Headlines

ವರ್ಷದ ಬಳಿಕ ಬಯಲಾಯ್ತು ‘ಸೂಟ್‌ಕೇಸ್ ಮಿಸ್ಟರಿ’: ಪ್ರಪಾತದಲ್ಲಿತ್ತು ಅಸ್ಥಿಪಂಜರ! ಕಣ್ಣೀರು ತರಿಸುತ್ತೆ ಬಾಲಕಿ ಸಂಗೀತಳ ಕರಾಳ ಕಥೆ

ವರ್ಷದ ಬಳಿಕ ಬಯಲಾಯ್ತು ‘ಸೂಟ್‌ಕೇಸ್ ಮಿಸ್ಟರಿ’: ಪ್ರಪಾತದಲ್ಲಿತ್ತು ಅಸ್ಥಿಪಂಜರ! ಕಣ್ಣೀರು ತರಿಸುತ್ತೆ ಬಾಲಕಿ ಸಂಗೀತಳ ಕರಾಳ ಕಥೆ

A 14-year-old orphan girl’s missing case in Shikaripura takes a dark turn after a year. Her skeleton was found in a suitcase dumped in Mavinagundi forest.

ಹೆತ್ತ ತಾಯಿಯ ಮಡಿಲಿಲ್ಲ, ಕುಡುಕ ತಂದೆಯ ಪ್ರೀತಿಯೂ ಇಲ್ಲ. ಇಂತಹ ನರಕಸದೃಶ ಬದುಕಿನಿಂದ ಪಾರಾಗಿ, ತನ್ನ ಬದುಕನ್ನು ತಾನೇ ಕಟ್ಟಿಕೊಳ್ಳಬೇಕೆಂಬ ಛಲದಿಂದ 8ನೇ ತರಗತಿಗೆ ಶಾಲೆ ಬಿಟ್ಟು ಶಿಕಾರಿಪುರಕ್ಕೆ ಬಂದಿದ್ದಳು 14 ವರ್ಷದ ಮುಗ್ಧ ಬಾಲಕಿ ಸಂಗೀತಾ. ಅವಳ ಕಣ್ಣಲ್ಲಿ ಭವಿಷ್ಯದ ನೂರಾರು ಬಣ್ಣದ ಕನಸುಗಳಿದ್ದವು. ಅಲ್ಲಿ ಸೌಭಾಗ್ಯ ಎಂಬಾಕೆಯ ಪರಿಚಯವಾಗಿ, ಆಕೆಯ ಪಿಜಿಯಲ್ಲಿ ಆಶ್ರಯವೂ ದೊರಕಿತ್ತು. ಬದುಕು ಹಸನಾಗುತ್ತಿದೆ ಎಂದುಕೊಳ್ಳುವಾಗಲೇ, ಆಕೆಯ ಕನಸುಗಳು ಕೇವಲ ಒಂದು ವರ್ಷದ ನಂತರ ಪಾಳು ಕಾಡಿನಲ್ಲಿ ಅನಾಥ ಸೂಟ್‌ಕೇಸ್‌ನೊಳಗೆ ಅಸ್ಥಿಪಂಜರವಾಗಿ ಪತ್ತೆಯಾಗುತ್ತವೆ ಎಂದು ಆ ಜೀವ ಕನಸಿನಲ್ಲೂ ಎಣಿಸಿರಲಿಲ್ಲ!

ಮಾನವೀಯತೆ ಮರೆತ ರಾಕ್ಷಸೀ ಕೃತ್ಯ

ಕಳೆದ ವರ್ಷದ ಮೇ 18ರಂದು ಪಿಜಿಯಲ್ಲಿದ್ದ ಗಂಗಾನಾಯ್ಕ, ಸೌಭಾಗ್ಯ ಹಾಗೂ ರಂಜಿತಾ ಜೊತೆ ಸಣ್ಣದೊಂದು ಗಲಾಟೆ ನಡೆದಿತ್ತು. ಇದೇ ಮನಸ್ತಾಪದಲ್ಲಿ ಸಂಗೀತಾ ಬಾತ್‌ರೂಮ್‌ನಲ್ಲಿ ನೇಣಿಗೆ ಶರಣಾಗಿದ್ದಳು ಎನ್ನಲಾಗಿದೆ. ಆದರೆ, ಇಲ್ಲಿಂದ ಶುರುವಾಗಿದ್ದು ಮನುಷ್ಯತ್ವವೇ ತಲೆತಗ್ಗಿಸುವಂತಹ ಕಠೋರ ಕೃತ್ಯ. ತಮ್ಮ ಪಿಜಿಗೆ ಕೆಟ್ಟ ಹೆಸರು ಬರುತ್ತದೆ, ಪೊಲೀಸ್ ಕೇಸ್ ಆಗುತ್ತದೆ ಎಂಬ ಒಂದೇ ಕಾರಣಕ್ಕೆ, ಆ ಪಾಪಿಗಳು ಕನಿಷ್ಠ ಮಾನವೀಯತೆಯನ್ನೂ ತೋರಲಿಲ್ಲ. ಬಾಲಕಿಯ ಶವವನ್ನು ಯಾರಿಗೂ ಕಾಣದಂತೆ ಒಂದು ಸೂಟ್‌ಕೇಸ್‌ನಲ್ಲಿ ತುರುಕಿದರು. ರಾತ್ರೋರಾತ್ರಿ ಕಾರಿನಲ್ಲಿ ಕೊಂಡೊಯ್ದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸಮೀಪದ ಮಾವಿನಗುಂಡಿ ಅರಣ್ಯದ ಪ್ರಪಾತಕ್ಕೆ ಬಿಸಾಡಿ ಬಂದಿದ್ದರು.

ಪಾಪದ ಕೊಡ ತುಂಬಿತು, ರಹಸ್ಯ ಬೀದಿಗೆ ಬಂತು!

ಮಾಡಿದ ಪಾಪ ಎಂದಿಗೂ ಮರೆಯಾಗುವುದಿಲ್ಲ. ಕಳೆದ ಒಂದು ವರ್ಷದಿಂದ ಮಣ್ಣಾಗಿದ್ದ ಈ ಘೋರ ರಹಸ್ಯ, ಇತ್ತೀಚೆಗೆ ಆರೋಪಿಗಳಾದ ರಂಜಿತಾ ಹಾಗೂ ಪೀರ್ಯಾನಾಯ್ಕ ನಡುವೆ ನಡೆದ ವೈಯಕ್ತಿಕ ಜಗಳದಿಂದಾಗಿ ಬೀದಿಗೆ ಬಂತು! ಜಗಳದ ವೇಳೆ ಕೊಲೆಯ ಸತ್ಯಾಂಶ ಹೊರಬೀಳುತ್ತಿದ್ದಂತೆ, ಶುಕ್ರವಾರ ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಯಿತು. ಶಿವಮೊಗ್ಗ ಎಸ್ಪಿ ಬಿ. ನಿಖಿಲ್ ನೇತೃತ್ವದಲ್ಲಿ ಪೊಲೀಸರು ರಂಜಿತಾಳನ್ನು ವಶಕ್ಕೆ ಪಡೆದು ಬೆವರಿಳಿಸಿದಾಗ ಅಸಲಿ ಕಹಾನಿ ಬಿಚ್ಚಿಬಿದ್ದಿದೆ.

ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಪ್ರಕರಣದ ಪ್ರಮುಖ ರೂವಾರಿ, ಮುದ್ದನಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ಗಂಗಾನಾಯ್ಕ, ಆತನ ಎರಡನೇ ಪತ್ನಿ ಸೌಭಾಗ್ಯ, ರಂಜಿತಾ ಮತ್ತು ಪೀರ್ಯಾನಾಯ್ಕ ಸೇರಿ ನಾಲ್ವರನ್ನೂ ಹೆಡೆಮುರಿ ಕಟ್ಟಿದ್ದಾರೆ.

ಕಾಡಿನಲ್ಲಿ ಕರಗಿದ ದೇಹ

ಪೊಲೀಸರು ಆರೋಪಿಗಳನ್ನು ಕರೆದೊಯ್ದು ಮಾವಿನಗುಂಡಿ ಪ್ರಪಾತದಲ್ಲಿ ಶೋಧ ನಡೆಸಿದಾಗ ಸಿಕ್ಕಿದ್ದು ಕೇವಲ ಮೂಳೆಗಳು ಹಾಗೂ ತಲೆಬುರುಡೆ ಮಾತ್ರ. ಅನಾಥೆಯಾಗಿದ್ದ ಆಕೆಗೆ ಸಮಾಜ ರಕ್ಷಣೆ ನೀಡಬೇಕಿತ್ತು. ತಪ್ಪು ಯಾರದ್ದೇ ಇರಲಿ, ಒಂದು ಜೀವ ಹೋದಾಗ ಅದನ್ನು ಮುಚ್ಚಿಡಲು ಹೋದ ಈ ಕೃತ್ಯ ನಿಜಕ್ಕೂ ಅಮಾನವೀಯ. ಬದುಕಿ ಸಾಧಿಸಬೇಕಿದ್ದ ಜೀವವೊಂದು ಇಂದು ಕಾಡಿನಲ್ಲಿ ಕರಗಿ ಹೋಗಿದೆ. ಈ ಕೃತ್ಯವೆಸಗಿದವರಿಗೆ ತಕ್ಕ ಶಾಸ್ತಿಯಾಗಲೇಬೇಕು ಎಂಬುದು ಸಮಾಜದ ಆಗ್ರಹ.

About The Author