ರಿಪ್ಪನ್ಪೇಟೆ: ಪುರಾಣಪ್ರಸಿದ್ಧ ಕೆರೆಹಳ್ಳಿಯ ಶ್ರೀರಾಮೇಶ್ವರ ಸ್ವಾಮಿಯ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ, ನೂತನ ದೇವಸ್ಥಾನದ ಕಟ್ಟಡದಲ್ಲಿ ಫೆ. 13 ರ ಭಾನುವಾರ ನೆರವೇರಲಿದೆ.
ಪುರಾಣಕಾಲದ ಐತಿಹ್ಯವನ್ನು ಹೊಂದಿರುವ ದೇವರನ್ನು ಸೀತಾರಾಮರು ವನವಾಸ ಕಾಲದ ಸಂದರ್ಭದಲ್ಲಿ ಶಿವನ ಆರಾಧನೆಗಾಗಿ ಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸಿದ್ದರೆಂಬ ಪ್ರತೀತಿ ಇಲ್ಲಿನ ಜನರಲ್ಲಿ ಪ್ರಚಲಿತದಲ್ಲಿದೆ.
 ಪ್ರಾಚೀನಕಾಲದ ಶಿಥಿಲಾವಸ್ಥೆಗೊಂಡಿದ್ದ ದೇವಸ್ಥಾನವನ್ನು ತೆರವುಗೊಳಿಸಿ ಶಿವನ ಲಿಂಗವನ್ನು ವಿಸರ್ಜಿಸಲಾಗಿತ್ತು. ಭಕ್ತರ ಅಭಿಲಾಷೆಯಂತೆ ದಾನಿಗಳ ಸಹಾಯದಿಂದ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ನೂತನ ದೇವಾಲಯ ರೂಪುಗೊಂಡಿದ್ದು, ಸುಸಜ್ಜಿತ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ಶ್ರೀರಾಮೇಶ್ವರನ ಲಿಂಗವು ಪ್ರತಿಷ್ಠಾಪನೆಗೊಳ್ಳುತ್ತಿದೆ.
ಶಿವನ ಮುಂಭಾಗದಲ್ಲಿ ನಂದಿ, ಇಕ್ಕೆಲಗಳಲ್ಲಿ ಪಾರ್ವತಿ ಮತ್ತು ಗಣಪತಿ, ಪರಿವಾರ ದೇವರುಗಳ ಪ್ರತಿಷ್ಠಾಪನೆಯು ಜರುಗಲಿದೆ. ಜೊತೆಗೆ ದೇವಸ್ಥಾನದ ಮುಂಭಾಗದಲ್ಲಿ ಗರುಡಗಂಭ ಸ್ಥಾಪನೆ ಮಾಡಲಾಗುತ್ತಿದೆ ಕೆಂಜಿಗಾಪುರ ಶ್ರೀಧರಭಟ್ರ ಪುರೋಹಿತ್ಯದಲ್ಲಿ ಫೆ. 12 ರ ಶನಿವಾರದಂದು ದೇವಸ್ಥಾನದ ಆವರಣದಲ್ಲಿ 10 ಗಂಟೆಗೆ ಶ್ರೀಗುರು ಗಣಪತಿ ಪೂಜೆ, ಪುಣ್ಯಾಃ, ಕೃಚ್ಛಹೌರಣ ಪೂರ್ವಕ ಪಂಚಗವ್ಯಹವನ, ಗಣಪತಿ ಹವನದೊಂದಿಗೆ ಧಾರ್ಮಿಕ ಕಾರ್ಯಕ್ರಮ ಆರಂಭಗೊಂಡು ಫೆ. 13 ರ ಭಾನುವಾರ ಬೆಳಿಗ್ಗೆ ಶುಭಲಗ್ನದ ಶುಭಾಂಶದಲ್ಲಿ ಶ್ರೀರಾಮೇಶ್ವರ ದೇವರ ಪ್ರತಿಷ್ಠಾನೆ ನೆರವೇರಲಿದ್ದು, ಕುಂಭಾಭೀಷೇಕ, ನೇತ್ರೋನ್ಮಿಲನ ನಿರೀಕ್ಷೆ, ಕಲಾತತ್ವ ಹವನ, ಪೂರ್ಣಾಹುತಿ, ಮಹಾಬಲಿ, ಮಂಗಳಾರತಿಯೊಂದಿಗೆ ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.
 ಪ್ರತಿಷ್ಠಾಪನಾ ಧರ್ಮಕಾರ್ಯದಲ್ಲಿ ಸರ್ವಭಕ್ತಾದಿಗಳು ಪಾಲ್ಗೊಂಡು ದೇವರ ಸೇವೆಯೊಂದಿಗೆ ಕೃತಾರ್ತರಾಗಲು ದೇವಸ್ಥಾನ ಸಮಿತಿ ಕೋರಿದೆ.
		 
                         
                         
                         
                         
                         
                         
                         
                         
                         
                        
