RIPPONPET | ಸಾಮಾನ್ಯ ಸಭೆಯಲ್ಲಿ ಲಂಚದ ಹಣ ಹಂಚಿಕೆಯ ತಾರತಮ್ಯ ಪ್ರಶ್ನಿಸಿದ್ದಕ್ಕೆ ಆಯಿತೆ ಮಾರಾಮಾರಿ.!? ನೇರ ಪ್ರಸಾರ ಏಕ್ ದಮ್ ಕಟ್ ಆಗಿದ್ದೇಕೆ .!?
ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯ ಕಲಾಪದ ವೇಳೆ ಸದಸ್ಯರುಗಳ ನಡುವೆ ಖಾಸಗಿ ಬಾರ್ ನ ಮಾಲೀಕ ನೀಡಿದ ಲಂಚದ ಹಣದ ವಿಚಾರವಾಗಿ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತೆರಳಿ ಮಾರಾಮಾರಿ ನಡೆಯುತ್ತಿದೆ ಅನ್ನುವಷ್ಟರಲ್ಲಿ ವೇಳೆ ಕಲಾಪದ ನೇರ ಪ್ರಸಾರ ಕಡಿತಗೊಳಿಸಲಾಯಿತು.
ಗ್ರಾಮ ಸಭೆಯ ಕಲಾಪದಲ್ಲಿ ತಾವು ಮತ ಹಾಕಿ ಆರಿಸಿ ಕಳುಹಿಸಿದ ಜನಪ್ರತಿನಿಧಿಗಳು ತಮ್ಮ ವಾರ್ಡ್ ನ ಬಗ್ಗೆ ಏನೆಲ್ಲಾ ಮಾತನಾಡುತ್ತಾರೆ ಎನ್ನುವುದು ಸಾರ್ವಜನಿಕರಿಗೆ ತಲುಪಲಿ ಎನ್ನುವ ಸದುದ್ದೇಶದಿಂದ ಜಿಲ್ಲಾಧಿಕಾರಿಗಳು ಪ್ರಮುಖ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯ ಕಲಾಪದ ನೇರ ಪ್ರಸಾರಕ್ಕೆ ಆದೆಶ ನೀಡಿದ್ದರು.ಆ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳ ಗ್ರಾಮಸಭೆಯನ್ನು ನೇರಪ್ರಸಾರ ಮಾಡಲಾಗಿತ್ತು. ಆ ಸಾಮಾನ್ಯ ಸಭೆಯಲ್ಲಿ ಜನಪ್ರತಿನಿಧಿಗಳ ಕಾರ್ಯ ವೈಖರಿ ಮತದಾರರು ನೋಡಿ ಖುಷಿಯೂ ಪಟ್ಟಿದ್ದರೂ ಹಾಗೇ ಇಂತವರಿಗೆ ಮತ ಹಾಕಿದ್ದೆವಾ ಎಂದು ಬೇಜಾರೂ ಕೂಡ ಮಾಡಿಕೊಂಡಿದ್ದರೂ..
ಈ ತಿಂಗಳಿನ ಸಾಮಾನ್ಯ ಸಭೆಯ ನೇರಪ್ರಸಾರ ವನ್ನು ಮಾಡಲಾಗಿತ್ತು ಹಲವು ಸಾರ್ವಜನಿಕರು ಲೈವ್ ನ್ನು ವೀಕ್ಷಿಸುತಿದ್ದರು ಆದರೆ ಕಲಾಪ ನಡೆಯುವ ವೇಳೆ ಉಂಟಾದ ಕೆಲವು ಸದಸ್ಯರುಗಳ ಮಾತಿನ ಚಕಮಕಿ ವಿಕೋಪಕ್ಕೆ ತೆರಳಿ ಕೈ ಕೈ ಮಿಲಾಯಿಸುವ ಹಂತಕ್ಕೆ ತೆರಳಿದಾಗ ಅವರೇ ಆರಿಸಿ ಕಳುಹಿಸಿದ ಜನಪ್ರತಿ’ನಿಧಿ’ ಗಳು ಬೀದಿ ಬದಿಯಲ್ಲಿ ಹೊಡೆದಾಡಲು ನಿಂತ ಗೂಂಡಾಗಳಂತೆ ವರ್ತಿಸಿದ್ದು ಜನಸಾಮಾನ್ಯರಿಗೆ ತಿಳಿಯಬಾರದು ಎನ್ನುವ ಉದ್ದೇಶದಿಂದ ನೇರ ಪ್ರಸಾರದ ಕಲಾಪವನ್ನು ಏಕ್ ದಂ ಕಟ್ ಮಾಡಿದ್ದಾರೆ.
ಕಳೆದ ಸಾಮಾನ್ಯ ಸಭೆಯಲ್ಲಿ ಬಾರ್ ಮಾಲೀಕರ ಬಳಿ ಸದಸ್ಯರೊಬ್ಬರು ಎಲ್ಲಾ ಸದಸ್ಯರ ಹೇಸರು ಹೇಳಿ ಲಂಚ ಪಡೆದಿದ್ದಾರೆ ಎಂದು ಯೂಟ್ಯೂಬ್ ಲೈವ್ ನಡೆಯುತಿದ್ದಾಗಲೇ ಆರೋಪ ಮಾಡಿದ್ದರು ಆ ನಂತರದಲ್ಲಿ ಆ ಬಾರ್ ಮಾಲೀಕರು ಸುದ್ದಿಗೋಷ್ಟಿ ನಡೆಸಿ ಯಾವ ಸದಸ್ಯರಿಗೂ ಲಂಚ ನೀಡಿಲ್ಲ ಎಂದು ಸ್ಪಷ್ಠಿಕರನ ನೀಡಿದ್ದರು.ಈ ವಿಚಾರವಾಗಿ ಚರ್ಚೆ ನಡೆಯುತಿದ್ದ ಸಂಧರ್ಭದಲ್ಲಿ ಏಕಾಏಕಿ ಗಲಾಟೆ ಪ್ರಾರಂಭವಾಗಿದೆ.
ಹಾಗಾದರೇ ಯಾವ ಚಂದಕ್ಕೆ ನೇರ ಪ್ರಸಾರವನ್ನು ಮಾಡಿದ್ದೀರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೇ ..? ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಈ ವಿಚಾರದಲ್ಲಿ ಯಾಕೆ ನೇರಪ್ರಸಾರ ಕಲಾಪ ಕಡಿತಗೊಳಿಸಿದ್ದಾರೆ ಎನ್ನುವುದೇ ಸಂಶಯವಾಗಿದೆ , ಆ ಅಧಿಕಾರಿಯ ಮೇಲೆ ಯಾರ ಒತ್ತಡವಿತ್ತೋ , ಪಾಲುದಾರಿಕೆಯಿತ್ತೋ ಅಥವಾ ಮುಲಾಜಿಗೊಳಗಾದರೇ ಎನ್ನುವುದೇ ಪ್ರಶ್ನೆಯಾಗಿದೆ.
ಸರ್ಕಾರದ ಹಣದಿಂದ ಸಾಮಾನ್ಯ ಸಭೆಯ ಯೂಟ್ಯೂಬ್ ಲೈವ್ ಕಾರ್ಯಕ್ರಮ ಆಯೋಜಿಸಲಾಗಿತ್ತೇ ಹೊರತು ಯಾರಪ್ಪನ ಮನೆಯ ಹಣದಲ್ಲಿ ಅಲ್ಲ , ಅವರಿಗೆ ಬೇಕಾದಾಗ ಆನ್ ಮತ್ತು ಆಫ್ ಮಾಡಲು ಅದೇನು ಜನಪ್ರತಿನಿಧಿಗಳ ಮನೆಯ ಟಿವಿ ರಿಮೋಟ್ ಅಲ್ಲ ಈ ಘಟನೆಗೆ ಸಂಭಂಧಿಸಿದಂತೆ ಕಾರಣಕರ್ತರಾದ ಅಧಿಕಾರಿಗಳ ವಿರುದ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಒಟ್ಟಾರೆ ಗ್ರಾಮಸಭೆಗಳು , ಕೆಡಿಪಿ ಸಭೆಗಳು ಪಾರದರ್ಶಕವಾಗಿರಲಿ ಎನ್ನುವ ಸದುದ್ದೇಶದಿಂದ ಯೂಟ್ಯೂಬ್ ಲೈವ್ ವ್ಯವಸ್ಥೆಯನ್ನು ಆಯೋಜಿಸಲಾಗಿದೆ ಅದನ್ನು ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿಯ ಕಡೆಗೆ ಹೋಗಬೇಕೆ ಹೊರತು ಜನಪ್ರತಿನಿಧಿಗಳ ದೊಂಬರಾಟ ಮುಚ್ಚಿಡಲು ಪಾರದರ್ಶಕ ವ್ಯವಸ್ಥೆಗೆ ಕುತ್ತು ತರಬಾರದು ಎನ್ನುವುದೇ ಆಶಯ….!