38 ವರ್ಷಗಳ ದೇಶಸೇವೆ ಬಳಿಕ ಸ್ವಗ್ರಾಮಕ್ಕೆ ಮರಳಿದ ನಿವೃತ್ತ ಸೈನಿಕ ಕೆ.ವಿ. ಕೃಷ್ಣಮೂರ್ತಿಗೆ ಭವ್ಯ ಸ್ವಾಗತ
Ripponpet welcomed retired CRPF veteran K.V. Krishnamurthy with a grand procession and public felicitation after 38 years of dedicated service in various parts of India.
ರಿಪ್ಪನ್ಪೇಟೆ, ಜೂನ್ 3: ದೇಶಸೇವೆಯಲ್ಲಿ ಸುಮಾರು 38 ವರ್ಷಗಳ ಕಾಲ ವಿವಿಧ ರಾಜ್ಯಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಸೈನಿಕ ಕೆ.ವಿ. ಕೃಷ್ಣಮೂರ್ತಿ ಅವರಿಗೆ ರಿಪ್ಪನ್ಪೇಟೆಯಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು.
ಪಟ್ಟಣದ ಸಿದ್ದಪ್ಪನಗುಡಿಯಿಂದ ಆರಂಭವಾದ ಸ್ವಾಗತ ಮೆರವಣಿಗೆಯಲ್ಲಿ ದೇಶಾಭಿಮಾನಿಗಳು, ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮಳೆಯ ನಡುವೆಯೂ ಉತ್ಸಾಹದಿಂದ ಭಾಗವಹಿಸಿದರು. ಡೊಳ್ಳು-ಕುಣಿತ, ದೇಶಭಕ್ತಿ ಘೋಷಣೆಗಳು ಹಾಗೂ ಜೈಕಾರಗಳ ನಡುವೆ ಸೈನಿಕರನ್ನು ಬರಮಾಡಿಕೊಳ್ಳಲಾಯಿತು.
ಕೆ.ವಿ. ಕೃಷ್ಣಮೂರ್ತಿ ಅವರು ಸಿಆರ್ಪಿಎಫ್, ಆರ್ಎಎಫ್ ಹಾಗೂ ಬ್ಲಾಕ್ ಕ್ಯಾಟ್ ಕಮಾಂಡೋ ಘಟಕಗಳಲ್ಲಿ ಸೇವೆ ಸಲ್ಲಿಸಿದ್ದು, ಅಸ್ಸಾಂ, ಪಂಜಾಬ್, ನಾಗಾಲ್ಯಾಂಡ್, ಶ್ರೀನಗರ ಹಾಗೂ ಆಂಧ್ರ ಪ್ರದೇಶ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಸೇವಾ ಅವಧಿಯಲ್ಲಿ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಬಡ್ತಿ ಹೊಂದಿದ್ದ ಅವರು, ಇತ್ತೀಚೆಗೆ ನಿವೃತ್ತರಾಗಿ ಸ್ವಗ್ರಾಮಕ್ಕೆ ಮರಳಿದ್ದಾರೆ.
ದೇಶಕ್ಕಾಗಿ ದೀರ್ಘಕಾಲ ಸೇವೆ ಸಲ್ಲಿಸಿದ ಸೈನಿಕನಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ವಿಶೇಷ ಸ್ವಾಗತ ಕಾರ್ಯಕ್ರಮ ಆಯೋಜಿಸಿದ್ದರು. ಮೆರವಣಿಗೆ ವಿನಾಯಕ ವೃತ್ತದಲ್ಲಿ ಸಮಾಪ್ತಿಗೊಂಡ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಹಿಂದೂ ಜಾಗರಣ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಅವರನ್ನು ಸನ್ಮಾನಿಸಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಹೈಕೋರ್ಟ್ ವಕೀಲ ರಂಜನ್ ಆರ್. ಸ್ವಾಗತಿಸಿ ವಂದಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಸೈನಿಕ ಕೆ.ವಿ. ಕೃಷ್ಣಮೂರ್ತಿ ಅವರ ಪತ್ನಿ ಶಿಕ್ಷಕಿ ಸೌಭಾಗ್ಯ ಹೆಚ್.ಎ., ಪುತ್ರ ಹಿತೇಶ್ ಕೆ., ಪುತ್ರಿ ತಿಲಕಶ್ರೀ, ನಿವೃತ್ತ ಸೈನಿಕರ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.