

ಹೊನ್ನೇಬೈಲು ಗ್ರಾಮದಲ್ಲಿ ಅರಣ್ಯ ಇಲಾಖೆ ದಾಳಿ: ಬೀಟೆ ನಾಟ ಹಾಗೂ ಸೌದೆ ವಶ – ಆರೋಪಿಯ ಬಂಧನ
Hosanagara Forest Department officials have arrested Suresh N.G. for illegal encroachment and timber smuggling in Honnebailu village. Authorities seized valuable teak and mixed wood logs during the raid. Read more about the operation conducted by the Hosanagara Range Forest team.
ಹೊಸನಗರ: ಸರ್ಕಾರಿ ಗೋಮಾಳ ಜಮೀನನ್ನು ಒತ್ತುವರಿ ಮಾಡಿಕೊಂಡು, ಅಕ್ರಮವಾಗಿ ಮರಗಳನ್ನು ಕಡಿದು ನಾಟ ಹಾಗೂ ಸೌದೆಯನ್ನಾಗಿ ಪರಿವರ್ತಿಸಿ ಸಂಗ್ರಹಿಸಿಟ್ಟಿದ್ದ ಆರೋಪಿಯನ್ನು ಹೊಸನಗರ ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.
ಘಟನೆಯ ವಿವರ:
ಹೊಸನಗರ ತಾಲ್ಲೂಕಿನ ಹುಂಚಾ ಹೋಬಳಿಯ ಹೊನ್ನೇಬೈಲು ಗ್ರಾಮದ ಸರ್ವೇ ನಂಬರ್ 99ರ ಗೋಮಾಳ ಪ್ರದೇಶದಲ್ಲಿ ಅಕ್ರಮ ಒತ್ತುವರಿ ನಡೆದಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಅರಣ್ಯಾಧಿಕಾರಿಗಳು ದಿನಾಂಕ 12-05-2026 ರಂದು ದಾಳಿ ನಡೆಸಿದ್ದರು. ಈ ವೇಳೆ ನಿಟ್ಟೂರು ನಿವಾಸಿ ಸುರೇಶ ಎನ್.ಜಿ (50 ವರ್ಷ) ಎಂಬುವವರು ಬೀಟೆ ಹಾಗೂ ಇತರೆ ಬೆಲೆಬಾಳುವ ಜಾತಿಯ ಮರಗಳನ್ನು ಬುಡಸಮೇತ ಕಿತ್ತು, ಅವುಗಳನ್ನು ಅಕ್ರಮವಾಗಿ ನಾಟ ಮತ್ತು ಸೌದೆಯನ್ನಾಗಿ ಪರಿವರ್ತಿಸಿ ದಾಸ್ತಾನು ಮಾಡಿರುವುದು ಪತ್ತೆಯಾಗಿದೆ.
ಈ ಅಕ್ರಮಕ್ಕೆ ಸಂಬಂಧಿಸಿದಂತೆ ಕರ್ನಾಟಕ ಅರಣ್ಯ ಕಾಯ್ದೆ 1963 ಮತ್ತು ಕರ್ನಾಟಕ ಅರಣ್ಯ ಕಾನೂನು 1969ರ ಅಡಿಯಲ್ಲಿ ಹೊಸನಗರ ವಲಯ ಕಚೇರಿಯಲ್ಲಿ ಮೊಕದ್ದಮೆ ಸಂಖ್ಯೆ: 08/2026-27ನ್ನು ದಾಖಲಿಸಿಕೊಳ್ಳಲಾಗಿದೆ. ದಾಳಿಯ ವೇಳೆ ಪತ್ತೆಯಾದ ಬೀಟೆ ಸೇರಿದಂತೆ ವಿವಿಧ ಜಾತಿಯ ನಾಟ ಹಾಗೂ ಸೌದೆಯನ್ನು ಇಲಾಖಾ ವಶಕ್ಕೆ ಪಡೆದು ಅಮಾನತ್ತುಪಡಿಸಿಕೊಳ್ಳಲಾಗಿದೆ.
ಪ್ರಕರಣ ದಾಖಲಾದ ದಿನದಿಂದ ತಲೆಮರೆಸಿಕೊಂಡಿದ್ದ ಎ1 ಆರೋಪಿ ಸುರೇಶನನ್ನು ಹಿಡಿಯಲು ಕಾರ್ಯಾಚರಣೆ ನಡೆಸಿದ ಅರಣ್ಯ ಸಿಬ್ಬಂದಿ, ಮೇಲಾಧಿಕಾರಿಗಳ ನಿರ್ದೇಶನದಂತೆ ದಿನಾಂಕ 14-05-2026 ರಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಹೊಸನಗರ ವಲಯ ಅರಣ್ಯಾಧಿಕಾರಿಗಳಾದ ಅನಿಲ್ ಕುಮಾರ್ ಎಸ್, ಉಪ ವಲಯ ಅರಣ್ಯಾಧಿಕಾರಿಗಳಾದ ಆಂಜನೇಯ ಎ ಜಿ, ಬಸವರಾಜ್ ಜಿಗಳಿಕೊಪ್ಪ, ಹಾಲಪ್ಪ ಕೆ ಆನವೇರಿ, ಕ್ಷೇಮಾಭಿವೃದ್ಧಿ ನೌಕರರಾದ ಕೃಷ್ಣಮೂರ್ತಿ ಕೆ ಆರ್ ಹಾಗೂ ಅರಣ್ಯ ಇಲಾಖೆಯ ಇತರ ಸಿಬ್ಬಂದಿಗಳು ಭಾಗವಹಿಸಿದ್ದರು.