ಮದ್ಯದಂಗಡಿಗೆ ಕಟ್ಟಡ ಬಾಡಿಗೆ ಕೊಟ್ಟಿದ್ದಕ್ಕೆ ಕುಟುಂಬಕ್ಕೆ ಬಹಿಷ್ಕಾರ ಹಾಕಿದ ಗ್ರಾಮಸ್ಥರು
ಮದ್ಯದ ಅಂಗಡಿಗೆ ಕಟ್ಟಡ ಬಾಡಿಗೆ ಕೊಟ್ಟಿದಕ್ಕೆ ಗ್ರಾಮಸ್ಥರೆಲ್ಲಾ ಸೇರಿ ಕುಟುಂಬವೊಂದನ್ನು ಬಹಿಷ್ಕಾರ ಹಾಕಿದ ಘಟನೆವೊಂದು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ತಟ್ಟೆಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬಹಿಷ್ಕಾರ ಹಾಕಿದ ಕುಟುಂಬಸ್ಥರನ್ನು ಮಾತನಾಡಿಸಿದರೆ 5 ಸಾವಿರ ದಂಡ ಕಟ್ಟಬೇಕು ಎಂಬ ನಿಯಮವನ್ನೂ ಗ್ರಾಮದಲ್ಲಿ ಜಾರಿಗೆ ತರಲಾಗಿದೆ.
ಹೌದು, ಭದ್ರಾವತಿ ತಾಲೂಕಿನ ತಟ್ಟೆಹಳ್ಳಿ ಗ್ರಾಮದ ಮಂಜೋಜಿರಾವ್ ಎಂಬುವರಿಗೆ ಸೇರಿದ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು 27 ವರ್ಷಕ್ಕೆ ಜಾಗ ಲೀಜ್ ಪಡೆದು ಮದ್ಯದ ಅಂಗಡಿ ತೆರೆದಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿ ಊರಿನ ಮುಖಂಡರು ಮಂಜೋಜಿರಾವ್ ಕುಟುಂಬಕ್ಕೆ ಊರಿಂದ ಬಹಿಷ್ಕಾರ ಹಾಕಿದ್ದಲ್ಲದೇ ಅವರ ಕುಟುಂಬದವರ ಜೊತೆ ಯಾರಾದರೂ ಮಾತನಾಡಿದರೆ ಅವರಿಗೆ 5 ಸಾವಿರ ದಂಡ ವಿಧಿಸಿದ್ದಾರೆ. ಇದೀಗ ನಮಗೆ ನ್ಯಾಯ ಕೊಡಿಸಿ, ಕುಟುಂಬಕ್ಕೆ ಆದ ಬಹಿಷ್ಕಾರಕ್ಕೆ ಮುಕ್ತಿ ಕೊಡಿಸಿ ಎಂದು ಮಂಜೋಜಿರಾವ್ ಜಿಲ್ಲಾಧಿಕಾರಿಗೆ ಮುಂದೆಯೂ ಆಳಲು ತೋಡಿಕೊಂಡಿದ್ದಾರೆ.
ಮಂಜೋಜಿರಾಮ್ ಅವರದ್ದೇ ಸಮುದಾಯದ ಐದಾರು ಮುಖಂಡರು ಬಹಿಷ್ಕಾರ ಹಾಕಿದ್ದಾರೆ. ಈ ಕುಟುಂಬ ತಮ್ಮ ಸಮುದಾಯವರ ಮನೆಗಳಿಗೆ ಹೋಗುವ ಹಾಗಿಲ್ಲ. ಶುಭ ಸಮಾರಂಭಕ್ಕೆ ಬರುವ ಹಾಗಿಲ್ಲ, ದೇವಸ್ಥಾನಕ್ಕೂ ಎಂಟ್ರಿ ಇಲ್ಲ, ಪೂಜೆಗೆ ಹೋದರೆ ಪೂಜಾರಿ ಪೂಜೆ ಮಾಡುವುದಿಲ್ಲ ಎಂದು ಮಂಜೋಜಿರಾವ್ ಅಳಲು ತೋಡಿಕೊಂಡಿದ್ದಾರೆ.
ಮಗನ ಪರಿಸ್ಥಿತಿ ಕಂಡು ಮಂಜೋಜಿರಾವ್ ತಾಯಿ ಕಣ್ಣೀರಿಡುತ್ತಿದ್ದಾರೆ. ಈ ಕುಟುಂಬವನ್ನು ಮಾತನಾಡಿಸಿದಕ್ಕೆ ವ್ಯಕ್ತಿಯೊಬ್ಬರಿಗೆ ಈಗಾಗಲೇ ಐದು ಸಾವಿರ ದಂಡ ಹಾಕಿದ್ದಾರೆ.
ಇದನ್ನೆಲ್ಲ ನಡೆಸಬಾರದು ಕೂಡಲೇ ಆ ಕುಟುಂಬಕ್ಕೆ ನ್ಯಾಯ ಕೊಡಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.