಾಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪೂಜಾರದಿಂಬದಲ್ಲಿ  ಬುಧವಾರ ನೂತನವಾಗಿ ನಿರ್ಮಾಣವಾಗಿರುವ 4.30 ಕೋಟಿ ವೆಚ್ಚದ ಪಿಎಂಜಿಎಸ್ ವೈ ರಸ್ತೆ ಕಾಮಗಾರಿಯನ್ನು ಪರಿಶೀಲಿಸಿ ನಂತರ ಮಾತನಾಡಿದ ಶಾಸಕರು ಸಾಗರ ಕ್ಷೇತ್ರದಲ್ಲಿ ವ್ಯಕ್ತಿಯೋರ್ವ ನನ್ನ ಮೇಲೆ ಆಧಾರ ರಹಿತವಾದ ಆರೋಪ ವನ್ನು ಮಾಡುತ್ತಿದ್ದಾನೆ. ಈತನ ಕಾಲಾವಧಿಯಲ್ಲಿ 1ಲೋಡ್ ಮರಳಿಗೆ ಇಪ್ಪತ್ತೈದು ಸಾವಿರ ರೂಪಾಯಿ ದರ ಇತ್ತು. ಈಗ ಹದಿನೈದು ಸಾವಿರ ರೂಗಳಿಗೆ ಮರಳು ಜನಸಾಮಾನ್ಯರಿಗೆ ದೊರಕುತ್ತಿದೆ. ಆಗ ಆತ ಮಾಡಿದ ಕೆಲಸವನ್ನು ನಾನು ಮಾಡುತ್ತಿದ್ದೇನೆ ಎಂಬ ಭ್ರಮೆಯಲ್ಲಿ ಹೇಳಿಕೆ ನೀಡುತ್ತಿದ್ದಾನೆ. ಆದ್ದರಿಂದ ಹಣ ಪಡೆದಿದ್ದೇನೆ ಎಂದು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡುವಂತೆ ಪಂಥಾಹ್ವಾನ ಕೂಡ ನೀಡಿರುತ್ತಾನೆ. 

ಇಂತಹ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ ಸಾರ್ವಜನಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ನಾನು ಪ್ರಾಮಾಣಿಕವಾಗಿ ಇರಬೇಕೆಂಬುವುದು ನನ್ನ ಉದ್ದೇಶ ಆದರೆ ವೃಥಾ ಆರೋಪಗಳನ್ನು ಸಹಿಸಲು ಸಾಧ್ಯವಿಲ್ಲ ಆದ್ದರಿಂದ ಫೆಬ್ರವರಿ 12 ರ ಶನಿವಾರ ನಾನು ಧರ್ಮಸ್ಥಳಕ್ಕೆ ಹೋಗುತ್ತಿದ್ದೇನೆ. ನಾನು ಹಣ ಪಡೆದಿರುವ ಬಗ್ಗೆ ಆರೋಪಿಸಿರುವ ವ್ಯಕ್ತಿಗಳು ಬಂದು ಧರ್ಮಸ್ಥಳದ ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ಸಾಬೀತುಪಡಿಸಲಿ. ಹೇಳಿಕೆ ಕೊಟ್ಟು ಪಲಾಯನಗೈಯ್ಯುವ ಹುಡುಗಾಟದ ಕೆಲಸವನ್ನು ಮಾಡದೆ ಪ್ರಮಾಣಕ್ಕೆ ತಯಾರಾಗಿ ಬರುವಂತೆ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಹೆಸರು ಉಲ್ಲೇಖಿಸದೆ ಸವಾಲ್ ಹಾಕಿದರು.

ಈ ಸಂಧರ್ಭದಲ್ಲಿ ಪೂಜಾರದಿಂಬ ಗ್ರಾಮಸ್ಥರು ಶಾಸಕರಾದ ಹರತಾಳು ಹಾಲಪ್ಪರವರನ್ನು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ಎಂ ಬಿ ಮಂಜುನಾಥ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷರಾದ ದಿವಾಕರ ಮುಖಂಡರಾದ ಎ ಟಿ ನಾಗರತ್ನಮ್ಮ, ಮೆಣಸೆ ಆನಂದ, ಯೋಗೇಂದ್ರಗೌಡ 
ನೇಮಾಕ್ಷ ಗೌಡ, ರಾಘವೇಂದ್ರ, ಗಂಟೆ ರಾಜೇಂದ್ರ, ಕೃಷ್ಣಮೂರ್ತಿ ಗೌಡ, ತೀರ್ಥೇಶ, ಕೀರ್ತಿ ಕೆ ಗೌಡ ಹಾಗೂ ಇನ್ನಿತರರಿದ್ದರು.



Leave a Reply

Your email address will not be published. Required fields are marked *