Headlines

ದೇವರ ದರ್ಶನ ಮುಗಿಸಿ ಮರಳುತ್ತಿದ್ದ ಬೈಕ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರ ದುರ್ಮರಣ

ದೇವರ ದರ್ಶನ ಮುಗಿಸಿ ಮರಳುತ್ತಿದ್ದ ಬೈಕ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರ ದುರ್ಮರ

ಹಾಸನಾಂಬೆ ದೇವಿಯ ದರ್ಶನ ಪಡೆದು ವಾಪಸ್‌ ಹೋಗುವಾಗ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಬೆಂಗಳೂರಿಗರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ.

ಜಿಲ್ಲೆಯ ಚನ್ನರಾಯಪಟ್ಟಣ ಸಮೀಪ ಭಾನುವಾರ ಸಂಜೆ ಅಪಘಾತ ಸಂಭವಿಸಿದ್ದು,, ಬೆಂಗಳೂರಿನ ಬಸವರಾಜು (19) ಹಾಗೂ ಅನುಶ್ರೀ (19) ಸಾವನ್ನಪ್ಪಿದ ದುರ್ದೈವಿಗಳು ಎಂದು ಗುರುತಿಸಲಾಗಿದೆ.

ಸ್ನೇಹಿತನ ಜೊತೆಯಲ್ಲಿ ಬೆಂಗಳೂರಿನಿಂದ ಭಾನುವಾರ ಒಂದೇ ಯಮಹಾ ಬೈಕ್‌ನಲ್ಲಿ ಬಸವರಾಜು (19), ಅನುಶ್ರೀ (19) ಮತ್ತು ಛಾಯಾ (20) ಎಂಬುವರು ಹಾಸನಾಂಬೆ ದೇವಿಯ ದರ್ಶನಕ್ಕೆ ಹಾಸನಕ್ಕೆ ಆಗಮಿಸಿದ್ದರು.

ಹಾಸನಾಂಬೆ ದೇವಿಯ ದರ್ಶನ ಮುಗಿಸಿ ಒಂದೇ ಬೈಕ್‌ನಲ್ಲಿ ಸಂಜೆ ಬಸನವರಾಜ್‌, ಅನುಶ್ರೀ ಹಾಗೂ ಛಾಯಾ ಮೂವರೂ ಬೆಂಗಳೂರಿಗೆ ವಾಪಸ್‌ ತೆರಳುತ್ತಿದ್ದರು.

ಇದೇ ಸಂದರ್ಭದಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಗ್ಗಲಿಕಾವಲು ಫಾರೆಸ್ಟ್‌ ಬಳಿ ಇನ್ನೋವಾ ಕಾರು ಡಿಕ್ಕಿ ಹೊಡೆದಿದೆ. ಹೌಸಿಂಗ್‌ ಬೋರ್ಡ್‌ ಬಳಿ ವೇಗವಾಗಿ ಬಂದು ಮೊದಲು ಆಕ್ಟೀವ್‌ ಹೋಂಡಾಗೆ ಡಿಕ್ಕಿ ಹೊಡೆದ ಇನ್ನೋವಾ ಕಾರು, ಆನಂತರ ಮೂವರಿದ್ದ ಯಮಹಾ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಅರಣ್ಯಕ್ಕೆ ಕಾರು ನುಗ್ಗಿದೆ. ಕಾರು ಡಿಕ್ಕಿ ರಭಸಕ್ಕೆ ಸ್ಥಳದಲ್ಲೇ ಬಸವರಾಜು ಹಾಗೂ ಅನುಶ್ರೀ ಮೃತಪಟ್ಟಿದ್ದಾರೆ.

ಛಾಯಾ ಎಂಬಾಕೆಯ ಸ್ಥಿತಿ ಚಿಂತಾಜನಕವಾಗಿದೆ. ಚನ್ನರಾಯಪಟ್ಟಣ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಐಸಿಯುನಲ್ಲಿ ಛಾಯಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಕ್ಟೀವ್‌ ಹೋಂಡಾ ಸವಾರ ಮೊಹಮ್ಮದ್‌ ಶಾಹಿದ್‌ಗೂ ಗಂಭೀರ ಗಾಯಗಳಾಗಿವೆ.

ಈ ಸಂಬಂಧ ಚನ್ನರಾಯಪಟ್ಟಣ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.