ಅಪರಿಚಿತ ವಾಹನ ಡಿಕ್ಕಿಯಾಗಿ ಕಾಡುಕೋಣ ಸಾವು
ತೀರ್ಥಹಳ್ಳಿ: ರಾಮಕೃಷ್ಣಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್.ಪಾಲ್ ಮಜರೆ ಗ್ರಾಮದಲ್ಲಿ ಶುಕ್ರವಾರ ನಡೆದ ಅಪಘಾತದಲ್ಲಿ 15 ವರ್ಷದ ಗಂಡು ಕಾಡುಕೋಣ ಮೃತಪಟ್ಟಿದೆ.
ತೀರ್ಥಹಳ್ಳಿ- ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ವಾಹನವೊಂದು ರಸ್ತೆ ದಾಟುತ್ತಿದ್ದ ಕಾಡುಕೋಣಕ್ಕೆ ಡಿಕ್ಕಿ ಹೊಡೆದಿತ್ತು. ತಲೆ, ಕಾಲಿಗೆ ಗಂಭೀರವಾಗಿ ಗಾಯಗೊಂಡಿದ್ದರಿಂದ ತೀವ್ರ ರಕ್ತಸ್ರಾವವಾಗಿದೆ. ಪ್ರತ್ಯಕ್ಷದರ್ಶಿ ಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಕಾಡುಕೋಣಕ್ಕೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ಮೇಗರವಳ್ಳಿ ವಲಯಾರಣ್ಯಾಧಿಕಾರಿ ಕಚೇರಿಗೆ ಸ್ಥಳಾಂತರಿಸಿದ್ದರು. ಅಲ್ಲಿ ಕಾಡುಕೋಣ ಮೃತಪಟ್ಟಿದೆ.
ಅರಣ್ಯ ಇಲಾಖೆಯವರು ಎಫ್ಐಆರ್ ದಾಖಲಿಸಿ ಅಪಘಾತ ಮಾಡಿದ ವಾಹನಕ್ಕಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಮೃತ ಕಾಡುಕೋಣವನ್ನು ನ್ಯಾಯಾಲಯದ ಅನುಮತಿ ಮೇರೆಗೆ ಅಂತ್ಯಕ್ರೀಯೆ ನಡೆಸಲಾಯಿತು