ಹೊಸನಗರ : ಸೊನಲೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಚಾಕುವಿನಿಂದ ಇರಿದು ವ್ಯಕ್ತಿಯ ಕೊಲೆ
A timber cutting worker was allegedly murdered by two co-workers in Sonale village of Hosanagara taluk, Shivamogga district, after an argument over family matters. Hosanagara Police have registered a murder case and launched an investigation.
ಹೊಸನಗರ: ಸಹೋದ್ಯೋಗಿಯ ಸಂಸಾರದ ವಿಚಾರವಾಗಿ ಬುದ್ಧಿವಾದ ಹೇಳಿದ್ದನ್ನು ಮನಸ್ಸಿಗೆ ತೆಗೆದುಕೊಂಡು ಇಬ್ಬರು ಸೇರಿ ಟಿಂಬರ್ ಕಟಿಂಗ್ ಕಾರ್ಮಿಕನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸೊನಲೆ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.
ಮೃತರನ್ನು ಪರಶುರಾಮ ರಾಮಪ್ಪ ಲಮಾಣಿ (ಇಚನಹಳ್ಳಿ ತಾಂಡ, ದೇವಿಕೊಪ್ಪ ಅಂಚೆ, ಕಲಘಟಗಿ ತಾಲೂಕು, ಧಾರವಾಡ ಜಿಲ್ಲೆ) ಎಂದು ಗುರುತಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪರಶುರಾಮ ಶೆಟ್ಟಪ್ಪ ತಂಬೂರಿ ಹಾಗೂ ಅರುಣ ಪುನ್ನಪ್ಪ ಲಮಾಣಿ ವಿರುದ್ಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಏನಿದು ಘಟನೆ?
ಪೊಲೀಸರ ಮಾಹಿತಿ ಪ್ರಕಾರ, ಧಾರವಾಡ ಜಿಲ್ಲೆಯ ಇಚನಹಳ್ಳಿ ತಾಂಡದ ಆರು ಮಂದಿ ಕಾರ್ಮಿಕರು ಕಳೆದ ಮೂರು ತಿಂಗಳಿನಿಂದ ಹೊಸನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಟಿಂಬರ್ ಕಟಿಂಗ್ ಕೆಲಸ ಮಾಡುತ್ತಿದ್ದರು. ಇವರು ಸೊನಲೆ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಪ್ರತಿದಿನ ಕೆಲಸಕ್ಕೆ ತೆರಳುತ್ತಿದ್ದರು.
ಶನಿವಾರ ಸಂಜೆ ಕೆಲಸ ಮುಗಿಸಿ ಮನೆಗೆ ಬಂದ ಬಳಿಕ ಕೆಲವರು ಹೊಸನಗರ ಸಂತೆಯಿಂದ ತರಕಾರಿ ಹಾಗೂ ಮದ್ಯ ತಂದು ಚಿಕನ್ ಅಡುಗೆ ಮಾಡಿದ್ದರು. ಈ ವೇಳೆ ಮದ್ಯಪಾನದ ಸಂದರ್ಭದಲ್ಲಿ ಅರುಣನ ಕುಟುಂಬದ ವಿಚಾರವಾಗಿ ಮೃತ ಪರಶುರಾಮ ಲಮಾಣಿ ಬುದ್ಧಿವಾದ ಹೇಳಿದ್ದು, ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ.
ಮೊದಲು ಅಲ್ಲಿದ್ದ ಸಹೋದ್ಯೋಗಿಗಳು ಜಗಳವನ್ನು ಶಮನಗೊಳಿಸಿದರೂ, ಸ್ವಲ್ಪ ಸಮಯದ ಬಳಿಕ ಅರುಣ ಮತ್ತೆ ಮನೆಗೆ ನುಗ್ಗಿ ಪರಶುರಾಮ ಲಮಾಣಿ ಅವರ ಕಾಲುಗಳನ್ನು ಹಿಡಿದಿದ್ದಾನೆ ಎನ್ನಲಾಗಿದೆ. ಇದೇ ವೇಳೆ ಪರಶುರಾಮ ಶೆಟ್ಟಪ್ಪ ತಂಬೂರಿ ಅಡುಗೆ ಮನೆಯಿಂದ ತರಕಾರಿ ಕತ್ತರಿಸುವ ಚಾಕು ತಂದು ಪರಶುರಾಮ ಲಮಾಣಿ ಅವರ ಕುತ್ತಿಗೆಯ ಬಲಭಾಗಕ್ಕೆ ಇರಿದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಸ್ಥಳದಲ್ಲೇ ಸಾವು :
ಚಾಕು ಇರಿತದಿಂದ ತೀವ್ರ ರಕ್ತಸ್ರಾವಗೊಂಡ ಪರಶುರಾಮ ಲಮಾಣಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ 112 ತುರ್ತು ಸೇವೆಗೆ ಕರೆ ಮಾಡಿ ಸಹಾಯ ಕೋರಲಾಗಿತ್ತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಮೃತರ ಸಹೋದ್ಯೋಗಿ ಲಕ್ಷ್ಮಣ ಗೋವಿಂದ ರಾಠೋಡ ನೀಡಿದ ದೂರಿನ ಮೇರೆಗೆ ಹೊಸನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಸ್ಥಳಕ್ಕೆ ಎಸ್ ಪಿ ನಿಖಿಲ್ ಭೇಟಿ :
ಇನ್ನೂ ಘಟನಾ ಸ್ಥಳಕ್ಕೆ ಶನಿವಾರ ತಡರಾತ್ರಿ ಎಸ್ ಪಿ ನಿಖಿಲ್ ಭೇಟಿ ನೀಡಿ ಒಅರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣದ ತನಿಖೆಯನ್ನು ಹೊಸನಗರ ಪೊಲೀಸ್ ಠಾಣೆಯ ಪಿಎಸ್ಐ ಶಂಕರಗೌಡ ಪಾಟೀಲ್ ನೇತೃತ್ವದಲ್ಲಿ ಮುಂದುವರಿಸಲಾಗಿದೆ.