POSTMANNEWS

ನೈಜ ಸುದ್ದಿ ನೇರ ಬಿತ್ತರ..

ಬಂಗಾರಧಾಮದಲ್ಲಿ ಡಿಜಿಟಲ್ ಸಾಕ್ಷ್ಯಚಿತ್ರ ವ್ಯವಸ್ಥೆ: ಸಚಿವ ಮಧು ಬಂಗಾರಪ್ಪ ಘೋಷಣೆ

Digital documentary system at Bangar Dham: Minister Madhu Bangarappa announces

ಬಂಗಾರಧಾಮದಲ್ಲಿ ಡಿಜಿಟಲ್ ಸಾಕ್ಷ್ಯಚಿತ್ರ ವ್ಯವಸ್ಥೆ: ಸಚಿವ ಮಧು ಬಂಗಾರಪ್ಪ ಘೋಷಣೆ

Digital documentary system at Bangar Dham: Minister Madhu Bangarappa announces

ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ 14ನೇ ಪುಣ್ಯಸ್ಮರಣೆ; ಅಭಿಮಾನಿಗಳಿಂದ ಭಾವಪೂರ್ಣ ಗೌರವ

Digital documentary system at Bangar Dham: Minister Madhu Bangarappa announces

ಸೊರಬ: ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಜೀವನಗಾಥೆ, ರಾಜಕೀಯ ಪಯಣ ಹಾಗೂ ಮುಖ್ಯಮಂತ್ರಿ ಆಗಿದ್ದ ವೇಳೆ ಸಾಧಿಸಿದ ಮಹತ್ವದ ಕಾರ್ಯಗಳನ್ನು ಒಳಗೊಂಡ ಡಿಜಿಟಲ್ ಸಾಕ್ಷ್ಯಚಿತ್ರವನ್ನು ಶೀಘ್ರದಲ್ಲೇ ಸೊರಬದ ಬಂಗಾರಧಾಮದಲ್ಲಿ ಅಳವಡಿಸಲಾಗುವುದು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಇಲ್ಲಿನ ಬಂಗಾರಧಾಮದಲ್ಲಿ ಶುಕ್ರವಾರ ಎಸ್. ಬಂಗಾರಪ್ಪ ಅವರ 14ನೇ ಪುಣ್ಯತಿಥಿ ಅಂಗವಾಗಿ ಪೂಜಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಬಂಗಾರಧಾಮಕ್ಕೆ ಪ್ರವಾಸಿ ಕೇಂದ್ರದ ಸ್ಥಾನಮಾನ ನೀಡಿರುವುದರಿಂದ ನಾಡಿನ ನಾನಾ ಭಾಗಗಳಿಂದ ಅಭಿಮಾನಿಗಳು ಹಾಗೂ ಬೆಂಬಲಿಗರು ಭೇಟಿ ನೀಡುತ್ತಿದ್ದಾರೆ ಎಂದರು.

ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಂಗಾರಪ್ಪ ಅವರು ಜಾರಿಗೆ ತಂದ ಆಶ್ರಯ, ಅಕ್ಷಯ, ಆರಾಧನಾ, ವಿಶ್ವ ಯೋಜನೆಗಳು ಲಕ್ಷಾಂತರ ಬಡವರ ಬದುಕಿಗೆ ಆಶಾಕಿರಣವಾಗಿವೆ. ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಸೇರಿದಂತೆ ರೈತಪರ ಯೋಜನೆಗಳಿಂದ ಲಾಭ ಪಡೆದ ಜನರು ಇಂದಿಗೂ ಗೌರವಭಾವದಿಂದ ಬಂಗಾರಧಾಮಕ್ಕೆ ಆಗಮಿಸುತ್ತಿದ್ದಾರೆ. ಡಿಜಿಟಲ್ ಸಾಕ್ಷ್ಯಚಿತ್ರ ವ್ಯವಸ್ಥೆ ಕಲ್ಪಿಸಿದರೆ ಬಂಗಾರಪ್ಪ ಅವರ ಬದುಕಿನ ಹಾದಿ ಹೊಸ ಪೀಳಿಗೆಗೂ ಸ್ಪಷ್ಟವಾಗಲಿದೆ ಎಂದು ಹೇಳಿದರು.

ಬಂಗಾರಪ್ಪ ಅವರು ಬರೀ ವ್ಯಕ್ತಿಯಲ್ಲ, ಬಡವರ ಮತ್ತು ಶೋಷಿತರ ಶಕ್ತಿ ತುಂಬಿದ ಜನನಾಯಕ. ಅವರು ದೇಹತಃ ಇಲ್ಲದಿದ್ದರೂ ತಮ್ಮ ಚಿಂತನೆಗಳ ಮೂಲಕ ಜನಮಾನಸದಲ್ಲಿ ಸದಾ ಜೀವಂತವಾಗಿದ್ದಾರೆ. ಅವರ ವಿಚಾರಗಳು ಇಂದಿಗೂ ಪ್ರಸ್ತುತವಾಗಿರುವುದರಿಂದಲೇ ಬಂಗಾರಧಾಮ ಶೋಷಿತರು ಮತ್ತು ಬಡವರ ಚೈತ್ರಭೂಮಿಯಾಗಿದೆ ಎಂದು ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಮಧು ಬಂಗಾರಪ್ಪ ಅವರ ಪತ್ನಿ ಅನಿತಾ, ಪುತ್ರ ಸೂರ್ಯ ಹಾಗೂ ಮಾವನೂ ಆದ ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರೊಂದಿಗೆ ಬಂಗಾರಪ್ಪ–ಶಕುಂತಲಾ ದಂಪತಿಯ ಸಮಾಧಿ ಸ್ಥಳದಲ್ಲಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು. ಸೊರಬ ಕ್ಷೇತ್ರ ಮಾತ್ರವಲ್ಲದೆ ಕಲಬುರಗಿ, ಬೆಂಗಳೂರು, ಶಿವಮೊಗ್ಗ, ಸಾಗರ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ ಅಭಿಮಾನಿಗಳು ಹೂ ಅರ್ಪಿಸಿ ಗೌರವ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಗಣಪತಿ ಹುಲ್ತಿಕೊಪ್ಪ, ಕೆ.ಪಿ. ರುದ್ರಗೌಡ್ರು, ತಬಲಿ ಬಂಗಾರಪ್ಪ, ಜಯಶೀಲ ಗೌಡ್ರು, ಜಿ.ಡಿ. ಮಂಜುನಾಥ್, ಬ್ಲಾಕ್ ಅಧ್ಯಕ್ಷ ಅಣ್ಣಪ್ಪ ಹಾಲ್ಘಟ್ಟ, ಸದಾ ಗೌಡ್ರು, ಚಂದ್ರಭೂಪಾಲ್, ಎಂ.ಡಿ. ಶೇಖರ್, ಚಿಕ್ಕ ಸವಿ ನಾಗರಾಜ್ ಸೇರಿದಂತೆ ಹಲವು ಮುಖಂಡರು ಹಾಗೂ ಅಪಾರ ಅಭಿಮಾನಿಗಳು ಉಪಸ್ಥಿತರಿದ್ದರು. ಶಹನಾಯ್ ವಾದನದೊಂದಿಗೆ ನಮನ ಸಲ್ಲಿಸಲಾಯಿತು; ಎಲ್ಲರಿಗೂ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

ಬಸ್ ಸಂಚಾರಕ್ಕೆ ಚಾಲನೆ

ಇದೇ ಸಂದರ್ಭದಲ್ಲಿ ಶಿವಮೊಗ್ಗ–ಸೊರಬ– ಬನವಾಸಿ – ಶಿರಸಿ ಮಾರ್ಗದಲ್ಲಿ ಗ್ರಾಮೀಣ ಸಂಪರ್ಕಕ್ಕೆ ನೆರವಾಗುವಂತೆ ಎರಡು ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಮಧು ಬಂಗಾರಪ್ಪ ಚಾಲನೆ ನೀಡಿದರು. ಗ್ರಾಮೀಣರ ಬೇಡಿಕೆಯ ಹಿನ್ನೆಲೆಯಲ್ಲಿ ಸೊರಬ ಕ್ಷೇತ್ರಕ್ಕೆ ಶೀಘ್ರದಲ್ಲೇ ಇನ್ನೂ 15 ಬಸ್‌ಗಳನ್ನು ಬಿಡುಗಡೆ ಮಾಡಲಾಗುವುದು ಎಂದರು.

ಜನವರಿ ಅಂತ್ಯದೊಳಗೆ ರಾಜ್ಯದ ಎಲ್ಲಾ ರಸ್ತೆಗಳನ್ನು ಗುಂಡಿಮುಕ್ತಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೊರಬ ಕ್ಷೇತ್ರಕ್ಕೆ ಬಿಡುಗಡೆಯಾದ ₹50 ಕೋಟಿಯಲ್ಲಿ ₹45 ಕೋಟಿಯನ್ನು ರಸ್ತೆ ಅಭಿವೃದ್ಧಿಗೆ ಮೀಸಲಿಡಲಾಗಿದ್ದು, ಕಾಮಗಾರಿ ಈಗಾಗಲೇ ಆರಂಭವಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

About The Author