Ripponpete | ಕಾಂಗ್ರೆಸ್ ರ್ಯಾಲಿ ವೇಳೆಯಲ್ಲಿ ಘೋಷಣೆ ಪ್ರಕರಣ – ಡಿವೈಎಸ್ಪಿ ನೇತ್ರತ್ವದಲ್ಲಿ ಸಂಧಾನ ಸಭೆ ಯಶಸ್ವಿ
ರಿಪ್ಪನ್ಪೇಟೆ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ರೋಡ್ ಷೋ ವೇಳೆಯಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿವೈಎಸ್ಪಿ ನೇತ್ರತ್ವದಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದೆ.
ಸೋಮವಾರ ರಾತ್ರಿ ಕಾಂಗ್ರೆಸ್ ಪಕ್ಷದ ರೋಡ್ ಷೋ ವೇಳೆಯಲ್ಲಿ ಕೆಲವು ಸಂಘಟನೆಗಳ ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆ ಕೂಗಿದ್ದರು ಈ ಸಂಧರ್ಭದಲ್ಲಿ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು.
ಇಂದು ಕಾಂಗ್ರೆಸ್ ಪಕ್ಷದ ಮುಖಂಡರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿ ಪಕ್ಷದ ಕಾರ್ಯಕ್ರಮದ ವೇಳೆ ಗೊಂದಲಕ್ಕೆ ಕಾರಣರಾದವರ ವಿರುದ್ದ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಬಿಜೆಪಿ ಪಕ್ಷದ ಕಾರ್ಯಕ್ರಮದ ವೇಳೆ ಪ್ರತಿಭಟನೆ ನಡೆಸಲಾಗುವುದು ಎಂದು ದೂರು ಸಲ್ಲಿಸಿದ್ದರು.
ಈ ಹಿನ್ನಲೆಯಲ್ಲಿ ಡಿವೈಎಸ್ಪಿ ಗಜಾನನ ವಾಮನ ಸುತಾರ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿದರು.ಈ ಸಂಧರ್ಭದಲ್ಲಿ ಬಿಜೆಪಿ ಮುಖಂಡರು ಘೋಷಣೆ ಕೂಗಿದವರಿಗೂ ನಮಗೂ ಸಂಬಂಧವಿಲ್ಲ ಅವರು ಮಾಡಿರುವುದು ತಪ್ಪು ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ನಂತರ ಡಿವೈಎಸ್ಪಿ ಗಜಾನನ ವಾಮನ ಸುತಾರ ಮಾತನಾಡಿ ಈ ಬಾರಿಯ ಪ್ರಜಾಪ್ರಭುತ್ವ ಹಬ್ಬವನ್ನು ಸೌಹಾರ್ಧತೆಯಿಂದ ಆಚರಿಸೋಣ ಯಾವುದೇ ಗೊಂದಲಗಳಿಗೆ ಅವಕಾಶ ಮಾಡಿಕೊಳ್ಳುವುದು ಬೇಡ , ಕಾಂಗ್ರೆಸ್ ರೋಡ್ ಷೋ ವೇಳೆಯಲ್ಲಿ ಘೋಷಣೆ ಕೂಗಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ ಮತ್ತೆ ಇಂತಹ ಪ್ರಕರಣಗಳು ಮರುಕಳಿಸುವುದು ಬೇಡ ಎಂದರು.
ಈ ಸಂಧರ್ಭದಲ್ಲಿ ಸಿಪಿಐ ಗುರಣ್ಣ ಡಿ ಹೆಬ್ಬಾಳ್ ,ಪಿಎಸ್ಐ ನಿಂಗರಾಜ್ ಕೆ ವೈ ಮುಖಂಡರುಗಳಾದ ಅಮೀರ್ ಹಂಜಾ , ಎಂ ಎಂ ಪರಮೇಶ್ , ಸತೀಶ್ ಎನ್ , ಎಂ ಬಿ ಮಂಜುನಾಥ್ ,ಸುಧೀಂದ್ರ ಪೂಜಾರಿ ,ಸುಂದರೇಶ್ , ಉಬೇದುಲ್ಲಾ ಷರೀಫ್ , ರಾಜು ಎನ್ , ಈಶ್ವರಪ್ಪ ಗೌಡ , ಸುರೇಶ್ ಸಿಂಗ್ , ಗಣಪತಿ ಗವಟೂರು ಹಾಗೂ ಇನ್ನಿತರರಿದ್ದರು