Headlines

ಕೇರಳ ಸಚಿವ ಸಂಪುಟಕ್ಕೆ ಸಾಗರದ ಅಳಿಯ ಪಿ.ಸಿ. ವಿಷ್ಣುನಾಥ್ ಸೇರ್ಪಡೆ

ಕೇರಳ ಸಚಿವ ಸಂಪುಟಕ್ಕೆ ಸಾಗರದ ಅಳಿಯ ಪಿ.ಸಿ. ವಿಷ್ಣುನಾಥ್ ಸೇರ್ಪಡೆ

The induction of Kerala Congress Cabinet Minister P.C. Vishnunadh brings joy to Tumari in Sagar taluk, as he is married to local Kannada poet Ha.Ma. Kanaka.

​ಶಿವಮೊಗ್ಗ: ವಿ.ಡಿ. ಸತೀಶನ್ ನೇತೃತ್ವದ ನೂತನ ಕೇರಳ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿ ಪಿ.ಸಿ. ವಿಷ್ಣುನಾಥ್ ಅವರಿಗೆ ಸ್ಥಾನ ಒಲಿದಿರುವುದು, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಪುಟ್ಟ ದ್ವೀಪ ಪ್ರದೇಶವಾದ ತುಮರಿಯ ಜನರಲ್ಲಿ ಸಂಭ್ರಮ ಮನೆಮಾಡುವಂತೆ ಮಾಡಿದೆ.

ಕರ್ನಾಟಕದ ನಂಟು:

ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಪಿ.ಸಿ. ವಿಷ್ಣುನಾಥ್ ಅವರು, ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲ್ಕೆರೆ ಗ್ರಾಮದವರಾದ ಕನ್ನಡದ ಕವಯಿತ್ರಿ ಹಾಗೂ ರಂಗಕರ್ಮಿ ಹಾ.ಮ. ಕನಕ ಅವರ ಪತಿ. 2005ರಲ್ಲಿ ಗುಜರಾತ್‌ನಲ್ಲಿ ನಡೆದ ಮಹಾತ್ಮ ಗಾಂಧಿಯವರ ದಂಡಿ ಸತ್ಯಾಗ್ರಹದ 75ನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದ ಇವರಿಬ್ಬರು, ಆ ನಂತರ ಎರಡು ವರ್ಷಗಳ ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ರಂಗಭೂಮಿ ಕಲಾವಿದೆಯಾಗಿರುವ ಕನಕ ಅವರು ಕೇರಳದಲ್ಲಿ ನಡೆಯುವ ‘ಪಂಪ’ (PAMPA) ಸಾಹಿತ್ಯ ಉತ್ಸವವನ್ನು ಆಯೋಜಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ರಾಜಕೀಯ ಹಿನ್ನೆಲೆ ಹಾಗೂ ಬೆಳವಣಿಗೆ:

​ನಾಲ್ಕು ಬಾರಿಯ ಶಾಸಕ: ವಿಷ್ಣುನಾಥ್ ಅವರು ಚೆಂಗನ್ನೂರು ಕ್ಷೇತ್ರದಿಂದ ಎರಡು ಬಾರಿ ಹಾಗೂ ಕೊಲ್ಲಂ ಜಿಲ್ಲೆಯ ಕುಂಡರ ಕ್ಷೇತ್ರದಿಂದ ಕಳೆದ ಎರಡು ಚುನಾವಣೆಗಳಲ್ಲಿ ಗೆಲುವು ಸಾಧಿಸಿ, ಒಟ್ಟು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಉಮ್ಮನ್ ಚಾಂಡಿ ಗರಡಿಯಲ್ಲಿ ಪಳಗಿದ ನಾಯಕ:

ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದ ಕುಟುಂಬದಿಂದ ಬಂದ ಇವರು, ಕಾಲೇಜು ದಿನಗಳಲ್ಲೇ ನಾಯಕರಾಗಿ ಬೆಳೆದರು. “ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು ವಿಷ್ಣುನಾಥ್ ಅವರ ಸಾಮರ್ಥ್ಯವನ್ನು ಗುರುತಿಸಿ, ಅವರ ಆರಂಭಿಕ ರಾಜಕೀಯ ಜೀವನಕ್ಕೆ ಅತ್ಯುತ್ತಮ ಮಾರ್ಗದರ್ಶನ ನೀಡಿದರು” ಎಂದು ಸಚಿವರ ಬಾವ (ಕನಕ ಅವರ ಸಹೋದರ) ರಘು ಹಾಲ್ಕೆರೆ ಸ್ಮರಿಸುತ್ತಾರೆ.

ಊರಿನ ಮೇಲಿನ ಪ್ರೀತಿ:

ಸಚಿವ ಪಿ.ಸಿ. ವಿಷ್ಣುನಾಥ್ ಅವರು ಬಿಡುವಿದ್ದಾಗಲೆಲ್ಲಾ ತಮ್ಮ ಪತ್ನಿ ಹಾಗೂ ಪುತ್ರಿ ಅನ್ನಪೂರ್ಣೇಶ್ವರಿಯವರೊಂದಿಗೆ ನಿಯಮಿತವಾಗಿ ಹಾಲ್ಕೆರೆಗೆ ಭೇಟಿ ನೀಡುತ್ತಾರೆ. ಈ ಭಾಗದ ಪ್ರಸಿದ್ಧ ಸಮಾಜವಾದಿ ಹಾಗೂ ಸಾಹಿತಿಯಾಗಿದ್ದ ತಮ್ಮ ಮಾವ, ದಿವಂಗತ ಹಾ.ಮ. ಭಟ್ ಅವರ ಸ್ಮರಣಾರ್ಥ ರಘು ಹಾಲ್ಕೆರೆ ಅವರು ತುಮರಿಯಲ್ಲಿ ಪ್ರತಿವರ್ಷ ಆಯೋಜಿಸುವ ಮೂರು ದಿನಗಳ ವಾರ್ಷಿಕ ಸಾಹಿತ್ಯ ಕಾರ್ಯಕ್ರಮದಲ್ಲಿ ವಿಷ್ಣುನಾಥ್ ಅವರು ತಪ್ಪದೇ ಪಾಲ್ಗೊಳ್ಳುವ ಮೂಲಕ ತಮ್ಮ ಊರಿನ ನಂಟನ್ನು ಉಳಿಸಿಕೊಂಡಿದ್ದಾರೆ.

About The Author