ಉಗ್ರರ ದಾಳಿ ಖಂಡಿಸಿ ಶಿವಮೊಗ್ಗದಲ್ಲಿ ಪ್ರತಿಭಟನೆ

ಉಗ್ರರ ದಾಳಿ ಖಂಡಿಸಿ ಶಿವಮೊಗ್ಗದಲ್ಲಿ ಪ್ರತಿಭಟನೆ

ಶಿವಮೊಗ್ಗ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ನಿರ್ದಯವಾಗಿ ಹತ್ಯೆಗೈದ ಉಗ್ರರ ಪೈಶಾಚಿಕ ಕೃತ್ಯವನ್ನು ಖಂಡಿಸಿ ಶಿವಮೊಗ್ಗದಲ್ಲಿ ಇಂದು ಸರಣಿ ಪ್ರತಿಭಟನೆಗಳು ನಡೆದವು.

ಜಿಲ್ಲಾ ವಕೀಲ ಸಂಘ ಹಾಗೂ ಮರ್ಕಜಿ ಸುನ್ನಿ ಜಾಮಿಯಾ ಮಸ್ಜಿದ್​​ ಅವರು ಪ್ರತಿಭಟನೆ ನಡೆಸಿದರೆ, ಜಿಲ್ಲಾ ಕಾಂಗ್ರೆಸ್​ನ ಉತ್ತರ ಬ್ಲಾಕ್​ನ ವತಿಯಿಂದ ಶ್ರದ್ದಾಂಜಲಿ ಸಭೆ ನಡೆಸಲಾಯಿತು.

ಜಿಲ್ಲಾ ವಕೀಲರ ಸಂಘವು ಜಿಲ್ಲಾ ವಕೀಲರ ಭವನದಿಂದ ಬಾಲರಾಜ್ ರಸ್ತೆಯಲ್ಲಿ ಸಾಗಿ ಮಹಾವೀರ ವೃತ್ತದ ಮೂಲಕ ಟಿ.ಸೀನಪ್ಪ ಶೆಟ್ಟಿ ವೃತ್ತದಲ್ಲಿ ಪ್ರತಿಭಟಿಸಿದರು. ನಂತರ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ ಪ್ರವಾಸಿಗರನ್ನು ಕೊಂದವರಿಗೆ ಸೂಕ್ತ ಶಿಕ್ಷೆ ಆಗಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು.ಮರ್ಕಜಿ ಸುನ್ನಿ ಜಾಮೀಯಾ ಮಸ್ಜಿದ್ ಕಮಿಟಿಯವರು ಉಗ್ರವಾದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

“ಭಾರತೀಯ ಪ್ರಜೆಗಳನ್ನು ಉಗ್ರವಾದಿಗಳು ಅವರ ಕುಟುಂಬದವರ ಮುಂದೆಯೇ ಗುಂಡು ಹಾರಿಸಿ ಕೊಂದಿದ್ದಾರೆ. ಇದು ಮಾನವ ಸಮಾಜವೇ ತಲೆ ತಗ್ಗಿಸುವಂಥದ್ದು. ಉಗ್ರವಾದಿಗಳಿಗೆ ಯಾವುದೇ ಜಾತಿ, ಧರ್ಮಗಳಿಲ್ಲ. ಮಾನವಿಯತೆ ಇಲ್ಲದ ಇಂತಹವರನ್ನು ಭಾರತ ಸರ್ಕಾರ ಹುಡುಕಿ ನಡುರಸ್ತೆಯಲ್ಲೇ ಗುಂಡಿಕ್ಕಿ ಕೊಲ್ಲಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ಮನವಿ ಸಲ್ಲಿಸಲಾಯಿತು. ಇದೇ ವೇಳೆ ಉಗ್ರರಿಂದ ಹತ್ಯೆಯಾದವರಿಗೆ ಒಂದು ನಿಮಿಷ ಮೌನಾಚರಣೆ ಮಾಡಿ, ಮೃತರ ಆತ್ಮಕ್ಕೆ ಶಾಂತಿ‌ ಸಿಗಲೆಂದು ಪ್ರಾರ್ಥಿಸಲಾಯಿತು.

ನಗರದ ಶಿವಪ್ಪ‌ನಾಯಕ ವೃತ್ತದಲ್ಲಿ ಜಿಲ್ಲಾ‌ ಕಾಂಗ್ರೆಸ್​ನ ಉತ್ತರ ಬ್ಲಾಕ್ ಕಾಂಗ್ರೆಸ್​ನ ಪದಾಧಿಕಾರಿಗಳು ಪಹಲ್ಗಾಮ್​ನಲ್ಲಿ ಮೃತಪಟ್ಟ ಶಿವಮೊಗ್ಗದ ಮಂಜುನಾಥ್​​ ರಾವ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಹತ್ಯೆಯಾದ ಇತರ ವ್ಯಕ್ತಿಗಳ ಆತ್ಮಕ್ಕೆ ಶಾಂತಿ ಕೋರಿದರು.

ಮೃತ ಮಂಜುನಾಥ್ ಮನೆಗೆ ಸಚಿವ ಮಧು ಬಂಗಾರಪ್ಪ ಭೇಟಿ

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಮೃತಪಟ್ಟ ಮಂಜುನಾಥ್​​ ಅವರ ವಿಜಯ ನಗರದಲ್ಲಿರುವ ಮನೆಗೆ ಭೇಟಿ ನೀಡಿ ತಾಯಿ ಸುಮತಿ, ಸಹೋದರಿ ರೂಪ ಹಾಗೂ ಸಂಬಂಧಿಕರಿಗೆ ಸಾಂತ್ವನ ಹೇಳಿದರು.

ಬಳಿಕ ಮಾತನಾಡಿದ ಅವರು, “ಈ ಸಂದರ್ಭದಲ್ಲಿ ಮಂಜುನಾಥ್​ ಅವರ ಕುಟುಂಬಸ್ಥರ ಜೊತೆ ನಾವು ನಿಲ್ಲಬೇಕಿದೆ. ಇಂದು ಸಂಜೆ ಆರು ಗಂಟೆಗೆ ಕಾಶ್ಮೀರದಿಂದ ಮಂಜುನಾಥ್​ ಅವರ ಮೃತದೇಹ ಹೊರಡಲಿದೆ. ನಾನು ಚೀಫ್ ಸೆಕ್ರೆಟರಿ ಜೊತೆಗೂ ಮಾತನಾಡುತ್ತಿದ್ದೇನೆ. ಅವರು ಪ್ರವಾಸಕ್ಕೆಂದು ಫ್ಯಾಮಿಲಿ ಜೊತೆ ಹೊರಡಿದ್ದರು. ನಾನು ಸಂತೋಷ್ ಲಾಡ್ ಅವರೊಂದಿಗೂ ಮಾತನಾಡಿದ್ದೇನೆ. ಧೈರ್ಯವಾಗಿರಿ, ನಾನು ಎಲ್ಲರನ್ನೂ ಕರೆತರುತ್ತೇನೆ ಎಂದು ಅವರು ಹೇಳಿದ್ದಾರೆ” ಎಂದರು.

ಕೇಂದ್ರ ಸರ್ಕಾರವನ್ನು ಟೀಕಿಸಿದ ಗೋಪಾಲಕೃಷ್ಣ ಬೇಳೂರು

“ನಮ್ಮ ರಾಜ್ಯದ ಮೂವರು ಮೃತಪಟ್ಟಿದ್ದಾರೆ. ಪ್ರತೀ ಬಾರಿ ದಾಳಿ ನಡೆದಾಗ ನಾವು ಅವರನ್ನು ಬಿಡೋದಿಲ್ಲ ಎಂದು ಹೇಳುತ್ತಿದ್ದಾರೆ. ಪುಲ್ವಾಮಾ ದಾಳಿಯ ಸಂದರ್ಭದಲ್ಲೂ ಕೂಡ ಇದನ್ನೇ ಹೇಳಿದ್ದೀರಿ. ಅಂತಹ ಸ್ಥಳಗಳಲ್ಲಿ ಪ್ರವಾಸಿಗರನ್ನು ಬಿಡುವ ಕೆಲಸವನ್ನೇಕೆ ಮಾಡಿದ್ದೀರಿ?. ಪ್ರವಾಸಿಗರನ್ನು ಬಿಟ್ಟಿದ್ದಾರೆ ಎಂದರೆ ಕೇಂದ್ರ ಸರ್ಕಾರ ಭದ್ರತೆ ವಹಿಸಬೇಕು.

ಸಾವು-ನೋವುಗಳಾದಾಗ ಸುಮ್ಮನೆ ಬಿಡುವುದಿಲ್ಲ ಎಂದು ಹೇಳುತ್ತೀರಿ. ಪುಲ್ವಾಮಾ ದಾಳಿಯಾದಾಗ ಎಷ್ಟು ಜನ ಸೈನಿಕರು ಸಾವನ್ನಪ್ಪಿದರು. ಆಗ ಭಯೋತ್ಪಾದಕರನ್ನು ಸಾಯಿಸಿದ್ದೇವೆ ಎಂದು ಹೇಳಿದ್ದಾರೆ, ಅದು ನಿಜನೋ ಸುಳ್ಳೋ ಗೊತ್ತಿಲ್ಲ” ಎಂದು ಟೀಕಿಸಿದರು.

Leave a Reply

Your email address will not be published. Required fields are marked *