SHIKARIPURA | ಸಂಗೀತಾ ಸಾವು ಪ್ರಕರಣ: ಆರೋಪಿಗಳಿಗೆ ಯಾವುದೇ ರಕ್ಷಣೆ ಇಲ್ಲ, ತಪ್ಪಿತಸ್ಥರಿಗೆ ಶಿಕ್ಷೆ ಖಚಿತ – ಎಸ್ಪಿ ನಿಖಿಲ್ ಬಿ
Shivamogga SP Nikhil B assures strict action in the Shikaripura Sangeetha death case, stating no accused will be protected. Four accused have been arrested and the investigation is progressing under his direct supervision.
ಶಿಕಾರಿಪುರ : ಒಂದು ವರ್ಷದ ಬಳಿಕ ಬೆಳಕಿಗೆ ಬಂದಿರುವ ಬಾಲಕಿ ಸಂಗೀತಾ ಸಾವು ಹಾಗೂ ಮೃತದೇಹವನ್ನು ಕಾಡಿನಲ್ಲಿ ವಿಲೇವಾರಿ ಮಾಡಿರುವ ಪ್ರಕರಣ ಮಾನವೀಯ ಸಮಾಜವೇ ತಲೆತಗ್ಗಿಸುವಂತದ್ದು ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ನಿಖಿಲ್ ಬಿ. ಹೇಳಿದ್ದಾರೆ. ಪ್ರಕರಣದಲ್ಲಿ ಆರೋಪಿಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ, ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆ ಆಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.
ಪಟ್ಟಣ ಪೊಲೀಸ್ ಠಾಣೆಯಲ್ಲಿ ಬಂಜಾರ್ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರೊಂದಿಗೆ ಪ್ರಕರಣದ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಎಸ್ಪಿ ನಿಖಿಲ್ ಬಿ., ತನಿಖೆ ಯಾವುದೇ ಕಾರಣಕ್ಕೂ ದಾರಿ ತಪ್ಪಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇಲಾಖೆಯ ಕೆಲ ಅಧಿಕಾರಿಗಳ ಶಾಮೀಲಿನ ಕುರಿತು ಆರೋಪಗಳು ಕೇಳಿಬಂದಿದ್ದು, ಆ ಆಯಾಮದಲ್ಲಿಯೂ ಸೂಕ್ಷ್ಮವಾಗಿ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.ಪ್ರಕರಣದ ತನಿಖೆ ತಮ್ಮ ನೇರ ಉಸ್ತುವಾರಿಯಲ್ಲಿ ನಡೆಯುತ್ತಿದ್ದು, ತಪ್ಪಿತಸ್ಥರೆಲ್ಲರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈಗಾಗಲೇ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಜೋಗ ಸಮೀಪದ ಸಿದ್ಧಾಪುರ ಬಳಿಯ ಕಾಡಿನಲ್ಲಿ ಪತ್ತೆಯಾದ ಬಾಲಕಿಯ ಶವದ ಅವಶೇಷಗಳನ್ನು ವಶಕ್ಕೆ ಪಡೆದು ವಿಧಿವಿಜ್ಞಾನ ಪ್ರಯೋಗಾಲಯ (FSL) ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆ ಪ್ರಗತಿಯಲ್ಲಿರುವುದರಿಂದ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಎಸ್ಪಿ ತಿಳಿಸಿದರು.
ಪ್ರಕರಣದ ಕುರಿತು ವಿವಿಧ ಸಂಘಟನೆಗಳು ನಡೆಸಿರುವ ಪ್ರತಿಭಟನೆಗಳು ಹಾಗೂ ಸಲ್ಲಿಸಿರುವ ಆರೋಪಗಳನ್ನು ದಾಖಲಿಸಿಕೊಂಡಿದ್ದು, ಎಲ್ಲ ಆಯಾಮಗಳಲ್ಲಿಯೂ ಸಮಗ್ರ ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದರು.
ಈ ವೇಳೆ ಮಾತನಾಡಿದ ಸಾಲೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹನುಮಂತನಾಯ್ಕ, ಈ ಪ್ರಕರಣ ಇಡೀ ಸಮಾಜ ಹಾಗೂ ವ್ಯವಸ್ಥೆಯ ವೈಫಲ್ಯವನ್ನು ಬಯಲಿಗೆಳೆದಿದೆ ಎಂದು ಆರೋಪಿಸಿದರು. ಬಾಲಕಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ ಕಾರ್ಮಿಕ ಇಲಾಖೆ ಗಮನಹರಿಸಿಲ್ಲ. ಶಾಲೆ ತೊರೆದಿದ್ದರೂ ಶಿಕ್ಷಕರು ಹಾಗೂ ಅಂಗನವಾಡಿ ಸಿಬ್ಬಂದಿ ಗಮನಿಸಿಲ್ಲ. ಒಂಟಿ ಪೋಷಕರ ಮಕ್ಕಳ ಮೇಲೆ ನಿಗಾ ಇಡುವ ವ್ಯವಸ್ಥೆಯೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸದ ಕಾರಣ ಇಂತಹ ದುರ್ಘಟನೆ ಸಂಭವಿಸಿದೆ ಎಂದು ಹೇಳಿದರು.
‘ಮಿಷನ್ ಸುರಕ್ಷಾ’ ಯೋಜನೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದರೆ ಇಂತಹ ಘಟನೆಗಳನ್ನು ತಡೆಯಬಹುದಾಗಿತ್ತು ಎಂದು ಅವರು ಅಭಿಪ್ರಾಯಪಟ್ಟರು.