ಕೇಂದ್ರ ಗೃಹ ಸಚಿವರಿಗೆ ಶಿವಮೊಗ್ಗದಿಂದ ‘ಬಳೆ’ ಪೋಸ್ಟ್ ಮಾಡಿದ ಮಹಿಳೆಯರು
ಶಿವಮೊಗ್ಗ: ದೇಶದಲ್ಲಿ ಪದೇ ಪದೆ ದಾಳಿಯಾಗುತ್ತಿದ್ದರೂ ಉಗ್ರರ ಅಟ್ಟಹಾಸ ತಡೆಗಟ್ಟಲು ವಿಫಲವಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಅಂಚೆ ಕಚೇರಿ ಮುಂಭಾಗ ನಗರ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
2019ರಲ್ಲಿ 800 ಕೆ.ಜಿ ಸ್ಪೋಟಕ ಹೊತ್ತು ಸೇನಾ ವಾಹನಗಳನ್ನು ಗುರಿಯಾಗಿಸಿಕೊಂಡು ಪುಲ್ವಾಮಾದಲ್ಲಿ ದಾಳಿಯಾಗಿತ್ತು. 2025ರಲ್ಲಿ ಕಾಶ್ಮೀರದಲ್ಲಿ ಪಹಲ್ಗಾಮ್ನಲ್ಲಿ ಉಗ್ರರ ದಾಳಿಗೆ 26 ನಾಗರಿಕರ ಹತ್ಯೆ ಮಾಡಲಾಗಿತ್ತು. ಈಗ ದಹೆಲಿಯ ಅತ್ಯಂತ ಬಿಗಿ ಭದ್ರತಾ ಪ್ರದೇಶವಾದ ಕೆಂಪು ಕೋಟೆ ಸಮೀಪ ಬಾಂಬ್ ಸ್ಪೋಟ ಸಂಭವಿಸಿದೆ. ಉಗ್ರರ ಅಟ್ಟಹಾಸ ನಿಯಂತ್ರಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ. ಆದ್ದರಿಂದ ಗೃಹ ಸಚಿವ ಅಮಿತ್ ಷಾ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಅಮಿತ್ ಷಾಗೆ ಬಳೆ ಪೋಸ್ಟ್
ಗೃಹ ಸಚಿವರ ವೈಫಲ್ಯ ಖಂಡಿಸಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಬಳೆಗಳನ್ನು ಪೋಸ್ಟ್ ಮಾಡಿದರು. ಗೃಹ ಸಚಿವರು ಬಳೆ ತೊಟ್ಟುಕೊಳ್ಳಬೇಕು ಲೇವಡಿ ಮಾಡಿದರು.
ಪ್ರಮುಖರಾದ ಮಧು ಸೂದನ್, ಎನ್.ರಮೇಶ್, ಯುವ ಕಾಂಗ್ರೆಸ್ ಶಿವಮೊಗ್ಗ ವಿಧಾನಸಭಾ ಅಧ್ಯಕ್ಷ ಚರಣ್ ಜೆ.ಶೆಟ್ಟಿ, ನಗರ ಬ್ಲಾಕ್ ಅಧ್ಯಕ್ಷರಾದ ಗಿರೀಶ್, ಮೊಹಮ್ಮದ್ ಗೌಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್, ಅರ್ಚನಾ ಸೇರಿ ಹಲವರು ಇದ್ದರು.


