POSTMANNEWS

ನೈಜ ಸುದ್ದಿ ನೇರ ಬಿತ್ತರ..

ಆಗ ಬೂದಿ, ಇಂದು ಬಂಗಾರ: ತೆಂಗಿನಕಾಯಿ ಗೆರಟೆಯಿಂದ ಹುಟ್ಟಿದ ಆರ್ಥಿಕ ಕ್ರಾಂತಿ | Coconut Shell Demand

ಒಂದು ಕಾಲದಲ್ಲಿ ತ್ಯಾಜ್ಯವಾಗಿದ್ದ ತೆಂಗಿನಕಾಯಿ ಗೆರಟೆ ಇಂದು ಲಕ್ಷಾಂತರ ರೂಪಾಯಿಗಳ ವಹಿವಾಟು ನಡೆಸುವ ಉದ್ಯಮವಾಗಿದೆ. ಕರಾವಳಿ ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಗೆರಟೆ ಬೇಡಿಕೆ ಹೇಗೆ ಹೆಚ್ಚಾಯಿತು? ಸಂಪೂರ್ಣ ವರದಿ.

ಆಗ ಬೂದಿ, ಇಂದು ಬಂಗಾರ: ತೆಂಗಿನಕಾಯಿ ಗೆರಟೆಯಿಂದ ಹುಟ್ಟಿದ ಹೊಸ ಆರ್ಥಿಕ ಕ್ರಾಂತಿ

ಒಂದು ಕಾಲದಲ್ಲಿ ಪುಕ್ಕಟೆಯಾಗಿ ಕೊಟ್ಟರೂ ಬೇಡವೆಂದು ಕೈಬಿಡಲಾಗುತ್ತಿದ್ದ ತೆಂಗಿನಕಾಯಿ ಚಿಪ್ಪು–ಗೆರಟೆ ಇಂದು ಲಕ್ಷಾಂತರ ರೂಪಾಯಿಗಳ ವಹಿವಾಟು ನಡೆಸುವ ದೊಡ್ಡ ಉದ್ಯಮವಾಗಿ ರೂಪುಗೊಂಡಿದೆ. ಅಡುಗೆಮನೆಯ ಕಸ, ಸುಟ್ಟು ಬೂದಿಯಾಗುತ್ತಿದ್ದ ಅಥವಾ ತ್ಯಾಜ್ಯದ ಗುಡ್ಡೆ ಸೇರುತ್ತಿದ್ದ ಗೆರಟೆ, ಈಗ ರೈತರಿಂದ ಹಿಡಿದು ಮನೆಮಂದಿವರೆಗೂ ಆದಾಯದ ಹೊಸ ಮೂಲವಾಗಿದೆ.

ಕರ್ನಾಟಕದ ಕರಾವಳಿ ಭಾಗಗಳು, ಕೇರಳ ಮತ್ತು ತಮಿಳುನಾಡಿನವರೆಗೂ ಈ ಗೆರಟೆ ವ್ಯಾಪಾರ ವೇಗವಾಗಿ ವಿಸ್ತರಿಸುತ್ತಿದ್ದು, ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ “ಅಡುಗೆಮನೆಯ ಕಸ”ವೇ ಸಂಗ್ರಹ ಉದ್ಯಮವಾಗಿ ಬೆಳೆದಿದೆ.

ಗೆರಟೆಗೆ ಏಕೆ ಇಷ್ಟೊಂದು ಬೇಡಿಕೆ?

ದಕ್ಷಿಣ ಭಾರತದಲ್ಲಿ ತೆಂಗಿನಕಾಯಿ ಆಹಾರ ಪದಾರ್ಥವಾಗಿ ವ್ಯಾಪಕ ಬಳಕೆಯಲ್ಲಿದೆ. ಕರ್ನಾಟಕದ ಕರಾವಳಿ ಭಾಗಗಳಲ್ಲಿ ಹಸಿ ತೆಂಗಿನಕಾಯಿ ಅಡುಗೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇದರಿಂದ ಪ್ರತಿದಿನವೂ ಅಪಾರ ಪ್ರಮಾಣದ ಗೆರಟೆ ಹೊರಬರುತ್ತದೆ. ಹಿಂದೆ ಇದು ಕೇವಲ ಕರಕುಶಲ ವಸ್ತುಗಳ ತಯಾರಿಕೆಗೆ ಸೀಮಿತವಾಗಿದ್ದರೆ, ಇತ್ತೀಚೆಗೆ ಇದ್ದಿಲು (ಚಾರ್ಕೋಲ್) ತಯಾರಿಸುವ ಕಾರ್ಖಾನೆಗಳ ಬೇಡಿಕೆ ಹೆಚ್ಚಿದ ಕಾರಣ ಗೆರಟೆಯ ಮೌಲ್ಯವೂ ಏರಿಕೆಯಾಗಿದೆ.

ತೆಂಗಿನಕಾಯಿ ವ್ಯಾಪಾರಿಗಳ ಪ್ರಕಾರ, “ಹಿಂದೆ ಗೆರಟೆ ಸಣ್ಣ ಪ್ರಮಾಣದಲ್ಲಿ ಮಾತ್ರ ಮಾರಾಟವಾಗುತ್ತಿತ್ತು. ಈಗ ಕೇರಳದಲ್ಲಿ ಇದ್ದಿಲು ಫ್ಯಾಕ್ಟರಿಗಳು ಹೆಚ್ಚಾಗಿವೆ. ತಮಿಳುನಾಡಿನಿಂದಲೂ ಗೆರಟೆಗಾಗಿ ವಿಚಾರಣೆ ಬರುತ್ತಿದೆ. ಇಂದು ತೆಂಗಿನಕಾಯಿಗೆ ಎಷ್ಟು ಮೌಲ್ಯವೋ, ಗೆರಟೆಗೆ ಕೂಡ ಅಷ್ಟೇ ಮಹತ್ವ ಬಂದಿದೆ.” ಎನ್ನುತ್ತಾರೆ.

ಮನೆಮನೆಗೂ ಆದಾಯ

ಕರ್ನಾಟಕ ಕರಾವಳಿಯಲ್ಲಿ ದಿನನಿತ್ಯ ತೆಂಗಿನಕಾಯಿ ಬಳಸುವ ಮನೆಗಳು ತಿಂಗಳಿಗೊಮ್ಮೆ ಗೆರಟೆ ಸಂಗ್ರಹಿಸಿ ಮಾರಾಟ ಮಾಡುತ್ತಿವೆ. ಮನೆಬಾಗಿಲಿಗೆ ಹೋಗುವ ಸಂಗ್ರಹಕರು ಒಂದು ತೆಂಗಿನಕಾಯಿ ಗೆರಟೆಗೆ ರೂ.1 ರಿಂದ ರೂ.1.50ವರೆಗೆ ನೀಡುತ್ತಾರೆ. ಸಂಗ್ರಹಿಸಿದ ಗೆರಟೆಯನ್ನು ವ್ಯಾಪಾರಿಗಳಿಗೆ ಕಿಲೋ ಲೆಕ್ಕದಲ್ಲಿ ಮಾರಾಟ ಮಾಡಲಾಗುತ್ತದೆ.

ಮಧುರೈ ಮೂಲದ ಕುಮಾರನ್ ಮಂಗಳೂರಿನ ಪರಿಸರದಲ್ಲಿ ಗೆರಟೆ ಸಂಗ್ರಹಿಸಿ ವಾರಕ್ಕೆ ಕನಿಷ್ಠ ರೂ.2500 ಸಂಪಾದಿಸುತ್ತಿದ್ದಾರೆ. ಇದು ಅನೇಕ ನಿರುದ್ಯೋಗಿಗಳಿಗೆ ಮತ್ತು ಅಲ್ಪ ಆದಾಯದವರಿಗೆ ಹೊಸ ಅವಕಾಶವಾಗುತ್ತಿದೆ.

ಬೆಲೆ ಏರಿಕೆಯಲ್ಲಿ ಗೆರಟೆ

ಪುತ್ತೂರಿನ ಎಂ.ಎಸ್. ಟ್ರೇಡರ್ಸ್ ಮಾಲಿಕ ಶರೀಫ್ ಅವರ ಹೇಳಿಕೆಯಂತೆ, ಕಳೆದ ವರ್ಷ ಗೆರಟೆ ಕಿಲೋಗೆ ರೂ.25 ರಿಂದ ರೂ.100ರ ವರೆಗೆ ಮಾರಾಟವಾಗಿತ್ತು. ಈ ವರ್ಷ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ರೂ.150 ತಲುಪುವ ಸಾಧ್ಯತೆಯಿದೆ. ವಿಶೇಷವಾಗಿ ಒಣಗಿದ, ತೇವಾಂಶವಿಲ್ಲದ ಗೆರಟೆಗೆ ಹೆಚ್ಚಿನ ಬೇಡಿಕೆ ಇದೆ. ಮಳೆಗಾಲದಲ್ಲಿ ತೂಕ ಹೆಚ್ಚಾಗುವ ಕಾರಣ ಬೆಲೆ ಸ್ವಲ್ಪ ಇಳಿಮುಖವಾಗುತ್ತದೆ.

ಆಗ ಬೂದಿ, ಈಗ ಕಾಸು

ತೆಂಗಿನಕಾಯಿ ಬೆಳೆಗಾರ ಕೃಷ್ಣ ಭಟ್ ಅವರು ಹೇಳುವಂತೆ, “ಹಿಂದೆ ಗೆರಟೆಯನ್ನು ರಾಶಿ ಹಾಕಿ ಸುಟ್ಟು ಬೂದಿ ಮಾಡುತ್ತಿದ್ದೆವು. ಈಗ ಕೊಬ್ಬರಿ ಮಾರಾಟದ ಜೊತೆಗೆ ಗೆರಟೆಯೂ ಮಾರಾಟವಾಗುತ್ತಿದೆ. ಇದು ನಿಜಕ್ಕೂ ‘ಕಸದಿಂದ ರಸ’ ಪಡೆದ ಅನುಭವ.”

ಗೆರಟೆಯ ಬಳಕೆ ಎಲ್ಲಿ?

ಗೆರಟೆಯಿಂದ ತಯಾರಿಸಿದ ಸೌಟು, ಕಪ್‌ಗಳು, ಅಲಂಕಾರಿಕ ವಸ್ತುಗಳು ಹಿಂದಿನಿಂದಲೂ ಜನಪ್ರಿಯವಾಗಿವೆ. ತೋಟಗಳಲ್ಲಿ ಗಿಡಗಳ ಬುಡಕ್ಕೆ ಹಾಕುವುದರಿಂದ ಬೇರುಗಳ ಬೆಳವಣಿಗೆಗೆ ಸಹಾಯಕ. ಆದರೆ ಈಗ ದೊಡ್ಡ ಪ್ರಮಾಣದಲ್ಲಿ ಗೆರಟೆ ಇದ್ದಿಲು ತಯಾರಿಕೆಗೆ ಬಳಕೆಯಾಗುತ್ತಿದೆ. ಈ ಇದ್ದಿಲು ನೀರು ಶುದ್ಧೀಕರಣ ಘಟಕಗಳು, ಹೋಟೆಲ್‌ಗಳ ಬಾರ್ಬೆಕ್ಯೂ, ಗ್ರಿಲ್, ಕೈಗಾರಿಕೆಗಳು ಹಾಗೂ ರಫ್ತು ಮಾರುಕಟ್ಟೆಯಲ್ಲಿ ಬಳಸಲಾಗುತ್ತಿದೆ. ಭಾರತದಿಂದ ಆಫ್ರಿಕಾ ಮತ್ತು ಯುರೋಪಿನ ದೇಶಗಳಿಗೆ ರಫ್ತು ಕೂಡ ನಡೆಯುತ್ತಿದೆ.

ಕಲ್ಪವೃಕ್ಷ ತೆಂಗು

“ತೆಂಗು ಕಲ್ಪವೃಕ್ಷ ಎನ್ನುವುದು ಇದೇ ಕಾರಣಕ್ಕೆ,” ಎನ್ನುತ್ತಾರೆ ಕೃಷ್ಣ ಭಟ್. ತೆಂಗಿನ ಪ್ರತಿಯೊಂದು ಭಾಗವೂ ಉಪಯುಕ್ತ. ಆಧುನಿಕ ಯಂತ್ರಗಳ ಮೂಲಕ ಗೆರಟೆ ಸಂಸ್ಕರಣೆಯಿಂದ ಉತ್ತಮ ಗುಣಮಟ್ಟದ ಕಾರ್ಬನ್ ಮತ್ತು ಚಾರ್ಕೋಲ್ ದೊರೆಯುತ್ತಿದೆ. ಇದರಿಂದ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಒಟ್ಟಿನಲ್ಲಿ, ಒಂದು ಕಾಲದಲ್ಲಿ ತ್ಯಾಜ್ಯವೆಂದು ಪರಿಗಣಿಸಲ್ಪಟ್ಟ ತೆಂಗಿನಕಾಯಿ ಗೆರಟೆ ಇಂದು ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಪರಿಹಾರ ನೀಡುವುದರ ಜೊತೆಗೆ, ರೈತರು, ಮನೆಮಂದಿ ಮತ್ತು ವ್ಯಾಪಾರಿಗಳಿಗೆ ಆರ್ಥಿಕ ಲಾಭದಾಯಕ ಸಂಪನ್ಮೂಲವಾಗಿ ಸಾಬೀತಾಗಿದೆ.

About The Author