ಹುಂಚಾ ಸರ್ವೇ ನಂ 99: ಮರ ಕಡಿತ, ರಸ್ತೆ ವಿವಾದ ಹಾಗೂ ವಾಸ್ತವದ ನೆಲೆಗಟ್ಟು
An investigative look into the conflict at Survey No. 99 in Huncha, Hosanagara. Beyond the alleged illegal tree felling of valuable timber, this report uncovers a complex road dispute, the plight of an innocent ginger farmer caught in the crossfire, and demands impartial action against widespread land encroachment in the Malnad region.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನೆಬೈಲು ಗ್ರಾಮದ ಸರ್ವೇ ನಂ 99ರಲ್ಲಿ ನಡೆದಿರುವ ಮರ ಕಡಿತ ಮತ್ತು ತತ್ಸಂಬಂಧಿತ ಬೆಳವಣಿಗೆಗಳು ಪ್ರಸ್ತುತ ಹಲವು ಆಯಾಮಗಳನ್ನು ಪಡೆದುಕೊಂಡಿವೆ.
ಕೋಟ್ಯಂತರ ರೂಪಾಯಿ ಮೌಲ್ಯದ ಬೀಟೆ, ಸಾಗುವಾನಿ ಸೇರಿದಂತೆ ಕಾಡುಜಾತಿಯ ಮರಗಳನ್ನು ಅಕ್ರಮವಾಗಿ ಕಡಿಯಲಾಗಿದೆ ಎಂದು ಆರೋಪಿಸಿ ಸಮಟಗಾರು ಗ್ರಾಮಸ್ಥರು ನಾಡಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಈ ಸಂಬಂಧ ಅರಣ್ಯ ಇಲಾಖೆ ಓರ್ವನನ್ನು ಬಂಧಿಸಿದ್ದು, ಪ್ರಕರಣದ ಹಿಂದಿರುವ ನೈಜ ಕಾರಣಗಳ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.
ಈ ಘಟನೆಯನ್ನು ನಿಷ್ಪಕ್ಷಪಾತವಾಗಿ ಗಮನಿಸಿದಾಗ, ಇದು ಕೇವಲ ಪರಿಸರ ಕಾಳಜಿಯ ವಿಷಯವಷ್ಟೇ ಆಗಿರದೆ, ಸ್ಥಳೀಯ ಮೂಲಸೌಕರ್ಯ ಹಾಗೂ ಜಾಗದ ವಿವಾದಗಳನ್ನೂ ಒಳಗೊಂಡಿರುವುದು ಸ್ಪಷ್ಟವಾಗುತ್ತದೆ.
ಬಲ್ಲ ಮೂಲಗಳ ಪ್ರಕಾರ, ಜಾಗದ ಮಾಲೀಕರು 2.30 ಎಕರೆ ಖಾತೆ ಜಾಗ ಹಾಗೂ 4 ಎಕರೆ ಬಗರ್ಹುಕುಂ (ಸರ್ಕಾರಿ ಜಾಗದ ಸಾಗುವಳಿ) ಜಾಗವನ್ನು ಹೊಂದಿದ್ದಾರೆ. ವಿವಾದದ ಮೂಲ ಬಿಂದುವಿರುವುದು ‘ರಸ್ತೆ ಸಂಪರ್ಕ’ದಲ್ಲಿ.ಈ ಜಾಗದ ಕೆಳಭಾಗದಲ್ಲಿರುವ 10 ರಿಂದ 15 ತೋಟಗಳಿಗೆ ತೆರಳಲು ಇದೇ ಜಾಗದ ಮೂಲಕ ರಸ್ತೆ ಹಾದುಹೋಗಬೇಕಿದೆ.ಪರ್ಯಾಯ ಮಾರ್ಗವಿಲ್ಲದ ಕಾರಣ, ದಾರಿ ಬಿಟ್ಟುಕೊಡುವಂತೆ ಕೆಳಗಿನ ತೋಟದ ಮಾಲೀಕರು ಹಲವು ಬಾರಿ ಮನವಿ ಮಾಡಿದ್ದರು.ಜಾಗದ ಮಾಲೀಕರು ಈ ಒಡಂಬಡಿಕೆಗೆ ಸಮ್ಮತಿಸದಿದ್ದಾಗ, ಈ ವಿಷಯ ಸಹಜವಾಗಿಯೇ ಸಂಘರ್ಷಕ್ಕೆ ತಿರುಗಿದೆ. ಹೀಗಾಗಿ, ಪ್ರಸ್ತುತ ನಡೆಯುತ್ತಿರುವ ಹೋರಾಟವು ಕೇವಲ ಪರಿಸರ ಕಾಳಜಿಯನ್ನಷ್ಟೇ ಹೊಂದಿದೆಯೇ ಅಥವಾ ರಸ್ತೆ ವಿವಾದದ ಅಸಮಾಧಾನದ ಪ್ರತಿರೂಪವೇ ಎಂಬ ಪ್ರಶ್ನೆಗಳು ಮೂಡಿವೆ.
ಅರಣ್ಯ ನಾಶದ ಆರೋಪ ಮತ್ತು ಇಲಾಖೆಯ ಸ್ಪಷ್ಟನೆ
ಬಗರ್ಹುಕುಂ ಜಾಗದಲ್ಲಿದ್ದ ಮರಗಳನ್ನು ಏಕಾಏಕಿ ತೆರವುಗೊಳಿಸಿರುವುದು ಕಾನೂನುಬಾಹಿರ ಹಾಗೂ ಶಿಕ್ಷಾರ್ಹ ಅಪರಾಧವಾಗಿದೆ. ಅರಣ್ಯ ಸಂಪತ್ತನ್ನು ಯಾರು ನಾಶ ಮಾಡಿದರೂ ಅವರ ವಿರುದ್ಧ ಕಠಿಣ ಕ್ರಮ ಜರುಗಲೇಬೇಕು. ಆದರೆ, ಆರೋಪಗಳಿಗೂ ಮತ್ತು ಅರಣ್ಯ ಇಲಾಖೆಯ ದಾಖಲೆಗಳಿಗೂ ವ್ಯತ್ಯಾಸವಿದೆ. ಗ್ರಾಮಸ್ಥರು ಅಪಾರ ಪ್ರಮಾಣದ ಮರಗಳ ಮಾರಣಹೋಮವಾಗಿದೆ ಎನ್ನುತ್ತಿದ್ದರೆ, ಅರಣ್ಯ ಇಲಾಖೆಯು ಕೇವಲ ‘ಒಂದು ಬೀಟೆ ಮರ ಹಾಗೂ ಇತರೆ ಜಾತಿಯ ಮರಗಳನ್ನು ಬುಡ ಸಮೇತ ಕಿತ್ತು ನಾಟ ಹಾಗೂ ಸೌದೆಯನ್ನಾಗಿ ಪರಿವರ್ತಿಸಿದ್ದಾರೆ ಎಂದು ಮಾಹಿತಿ ನೀಡಿದೆ. ಈ ವ್ಯತ್ಯಾಸವು ಇಲಾಖೆಯ ಕಾರ್ಯವೈಖರಿ ಹಾಗೂ ನಿಗಾದ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಮೂಡಿಸುವಂತಿದೆ.
ಈ ಇಡೀ ಪ್ರಕರಣದಲ್ಲಿ ಅತಿ ಹೆಚ್ಚು ಸಂಕಷ್ಟಕ್ಕೆ ಸಿಲುಕಿರುವುದು ಶುಂಠಿ ಬೆಳೆಯಲು ಬಂದ ರೈತ. ಆರ್ಥಿಕ ಪ್ರಗತಿಯ ದೃಷ್ಟಿಯಿಂದ ಜಾಗದ ಮಾಲೀಕರೊಂದಿಗೆ ಕರಾರು ಮಾಡಿಕೊಂಡು ಶುಂಠಿ ಕೃಷಿಗಾಗಿ ಜಾಗವನ್ನು ಲೆವೆಲ್ ಮಾಡಿಸಿದ್ದರು. ಆದರೆ, ಮರ ಕಡಿತದ ಪ್ರಕರಣಕ್ಕೂ ಈ ರೈತನಿಗೂ ನೇರ ಸಂಬಂಧವಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳದೆ, ಮಧ್ಯರಾತ್ರಿ ರೈತನ ಮನೆಗೆ ಅಧಿಕಾರಿಗಳು ನುಗ್ಗಿರುವುದು ಆಕ್ಷೇಪಣೆಗೆ ಕಾರಣವಾಗಿದೆ. ಅಕ್ರಮ ಮರ ಕಡಿತಗಾರರ ವಿರುದ್ಧ ತೋರಬೇಕಾದ ಕಟ್ಟುನಿಟ್ಟಿನ ಕ್ರಮವನ್ನು, ಕೃಷಿ ಮಾಡಲು ಬಂದ ರೈತನ ಮೇಲೆ ಪ್ರಯೋಗಿಸಿರುವುದು ನ್ಯಾಯಸಮ್ಮತವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಒತ್ತುವರಿ ತೆರವು: ಸಮಾನ ನ್ಯಾಯದ ಆಗ್ರಹ
ಮಲೆನಾಡಿನಲ್ಲಿ ‘ಖಾತೆ ಜಾಗದ ಜೊತೆಗೆ ಒತ್ತುವರಿ’ ಎಂಬುದು ಸಾಮಾನ್ಯ ಎಂಬಂತಾಗಿದೆ. ಪ್ರಸ್ತುತ ಮಾಲೀಕರು 4 ಎಕರೆ ಒತ್ತುವರಿ ಮಾಡಿದ್ದಾರೆ ಎಂಬುದು ನಿಜವಾದರೆ ಕೂಡಲೇ ತೆರವುಗೊಳಿಸಬೇಕು ಹಾಗೇಯೇ ಒತ್ತುವರಿ ಎನ್ನುವುದು ಕೇವಲ ಈ ಜಾಗದ ಮಾಲೀಕನದ್ದಲ್ಲ. ಇದೇ ಸರ್ವೇ ನಂಬರ್ ಮತ್ತು ಹುಂಚ ಹೋಬಳಿಯಲ್ಲಿ ಹತ್ತಾರು ಎಕರೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಹಲವರಿದ್ದಾರೆ.
ಸರ್ಕಾರವು ಕೇವಲ ಒಂದು ಪ್ರಕರಣವನ್ನು ಗುರಿಯಾಗಿಸುವ ಬದಲು, ವಿಶೇಷ ಕಾರ್ಯಪಡೆ ರಚಿಸಿ ಎಲ್ಲಾ ಅಕ್ರಮ ಒತ್ತುವರಿಗಳನ್ನು ತೆರವುಗೊಳಿಸಿ ಸರ್ಕಾರಿ ಉದ್ದೇಶಕ್ಕೆ ಬಳಸಿಕೊಳ್ಳಬೇಕು ಎಂಬುದು ಸ್ಥಳೀಯರ ಹಾಗೂ ಪರಿಸರವಾದಿಗಳ ನ್ಯಾಯಯುತ ಬೇಡಿಕೆಯಾಗಿದೆ.
ಈ ಪ್ರಕರಣದಲ್ಲಿ ರಸ್ತೆಗಾಗಿ ಪಟ್ಟು ಹಿಡಿದಿರುವ ತೋಟದ ಮಾಲೀಕರ ಹಕ್ಕುಗಳು, ಜಾಗವನ್ನು ರಕ್ಷಿಸಿಕೊಳ್ಳಲು ನೋಡುತ್ತಿರುವ ಮಾಲೀಕನ ನಿಲುವು, ಅರಣ್ಯ ಸಂಪತ್ತನ್ನು ರಕ್ಷಿಸಬೇಕಾದ ಇಲಾಖೆಯ ಜವಾಬ್ದಾರಿ ಹಾಗೂ ಕೃಷಿ ಮಾಡಲು ಬಂದು ಸಿಲುಕಿಕೊಂಡ ರೈತನ ಅಸಹಾಯಕತೆ—ಇವೆಲ್ಲವೂ ಮೇಳೈಸಿವೆ. ನಿಷ್ಪಕ್ಷಪಾತ ತನಿಖೆಯ ಮೂಲಕ ಅರಣ್ಯ ನಾಶ ಮಾಡಿದ ನೈಜ ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಹಾಗೂ ಸಿವಿಲ್ ವಿವಾದಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸಬೇಕು ಎಂಬುದೇ ಸುಸಂಸ್ಕೃತ ಸಮಾಜದ ಆಶಯವಾಗಿದೆ.
ರಫಿ ರಿಪ್ಪನ್ ಪೇಟೆ