Headlines

ರಿಪ್ಪನ್‌ಪೇಟೆಯಲ್ಲಿ ಸಡಗರದಿಂದ ರಂಜಾನ್ ಆಚರಣೆ | ಸಾಮರಸ್ಯದಿಂದಲೇ ಸಮಾಜದಲ್ಲಿ ನೆಮ್ಮದಿ: ಮುನೀರ್ ಸಖಾಫಿ

Ramzan was celebrated with great enthusiasm in Ripponpet, with communal prayers at Eidgah grounds. Religious leader Muneer Sakhafi emphasized unity, peace, and harmony among all communities.

ರಿಪ್ಪನ್‌ಪೇಟೆ: ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿ ಹಾಗೂ ಮೆಕ್ಕಾ ಮಸ್ಜಿದ್‌ನ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಭಕ್ತಿ, ಸಡಗರ ಮತ್ತು ಸಂಭ್ರಮದಿಂದ ಆಚರಿಸಿದರು. ಧರ್ಮಗುರುಗಳಾದ ಮುನೀರ್ ಸಖಾಫಿ ಮತ್ತು ಮೌಲಾನಾ ರಫೀದ್ ಹುಸೇನ್ ಅವರ ನೇತೃತ್ವದಲ್ಲಿ ಹಬ್ಬದ ಆಚರಣೆಗಳು ನಡೆದವು.

ಹೊಸನಗರ ರಸ್ತೆಯಿಂದ ಮೆರವಣಿಗೆ ಆರಂಭವಾಗಿ ಸಾಗರ ರಸ್ತೆಯ ಈದ್ಗಾ ಮೈದಾನಕ್ಕೆ ತೆರಳಿದ ಭಕ್ತರು, ಅಲ್ಲಿ ಸಾಮೂಹಿಕ ನಮಾಜ್ ಸಲ್ಲಿಸಿದರು. ಕಳೆದ 29 ದಿನಗಳ ಉಪವಾಸ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದ ಮುಸ್ಲಿಂ ಸಮುದಾಯದವರು, ಚಂದ್ರದರ್ಶನದ ಹಿನ್ನೆಲೆಯಲ್ಲಿ ರಂಜಾನ್ ಹಬ್ಬವನ್ನು ಭಾನುವಾರ ಸಂಭ್ರಮದಿಂದ ಆಚರಿಸಿದರು. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ಭಕ್ತಿಪೂರ್ವಕವಾಗಿ ನಮಾಜ್ ನೆರವೇರಿಸಿ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಬಳಿಕ ಮಾತನಾಡಿದ ಧರ್ಮಗುರು ಮುನೀರ್ ಸಖಾಫಿ, ಪೈಗಂಬರ್ ಅವರ ಜೀವನ ಸಂದೇಶವನ್ನು ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು. ಭಾರತ ದೇಶವು ವಿವಿಧತೆಯಲ್ಲಿ ಏಕತೆಯ ಪ್ರತೀಕವಾಗಿದ್ದು, ಎಲ್ಲ ಧರ್ಮಗಳ ಸಾರ ಒಂದೇ ಆಗಿದೆ. ಯಾವುದೇ ಜಾತಿ-ಧರ್ಮ ಭೇದವಿಲ್ಲದೆ ಭಾವೈಕ್ಯತೆಯಿಂದ ಬದುಕುವುದು ಅತ್ಯಾವಶ್ಯಕ ಎಂದರು.

ಪ್ರಸ್ತುತ ಜಾಗತಿಕ ಪರಿಸ್ಥಿತಿಯಲ್ಲಿ ಯುದ್ಧದ ನೆರಳು ಕವಿದಿರುವುದನ್ನು ಉಲ್ಲೇಖಿಸಿದ ಅವರು, ದೇಶಗಳ ನಡುವೆ ಶಾಂತಿ ಮಾತುಕತೆ ನಡೆಯಲಿ ಮತ್ತು ಜಗತ್ತಿನಲ್ಲಿ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿದರು. ಧರ್ಮಗಳ ನಡುವಿನ ಸಂಘರ್ಷಗಳನ್ನು ಬದಿಗೊತ್ತಿ, ಸಹೋದರತ್ವ ಮತ್ತು ಭ್ರಾತೃತ್ವದ ಮನೋಭಾವದಿಂದ ಬದುಕುವಂತೆ ಕರೆ ನೀಡಿದರು.

ಈ ಸಂಧರ್ಭದಲ್ಲಿ ಜುಮ್ಮಾ ಮಸೀದಿ ಅಧ್ಯಕ್ಷರಾದ ಹಸನಬ್ಬ ಬ್ಯಾರಿ ,ಕಾರ್ಯದರ್ಶಿ ಶೇಖಬ್ಬ ಮೆಕ್ಕಾ ಮಸ್ಜಿದ್ ಅಧ್ಯಕ್ಷರಾದ ಅಮೀರ್ , ಕಾರ್ಯದರ್ಶಿ ಜಾಕೀರ್ ಮುಖಂಡರಾದ ಅರ್ ಎ ಚಾಬುಸಾಬ್,ಅಮೀರ್ ಹಂಜಾ ಗ್ರಾಪಂ ಸದಸ್ಯ ಆಸೀಫ಼್ ಭಾಷಾ, ಆರ್ ಎಸ್ ಶಂಶುದ್ದೀನ್, ಭಾಪುಖಾನ್ , ನಾಸೀರ್ ,ನದೀಮ್  , ರೆಹಮಾನ್ ಚಾಲಿ  ಹಾಗೂ ಇನ್ನಿತರರಿದ್ದರು.

ಸಾಗರದಲ್ಲಿ ಸಂಭ್ರಮದ ರಂಜಾನ್ ಆಚರಣೆ

ಸಾಗರ : ಪಟ್ಟಣದಲ್ಲಿ ಕೆಲ ಮುಸ್ಲಿಮರು ಶುಕ್ರವಾರವೇ ರಂಜಾನ್ ಹಬ್ಬವನ್ನು  ಸಡಗರ ಸಂಭ್ರಮದಿಂದ ಆಚರಿಸಿದರು.

ತಾಲ್ಲೂಕಿನ ಕಾರ್ಗಲ್, ಜೋಗ, ಆನಂದಪುರದ ಮುಂಬಾಳು ಮಸೀದಿ ಸೇರಿದಂತೆ ಸಾಗರ ಪಟ್ಟಣದ ಬದರ್ ಜುಮ್ಮಾ ಮಸೀದಿ,ಅಲ್ ಅಮೀನ್ ಮಸೀದಿ,ಮಸ್ಜಿದ್ ನೂರ್,ಮಹಮ್ಮದೀಯ ಮಸೀದಿ,ಅಲ್ ನೂರ್ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ, ನಮಾಜ್ ನೆರವೇರಿಸಲಾಯಿತು.

ನಂತರ ದಫನ ಭೂಮಿಗೆ ತೆರಳಿ ಅಗಲಿದ ಕುಟುಂಬದ ಸದಸ್ಯರಿಗೆ ಬೇಕಾಗಿ ಪ್ರಾರ್ಥಿಸಿದರು.ಪ್ರಾಥನೆ ನಂತರ ಮುಸ್ಲಿಮರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಪ್ರಾರ್ಥನೆಗೆ ತೆರಳುವ ಮುನ್ನ ಸಮುದಾಯದ ಉಳ್ಳವರು ಬಡವರಿಗೆ ತಮ್ಮ ದುಡಿಮೆಯ ಇಂತಿಷ್ಟು ಅಂಶವನ್ನು ದಾನವಾಗಿ ನೀಡಿದರು. ಕೆಲವರು ಗೋಧಿ, ಅಕ್ಕಿ, ರಾಗಿ ನೀಡಿದರು.

ಈ ಸಂದರ್ಭದಲ್ಲಿ ಬದರ್ ಮಸೀದಿ ಧರ್ಮಗುರು ಅಬ್ದುಲ್ ಕಲಾಂ ಸಅದಿ ತಮ್ಮ ಈದ್ ಸಂದೇಶದಲ್ಲಿ ಯುವಜನತೆ ಮಾದಕ ವ್ಯಸನಗಳಿಗೆ ಬಲಿಯಾಗದಂತೆ ಜಾಗೃತಿ ಮೂಡಿಸಿದರು. ಅಲ್ಲದೆ ಎಲ್ಲರೂ ಪರಸ್ಪರ ಸಹೋದರರಂತೆ ಬದುಕಿ ಶಾಂತಿಯ ವಾತಾವರಣ ನಿರ್ಮಿಸುವಂತೆ ಸೌಹಾರ್ದ ಸಂದೇಶ ನೀಡಿದರು.

ಶಾಸಕ ಗೋಪಾಲಕೃಷ್ಣ ಬೇಳೂರು, ನಗರಸಭೆ ಮಾಜಿ ಸದಸ್ಯರಾದ ಮಹಮ್ಮದ್ ಖಾಸಿಂ,ಟಿಪ್ ಟಾಪ್ ಬಷೀರ್, ತಸ್ರೀಫ್ ಇಬ್ರಾಹಿಂ,ಅಬ್ದುಲ್ ಹಮೀದ್ ,ಎಎಸ್ಪಿ ಬೆನಕ ಪ್ರಸಾದ್ ಈದುಲ್ ಫಿತರ್ ಹಬ್ಬದ ಶುಭ ಹಾರೈಸಿದರು.

About The Author