ಮನೆಗೆ ನುಗ್ಗಿ ಚಿನ್ನದ ಓಲೆ, ಹಣ ತಗೊಂಡು ಹೋದ ಮೈಕ್ರೋ ಫೈನಾನ್ಸ್ ಸಿಬ್ಬಂದಿ | ದೂರು ದಾಖಲು
ಕರ್ನಾಟಕದಲ್ಲಿ ಸುಗ್ರೀವಾಜ್ಞೆ ಜಾರಿಯಾದರೂ ಮೈಕ್ರೋ ಫೈನಾನ್ಸ್ (Micro Finance) ಕಿರುಕುಳ ನಿಲ್ಲುತ್ತಿಲ್ಲ. ಕಂತು ವಸೂಲಿಗೆ ಬಂದಿದ್ದ ಮೈಕ್ರೋ ಫೈನಾನ್ಸ್ ಸಿಬ್ಬಂದಿಯಿಂದ ಮನೆಯಲ್ಲಿದ್ದ ಚಿನ್ನದ ಓಲೆ, ಹಣ ತೆಗೆದುಕೊಂಡು ಹೋಗಿರುವಂತಹ ಘಟನೆ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಡೂರು ಗ್ರಾಮದಲ್ಲಿ ನಡೆದಿದೆ.
ಈ ಬಗ್ಗೆ ಫೈನಾನ್ಸ್ ಸಿಬ್ಬಂದಿ ವಿರುದ್ಧ ಸಾಲ (loan) ಮಾಡಿದ್ದ ಸಂಪವ್ವ ತಳಗಟ್ಟಿ ದೂರು ನೀಡಿದ್ದು, ರಟ್ಟಿಹಳ್ಳಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಸಂಪವ್ವ ಕುಟುಂಬ ಫೈನಾನ್ಸ್ ಕಂಪನಿ ಬಳಿ 50 ಸಾವಿರ ರೂ. ಹಣ ಸಾಲ ಪಡೆದುಕೊಂಡಿದ್ದರು. ತಿಂಗಳಿಗೆ ಎರಡು ಕಂತುಗಳಂತೆ 1250 ರೂ ಕಟ್ಟುತ್ತಿದ್ದರು. ಸಂಪವ್ವ ಮತ್ತು ಆಕೆಯ ಮಗಳು ಗದ್ದೆ ಕೆಲಸಕ್ಕೆ ಹೋಗಿದ್ದಾಗ ಕಂತು ವಸೂಲಿಗೆ ಫೈನಾನ್ಸ್ ಸಿಬ್ಬಂದಿ ಬಂದಿದ್ದಾರೆ. ಈ ವೇಳೆ ಮನೆಯಲ್ಲಿ ಇಟ್ಟಿದ್ದ 25 ಸಾವಿರ ರೂ ಹಣ, ಕಿವಿ ಓಲೈ ಕೊಂಡೊಯ್ದಿರುವುದಾಗಿ ಆರೋಪ ಮಾಡಲಾಗಿದೆ.
ಇನ್ನು ಪರಿಷತ್ನಲ್ಲಿ ಕಿರು ಸಾಲ, ಸಣ್ಣಸಾಲ ಬಲವಂತದ ಕ್ರಮಗಳ ಪ್ರತಿಬಂಧಕ ವಿಧೇಯಕ ಬಗ್ಗೆ ಚರ್ಚೆ ಮಾಡಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಚಾಮರಾಜನಗರ ಜಿಲ್ಲೆಯಲ್ಲಿ ಗ್ರಾಮಕ್ಕೆ ಗ್ರಾಮವೇ ಖಾಲಿಯಾಯ್ತು. ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಸುಮಾರು 15 ಮಂದಿ ಆತ್ಮಹತ್ಯೆಗೆ ಶರಣಾದರು. ಜನರ ಮಾನ ಕಳೆಯುವ ಅಮಾನುಷ ರೀತಿ ನೀತಿ ಕಂಡುಬಂತು. ಜನರೂ ಭಯದಲ್ಲಿ ದಿನದೂಡುವಂತಾಯಿತು ಎಂದು ಹೇಳಿದ್ದಾರೆ.
ಸಾಲಕೊಟ್ಟು ಬಳಿಕ ಎಳೆದುಕೊಂಡು ಬಂದು ವಸೂಲಿ ಮಾಡುತ್ತಾರೆ. ಕಿರುಕುಳ ತಪ್ಪಿಸುವ ಉದ್ದೇಶದಿಂದ ಸುಗ್ರೀವಾಜ್ಞೆಯನ್ನು ತಂದಿದ್ದೇವೆ. ಕಿರುಸಾಲ ಹಾಗೂ ಸಣ್ಣ ಸಾಲ ಪ್ರತಿಬಂಧಕ ಸುಗ್ರೀವಾಜ್ಞೆ ತಂದಿದ್ದೇವೆ. ಈ ಬಿಲ್ನಲ್ಲಿ ಕೆಲವು ಸಣ್ಣಪುಟ್ಟ ತಿದ್ದುಪಡಿ ಆಗಿದೆ ಎಂದು ತಿಳಿಸಿದ್ದಾರೆ.