ರಸ್ತೆ ಮೇಲೆ ಬಿದ್ದಿದ್ದ ತನ್ನನ್ನು ಸಾಕಿ ಸಲುಹಿದ ಅಮ್ಮನನ್ನೇ ಮುಗಿಸಿದ 8ನೇ ತರಗತಿ ವಿದ್ಯಾರ್ಥಿನಿ ….

ರಸ್ತೆ ಮೇಲೆ ಬಿದ್ದಿದ್ದ ತನ್ನನ್ನು ಸಾಕಿ ಸಲುಹಿದ ಅಮ್ಮನನ್ನೇ ಮುಗಿಸಿದ 8ನೇ ವಿದ್ಯಾರ್ಥಿನಿ ….

14 ವರ್ಷಗಳ ಹಿಂದೆ ಯಾರೋ ಬೀದಿಯಲ್ಲಿ ಬಿಟ್ಟು ಹೋಗಿದ್ದ ಮೂರು ದಿನಗಳ ಕಂದನನ್ನು ತಂದು ಸಾಕಿ, ಸಲುಹಿ ಅಮ್ಮನ ಪ್ರೀತಿಯನ್ನೆಲ್ಲಾ ಧಾರೆಯೆರೆದಿದ್ದ ಈ ಮಹಿಳೆ ಮುಂದೆ ಈಕೆಯೇ ತನ್ನ ಪಾಲಿನ ಯಮಸ್ವರೂಪಿಣಿಯಾಗುತ್ತಾಳೆ ಎನ್ನುವುದು ಕನಸಿನಲ್ಲಿಯೂ ಊಹಿಸಿರಲಿಲ್ಲ. ಮಕ್ಕಳಿಲ್ಲದ ಕೊರಗನ್ನು ಈ ಕಂದ ನೀಗಿಸಿದಳು ಎಂದು ಯಾರೋ ಹೆತ್ತು ಬೀಸಾಡಿದ ಮಗುವನ್ನು ತಂದು ಸಾಕಿ, ಸಲುಹಿ ಆಕೆಗೆ ಆರೈಕೆ ಮಾಡಿದ್ದರು ಈ ಅಮ್ಮ.

ಆದರೆ, ಆ ಮಗುವಿನ ದೇಹದಲ್ಲಿ ಅದ್ಯಾವ ಕಟುಕನ ರಕ್ತ ಹರಿದಿತ್ತೋ ತಿಳಿಯದು. 8ನೇ ಕ್ಲಾಸ್​ ಓದುತ್ತಿರುವಾಗಲೇ ತನ್ನಿಬ್ಬರು ಸ್ನೇಹಿತರ ಜೊತೆಗೂಡಿ ಅಮ್ಮನನ್ನೇ ಮುಗಿಸಿದ್ದಾಳೆ 14 ವರ್ಷದ ಈ ಹಂತಕಿ! ಅಷ್ಟಕ್ಕೂ ಆಗಿದ್ದೇನು? ಯಾಕೆ ಈ ರೀತಿ ಮಾಡಿದ್ದಳು ಎನ್ನುವುದು ಇಲ್ಲಿದೆ ನೋಡಿ!

ಈ ಘಟನೆ ನಡೆದಿರುವುದು ಒಡಿಶಾದ ಭುವನೇಶ್ವರದಲ್ಲಿ. ಗಜಪತಿ ಜಿಲ್ಲೆಯ ಪರಲಖೆಮುಂಡಿಯ ರಾಜಲಕ್ಷ್ಮೀ ಎನ್ನುವ ಮಹಿಳೆ ಈ ಮಗುವನ್ನು ಬೀದಿಯಿಂದ ತಂದು ಸಾಕಿಕೊಂಡಿದ್ದರು. ಕಾನೂನು ಪ್ರಕಾರವಾಗಿ ದತ್ತು ಕೂಡ ಪಡೆದುಕೊಂಡಿದ್ದರು. ಅಮ್ಮನ ಪ್ರೀತಿಯ ಧಾರೆಯನ್ನೇ ಹರಿಸಿದ್ದರು. ಸ್ವಲ್ಪ ವರ್ಷದ ಬಳಿಕ ಅವರ ಪತಿ ನಿಧನರಾದಾಗ, ಮಗಳೇ ರಾಜಲಕ್ಷ್ಮೀ ಅವರಿಗೆ ಪ್ರಪಂಚವಾಯಿತು. ಆಕೆಗೆ ಚೆನ್ನಾಗಿ ಓದಿಸುವ ಉದ್ದೇಶದಿಂದ ಪರಲಖೆಮುಂಡಿಗೆ ಆಗಮಿಸಿ, ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆದರೆ, ರಾಜಲಕ್ಷ್ಮೀ ಅವರ ಗ್ರಹಗತಿ ಇಲ್ಲಿಂದಲೇ ಕೆಡಲು ಶುರುವಾಯಿತು. 8ನೇ ಕ್ಲಾಸ್​ನಲ್ಲಿ ಓದುತ್ತಿರುವಾಗಲೇ ಈ ಮಗಳಿಗೆ ದೇವಸ್ಥಾನದ ಅರ್ಚಕ ಗಣೇಶ್ ರಾತ್ (21) ಮತ್ತು ದಿನೇಶ್ ಸಾಹು(20)ವಿನೊಂದಿಗೆ ಸ್ನೇಹ ಬೆಳಯಿತು. ಶಾಲೆಗೂ ಹೋಗದೇ ಅವರಿಬ್ಬರ ಜೊತೆ ತಿರುಗಾಡಲು ಶುರು ಮಾಡಿದಳು.

ಈ ವಿಷಯ ಅಮ್ಮನಿಗೆ ತಿಳಿಯಿತು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಹೀಗೆಲ್ಲಾ ಮಾಡುವುದು ಸರಿಯಲ್ಲ ಎಂದು ಬೈದು ಬುದ್ದಿವಾದ ಹೇಳಿದ್ದರು. ಪದೇ ಪದೇ ಬುದ್ಧಿವಾದ ಹೇಳಿದ್ದರಿಂದ ಸಿಟ್ಟುಗೊಂಡ ಮಗಳು, ತನ್ನ ಸ್ನೇಹಿತರಿಗೆ ವಾಟ್ಸ್​ಆಯಪ್​ ಮೂಲಕ ಈ ವಿಷಯ ತಿಳಿಸಿದ್ದಳು. ಆ ಬಳಿಕ ಮೂವರೂ ಸೇರಿ ತಾಯಿಯನ್ನು ಮುಗಿಸುವ ಸ್ಕೆಚ್​ ಹಾಕಿದರು. ರಾಜಲಕ್ಷ್ಮೀ ಅವರನ್ನು ಸಾಯಿಸಿದರೆ ಅವರ ಹೆಸರಿನಲ್ಲಿ ಇರುವ ಆಸ್ತಿಯನ್ನು ಪಡೆದು ಮೂವರೂ ಚೆನ್ನಾಗಿ ಇರಬಹುದು ಎಂದು ಬಾಲಕಿಯ ತಲೆ ತುಂಬಿದರು ಹಾಗೂ ಮುಗಿಸುವ ಎಲ್ಲಾ ಪ್ಲ್ಯಾನ್​ ರೂಪಿಸಿದರು. ಅದರಂತೆಯೇ, ಬಾಲಕಿ ತಾಯಿ ರಾಜಲಕ್ಷ್ಮೀಗೆ ನಿದ್ರೆ ಮಾತ್ರೆ ನೀಡಿದಳು. ಅವರು ಪ್ರಜ್ಞಾಹೀನರಾದಾಗ ಸ್ನೇಹಿತರಿಗೆ ಕರೆ ಮಾಡಿ ಮನೆಗೆ ಬರುವಂತೆ ತಿಳಿಸಿದಳು. ಮೂವರೂ ಸೇರಿ ರಾಜಲಕ್ಷ್ಮೀ ಅವರನ್ನು ದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಿಯೇ ಬಿಟ್ಟರು.

ಇಷ್ಟು ಮಾಡಿದ ಬಳಿಕ ಬಾಲಕಿಗೆ ಕುಟುಂಬಸ್ಥರಿಗೆ ಫೋನ್​ ಮಾಡಿ ಅಮ್ಮನಿಗೆ ಹುಷಾರಿರಲಿಲ್ಲ, ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮೃತಪಟ್ಟರು ಎಂದೆಲ್ಲಾ ಹೇಳಿ ನಂಬಿಸಿದಳು. ಈ ಹಿಂದೆ ರಾಜಲಕ್ಷ್ಮೀ ಅವರಿಗೆ ಲಘು ಹೃದಯಾಘಾತವಾಗಿತ್ತು. ಬಾಲಕಿ ಅದನ್ನೇ ಹೇಳಿ ಎಲ್ಲರನ್ನೂ ನಂಬಿಸಿದಳು. ಕುಟುಂಬದವರು ಎಲ್ಲರೂ ಇದನ್ನು ನಂಬಿದರು. ಆದರೆ ಈ ಗಡಿಬಿಡಿಯಲ್ಲಿ ಬಾಲಕಿ ಮೊಬೈಲ್​ ಬಿಟ್ಟು ಹೋಗಿದ್ದಳು. ಅದು ರಾಜಲಕ್ಷ್ಮೀ ಅವರ ಸಹೋದರ ಸಿಬಾ ಪ್ರಸಾದ್ ಮಿಶ್ರಾ ಅವರಿಗೆ ಸಿಕ್ಕಿದೆ. ಅವರಿಗೆ ಮೊದಲೇ ಏನೋ ಸಂದೇಹ ಬಂದಿದ್ದರಿಂದ ಮೊಬೈಲ್ ಪರಿಶೀಲಿಸಿದ್ದಾರೆ. ಆಗ ಅದರಲ್ಲಿ ಬಾಲಕಿ ತನ್ನ ಸ್ನೇಹಿತರಿಗೆ ಮಾಡಿದ ಮೆಸೇಜ್​ ಎಲ್ಲವೂ ಸಿಕ್ಕಿದೆ. ರಾಜಲಕ್ಷ್ಮಿಯನ್ನು ಮುಗಿಸಿ ಚಿನ್ನಾಭರಣಗಳು ಮತ್ತು ಹಣವನ್ನು ತೆಗೆದುಕೊಂಡು ಹೋಗುವ ಬಗ್ಗೆಯೂ ಸ್ನೇಹಿತರು ಅದರಲ್ಲಿಯೇ ಉಲ್ಲೇಖಿಸಿದ್ದರು.

ಈ ಹಿನ್ನೆಲೆಯಲ್ಲಿ ಕೂಡಲೇ ಅವರು ದೂರು ದಾಖಲಿಸಿದ್ದರು. ತನಿಖೆಯಿಂದ ಪೊಲೀಸರಿಗೆ ಸತ್ಯ ಬಯಲಾಗಿದೆ. ಅಪ್ರಾಪ್ತ ಹುಡುಗಿ, ಗಣೇಶ್ ರಾತ್ ಮತ್ತು ದಿನೇಶ್ ಸಾಹುವನ್ನು ಸದ್ಯ ಬಂಧಿಸಿದ್ದಾರೆ. ಹುಡುಗಿ ಅದಾಗಲೇ ತಾಯಿಯ ಕೆಲವು ಚಿನ್ನದ ಆಭರಣಗಳನ್ನು ಸ್ನೇಹಿತರಿಗೆ ನೀಡಿಬಿಟ್ಟಿದ್ದಳು. ಅದರಲ್ಲಿ ಒಬ್ಬಾತ ಚಿನ್ನಾಭರಣಗಳನ್ನು 2.4 ಲಕ್ಷ ರೂ.ಗೆ ಅಡವಿಟ್ಟಿದ್ದು ತಿಳಿದಿದೆ. ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *