Headlines

ಸಂಚಾರ ನಿಯಮ ಉಲ್ಲಂಘನೆಗೆ ‘ಅದೃಶ್ಯ ಪೊಲೀಸ್’ ಕಣ್ಣು : 500ಕ್ಕೂ ಹೆಚ್ಚು ಪ್ರಕರಣ ದಾಖಲು, ಮನೆ ಬಾಗಿಲಿಗೆ ಅಂಚೆ ಮೂಲಕ ದಂಡದ ನೋಟಿಸ್!

Over 500 traffic violation cases have been registered in Ripponpet under the ITMS system, with penalty notices being sent directly to vehicle owners’ homes via post for rule violations.

ಸಂಚಾರ ನಿಯಮ ಉಲ್ಲಂಘನೆಗೆ ‘ಅದೃಶ್ಯ ಪೊಲೀಸ್’ ಕಣ್ಣು : 500ಕ್ಕೂ ಹೆಚ್ಚು ಪ್ರಕರಣ ದಾಖಲು, ಮನೆ ಬಾಗಿಲಿಗೆ ಅಂಚೆ ಮೂಲಕ ದಂಡದ ನೋಟಿಸ್!

ರಿಪ್ಪನ್ ಪೇಟೆ : ರಸ್ತೆಯಲ್ಲಿ ಪೊಲೀಸ್ ಕಾಣಿಸಿದರೆ ಹೆಲ್ಮೆಟ್ ತಕ್ಷಣ ತಲೆಗೆ ಹಾಕಿಕೊಳ್ಳುವುದು, ಮೂರು ಜನ ಕುಳಿತಿದ್ದರೆ ಒಬ್ಬನು ಇಳಿದು ನಡೆದು ಹೋಗುವುದು, “ಸಾರ್ ಈ ಸಲ ಬಿಡಿ” ಎಂದು ಮನವಿ ಮಾಡುವುದು — ಇವೆಲ್ಲಾ ಈಗ ರಿಪ್ಪನ್ ಪೇಟೆಯಲ್ಲಿ ನಿಧಾನವಾಗಿ ಇತಿಹಾಸವಾಗುತ್ತಿದೆ. ಕಾರಣ, ಪಟ್ಟಣದಲ್ಲಿ ಈಗ “ಅದೃಶ್ಯ ಪೊಲೀಸ್” ಸೇವೆ ಶುರುವಾಗಿದೆ!

ರಸ್ತೆಯಲ್ಲಿ ಪೊಲೀಸ್ ಕಾಣಿಸದಿದ್ದರೂ ನಿಯಮ ಉಲ್ಲಂಘನೆ ಮಾಡಿದರೆ ಈಗ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ರಿಪ್ಪನ್ ಪೇಟೆ ಪಟ್ಟಣದಲ್ಲಿ ಜಾರಿಗೊಂಡಿರುವ ಐಟಿಎಂಎಸ್ (ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್) ವ್ಯವಸ್ಥೆಯಿಂದಾಗಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರಿಗೆ ನೇರವಾಗಿ ದಂಡದ ನೋಟಿಸ್ ಮನೆ ಬಾಗಿಲಿಗೆ ತಲುಪುತ್ತಿದೆ.

ಪಟ್ಟಣದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳು ಈಗ ಸಂಚಾರವನ್ನು ಕಟ್ಟುನಿಟ್ಟಾಗಿ ನಿಗಾವಹಿಸುತ್ತಿದ್ದು, ನಿಯಮ ಉಲ್ಲಂಘನೆಯಾದ ಕ್ಷಣದಲ್ಲೇ ವಾಹನದ ಫೋಟೋ ಮತ್ತು ಜಿಪಿಎಸ್ ಮಾಹಿತಿಯನ್ನು ದಾಖಲಿಸುತ್ತಿವೆ. ಈ ಮಾಹಿತಿ ಠಾಣೆಗೆ ಹೋಗಿ ಅಲ್ಲಿಂದ ಶಿವಮೊಗ್ಗದ ಐಟಿಎಂಎಸ್ ವಿಭಾಗಕ್ಕೆ ಕಳುಹಿಸಲಾಗುತ್ತದೆ. ಅಧಿಕಾರಿಗಳು ಪರಿಶೀಲನೆ ನಡೆಸಿ ತಪ್ಪು ದೃಢಪಟ್ಟರೆ ವಾಹನದ ನೋಂದಣಿ ಸಂಖ್ಯೆಯ ಆಧಾರದಲ್ಲಿ ದಂಡವನ್ನು ಆನ್‌ಲೈನ್ ಮೂಲಕ ದಾಖಲಿಸುತ್ತಾರೆ.

ಮೊಬೈಲ್ ಸಂಖ್ಯೆ ವಾಹನದ ನೋಂದಣಿಗೆ ಲಿಂಕ್ ಆಗಿದ್ದರೆ ದಂಡದ ಮಾಹಿತಿ ಮೊದಲು ಸಂದೇಶದ ಮೂಲಕ ಬರುತ್ತದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಮೊಬೈಲ್ ಸಂಖ್ಯೆ ಅಪ್‌ಡೇಟ್ ಆಗಿರದ ಕಾರಣ, ದಂಡದ ನೋಟಿಸ್ ಅಂಚೆ ಮೂಲಕ ನೇರವಾಗಿ ಮನೆ ವಿಳಾಸಕ್ಕೆ ಕಳುಹಿಸಲಾಗುತ್ತಿದೆ. ಹಲವಾರು ವಾಹನ ಸವಾರರು “ನಾವು ಏನು ಮಾಡಿಲ್ಲ” ಎಂದುಕೊಳ್ಳುವಷ್ಟರಲ್ಲಿ ಅಂಚೆ ಮೂಲಕ ದಂಡದ ನೋಟಿಸ್ ಮನೆ ಬಾಗಿಲಿಗೆ ತಲುಪುತ್ತಿರುವುದು ಅಚ್ಚರಿ ಮೂಡಿಸಿದೆ.

ಈಗಾಗಲೇ ರಿಪ್ಪನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 500 ಕ್ಕೂ ಹೆಚ್ಚು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, ಅನೇಕರಿಗೆ ಅಂಚೆ ಮೂಲಕ ದಂಡದ ನೋಟಿಸ್ ಮನೆಗೆ ತಲುಪುತ್ತಿದೆ. ಇದರಿಂದ ನಿಯಮ ಉಲ್ಲಂಘನೆ ಮಾಡುತ್ತಿದ್ದ ವಾಹನ ಸವಾರರಲ್ಲಿ ಆತಂಕವೂ ಮೂಡಿದೆ.
ದಂಡದ ನೋಟಿಸ್‌ನಲ್ಲಿ ಕ್ಯೂಆರ್ ಕೋಡ್ ನೀಡಲಾಗಿದ್ದು, ಅದನ್ನು ಸ್ಕ್ಯಾನ್ ಮಾಡಿ ಆನ್‌ಲೈನ್ ಮೂಲಕ ದಂಡ ಪಾವತಿಸುವ ವ್ಯವಸ್ಥೆಯೂ ಇದೆ.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಎಸ್‌ಐ ರಾಜುರೆಡ್ಡಿ ನೇತೃತ್ವದಲ್ಲಿ ಈ ವ್ಯವಸ್ಥೆ ಜಾರಿಗೊಂಡಿದ್ದು, ಪಟ್ಟಣದ ಪ್ರಮುಖ ರಸ್ತೆಗಳ ಬಳಿ ಪೊಲೀಸರು ನಿಂತಿರುವಂತೆ ಕಾಣುತ್ತಾರೆ. ಆದರೆ ಅವರು “ನೋಡ್ತಿಲ್ಲ” ಅಂತ ಭಾವಿಸಿದರೆ ಅದು ದೊಡ್ಡ ತಪ್ಪು. ಅವರ ಕೈಯಲ್ಲಿರುವ ಮೊಬೈಲ್ ಕ್ಯಾಮೆರಾ ಮಾತ್ರ ಕೆಲಸ ಮಾಡ್ತಲೇ ಇರುತ್ತದೆ.

ಕ್ಲಿಕ್ಕಾದ ಫೋಟೋ ಜಿಪಿಎಸ್ ಮಾಹಿತಿಯೊಂದಿಗೆ ಠಾಣೆಗೆ ಹೋಗುತ್ತದೆ. ಅಲ್ಲಿಂದ ಶಿವಮೊಗ್ಗದ ಐಟಿಎಂಎಸ್ ವಿಭಾಗಕ್ಕೆ ಕಳುಹಿಸಿ ಪರಿಶೀಲನೆ ನಡೆಸಲಾಗುತ್ತದೆ. ತಪ್ಪು ಖಚಿತವಾದರೆ ವಾಹನದ ನೋಂದಣಿ ಸಂಖ್ಯೆಯ ಆಧಾರದಲ್ಲಿ ದಂಡ ನೇರವಾಗಿ ನಿಮ್ಮ ಹೆಸರಿಗೆ ಸೇರುತ್ತದೆ.

ಈ ವ್ಯವಸ್ಥೆ ಜಾರಿಯಾದ ನಂತರ ಪಟ್ಟಣದಲ್ಲಿ ಮತ್ತೊಂದು ಬದಲಾವಣೆ ಕಂಡುಬರುತ್ತಿದೆ. ಮೊದಲು ವಾಹನ ನಿಲ್ಲಿಸಿದಾಗ ಕೇಳಿಬರುತ್ತಿದ್ದ “ಸಾರ್ ಹೆಲ್ಮೆಟ್ ಮನೆಯಲ್ಲಿದೆ”, “ಹಾಲು ತಗೋಳೊಕೆ ಬಂದೆ ಸರ್”, “ಈ ಸಲ ಕ್ಷಮಿಸಿ”, “ನಮ್ಮವರು ದೊಡ್ಡವರು ಸರ್” ಎಂಬ ಡೈಲಾಗ್‌ಗಳು ಈಗ ಕೇಳಿಬರುವುದೇ ಕಡಿಮೆಯಾಗಿದೆ.

ಒಟ್ಟಿನಲ್ಲಿ “ಸಾರ್ ಒಮ್ಮೆ ಬಿಡಿ” ಸಂಸ್ಕೃತಿಗೆ ಬ್ರೇಕ್ ಬಿದ್ದಿದ್ದು, ತಪ್ಪು ಮಾಡಿದವರಿಗೆ ಶಿಕ್ಷೆ ಖಚಿತ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿರುವುದಾಗಿ  ಸಂಚಾರ ನಿಯಮಗಳನ್ನು ಪಾಲಿಸುವುದು ಮಾತ್ರವೇ ವಾಹನ ಸವಾರರಿಗೆ ಉತ್ತಮ ಮಾರ್ಗ ಎನ್ನುವುದು ಈಗ ಸ್ಪಷ್ಟವಾಗುತ್ತಿದೆ.

About The Author