ಪಂಚಭೂತಗಳಲ್ಲಿ ಲೀನವಾದ ಮಂಜುನಾಥ್ ರಾವ್

ಕಾಶ್ಮೀರದಲ್ಲಿ ಮೃತರಾದ ಶಿವಮೊಗ್ಗ ಮೂಲದ ಮಂಜುನಾಥ್ ರಾವ್ ಪಂಚಭೂತ ಗಳಲ್ಲಿ ಲೀನರಾದರು. ಶಿವಮೊಗ್ಗದ ತುಂಗಾ ತೀರದಲ್ಲಿರುವ ರೋಟರಿ ಚಿತಗಾರದಲ್ಲಿ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು. ಪುತ್ರ ಅಭಿಜಯ್ ಬ್ರಾಹ್ಮಣ ಸಂಪ್ರದಾಯದಂತೆ ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಗುಂಡಾ ಭಟ್ಟರ ನೇತೃತ್ವದಲ್ಲಿ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ಇದಕ್ಕೂ ಮೊದಲು, ಇಂದು ಬೆಳಿಗ್ಗೆ ೧೦:೩೦ ರ ಸುಮಾರಿಗೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಅವರ ಪಾರ್ಥಿವ ಶರೀರ ಆಗಮಿಸಿತು. ಮೃತದೇಹವನ್ನು ವಿವಿಧ ಸಂಘಟನೆಗಳು ಮುಖಂಡರು ಸಾರ್ವಜನಿಕರು ಬರಮಾಡಿಕೊಂಡರು. ಆ ಬಳಿಕ ಮನೆಯಲ್ಲಿ ಮೃತರ ಅಂತಿಮ ದರ್ಶನ ನಡೆಯಿತು. ಮಧ್ಯಾಹ್ನ ೧೨:೩೦ ರ ಸುಮಾರಿಗೆ ಮನೆಯಲ್ಲಿನ ಅಂತಿಮ ವಿಧಿಗಳನ್ನು ಪೂರೈಸಿ ಮಂಜುನಾಥ್ರವರ ಅಂತಿಮ ಯಾತ್ರೆ ಹೊರಟಿತು.
ಮೆರವಣಿಗೆಯು ಐಬಿ ಸರ್ಕಲ್ ಮೂಲಕ, ಕುವೆಂಪು ರಸ್ತೆಗೆ ಬಂದು, ಜೈಲ್ ಸರ್ಕಲ್ನಲ್ಲಿ ತಿರುವು ಪಡೆದು ದುರ್ಗಿಗುಡಿ ಮುಖ್ಯರಸ್ತೆಯಲ್ಲಿ ಹಾದು, ಸೀನಪ್ಪ ಶೆಟ್ಟಿ ಸರ್ಕಲ್ ಗೆ ಬಂದಿತು. ಅಲ್ಲಿಂದ ಅಮೀರ್ ಅಹಮದ್ ಸರ್ಕಲ್ ಮೂಲಕ ಬಿಹೆಚ್ ರೋಡ್ ನಲ್ಲಿ ಸಾಗಿ, ರೋಟರಿ ಚಿತಾಗಾರವನ್ನು ತಲುಪಿತು . ಮೆರವಣಿಗೆ ಬರುವ ವೇಳೆಯಲ್ಲಿ ಮಾರ್ಗದ ಉದ್ದಕ್ಕೂ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟನ್ನು ಬಂದ್? ಮಾಡಿ ಅಂತಿಮ ನಮನ ಸಲ್ಲಿಸಿದರು. ಈ ವೇಳೆ ನಗರದೆಲ್ಲೆಡೆ ದುಃಖ ಮುಡುಗಟ್ಟಿತ್ತು.
ರೋಟರಿ ಚಿತಾಗಾರಕ್ಕೆ ಮೃತದೇಹ ತಲುಪುತ್ತಲೇ ಶಾಸಕ ಚನ್ನಬಸಪ್ಪ ಹಾಗೂ ವಿವಿಧ ರಾಜಕೀಯ ಮುಖಂಡರು ಮೃತದೇಹವನ್ನು ಚಿತಾಗಾರದೊಳಗೆ ತರಲು ಹೆಗಲು ನೀಡಿದರು. ಆ ಬಳಿಕ ಶಿವಮೊಗ್ಗ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಯಿಂದ ಸರ್ಕಾರಿ ಗೌರವ ನೀಡಲಾಯಿತು. ಗುಂಡಾಭಟ್ಟರ ನೇತೃತ್ವದಲ್ಲಿ ಅಂತಿಮ ವಿಧಿವಿಧಾನಗಳು ನಡದವು. ಪುತ್ರ ಅಭಿಜಯ್ ಕಣ್ಣೀರಿಡುತ್ತಲೇ ತನ್ನ ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಪತ್ನಿ ಪಲ್ಲವಿ ಸೇರಿದಂತೆ ಕುಟುಂಬಸ್ಥರ ದುಃಖ ಮಡುಗಟ್ಟಿತ್ತು. ಸಚಿವ ಮಧು ಬಂಗಾರಪ್ಪರವರು ಸ್ಥಳದಲ್ಲಿದ್ದು ಮೃತ ಕುಟುಂಬಸ್ಥರಿಗೆ ದೈರ್ಯ ಹೇಳಿದರು.













Leave a Reply