
ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಶಿವಮೊಗ್ಗ ನಂದನ್ ಇನ್ನಿಲ್ಲ..!
ಖ್ಯಾತ ಫೋಟೋ ಜರ್ನಲಿಸ್ಟ್ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಶಿವಮೊಗ್ಗ ನಂದನ್ (57ವರ್ಷ ) ಹೃದಯಾಘಾತದಿಂದ ನಿಧನರಾಗಿದ್ದಾರೆ.
ತಡರಾತ್ರಿ 1:30ರ ಸುಮಾರಿಗೆ ನಂದನ್ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಕುಟುಂಬದವರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಂದನ್ ಇಹಲೋಕ ತ್ಯಜಿಸಿದ್ದಾರೆ.
ಮೃತರು ಪತ್ನಿ, ಪುತ್ರ, ಪುತ್ರಿ, ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಇಂದು ರೈಲ್ವೆ ನಿಲ್ದಾಣ ಬಳಿ ಇರುವ ಎ.ಎ.ಕಾಲೋನಿಯಲ್ಲಿರುವ ನಿವಾಸದಲ್ಲಿ ನಂದನ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಂಜೆ ಅಂತ್ಯಕ್ರಿಯೆ ನೆರವೇರಲಿದೆ.
ನಂದನ್ 1999ರಿಂದ ಶಿವಮೊಗ್ಗದಲ್ಲಿ ಇಂಡಿಯನ್ ಎಕ್ಸ್ಪ್ರೆಸ್ನಲ್ಲಿ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದರು. ಶಿವಮೊಗ್ಗ ನಂದನ್ ಎಂದೇ ಖ್ಯಾತಿಯನ್ನು ಪಡೆದಿದ್ದರು. ಅದಷ್ಟೇ ಅಲ್ಲ ಸಾಕಷ್ಟು ಪ್ರಯೋಗಗಳ ಮೂಲಕ ಗಮನ ಸೆಳೆದಿದ್ದರು. ನಂದನ್ ಅವರು ತೆಗೆದ ಹಲವು ಚಿತ್ರಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದವು.
ಕುವೆಂಪು ವಿಶ್ವವಿದ್ಯಾಲಯ, ಧರ್ಮಸ್ಥಳ ಎಸ್ ಡಿ ಎಂ ಕಾಲೇಜು ಹಾಗೂ ಮೈಸೂರಿನ ಹಲವು ಕಾಲೇಜುಗಳ ವಿದ್ಯಾರ್ಥಿಗಳಿಗೆ ಛಾಯಾಗ್ರಹಣದ ತರಬೇತಿ ನೀಡುತ್ತಿದ್ದರು. ಪರಿಸರ ಹಾಗೂ ವ್ಯಕ್ತಿ ಚಿತ್ರಗಳನ್ನು ಹೆಚ್ಚು ಸೆರೆ ಹಿಡಿಯುತ್ತಿದ್ದರು.
ಹೀಗೆ ಸೆರೆ ಹಿಡಿದ ಪರಿಸರ ಹಾಗೂ ವ್ಯಕ್ತಿ ಚಿತ್ರಗಳಿಗೆ ಹಲವು ಪ್ರಶಸ್ತಿಗಳು ಸಂದಿವೆ. ನಿನ್ನೆಯಷ್ಟೇ ಶಿವಮೊಗ್ಗ ಸಮೀಪದ ಕುಂಸಿಯ ಸರ್ಕಾರಿ ಶಾಲೆಯಲ್ಲಿ ಛಾಯಾಚಿತ್ರ ತರಬೇತಿಯನ್ನು ಏರ್ಪಡಿಸಿ, ಛಾಯಾಗ್ರಹಣದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ್ದರು.
ಶಿವಮೊಗ್ಗದ ರೈಲ್ವೆ ನಿಲ್ದಾಣ ಬಳಿ ಇರುವ ನಂದನ್ ಅವರ ಮನೆಗೆ ವಿಧಾನಪರಿಷತ್ ಸದಸ್ಯರಾದ ಡಿ ಎಸ್ ಅರುಣ್ ಸೇರಿದಂತೆ ಅನೇಕ ಹಿರಿಯ ಪತ್ರಕರ್ತರು ಹಾಗೂ ಅಭಿಮಾನಿಗಳು ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದಿದ್ದಾರೆ.
ಶಿವಮೊಗ್ಗದ ರೋಟರಿ ಚಿತಾಗರದಲ್ಲಿ ಇಂದು ಸಂಜೆ ಮೃತರ ಅಂತ್ಯ ಸಂಸ್ಕಾರ ನೆರವೇರಲಿದೆ. ಅವರ ನಿಧನಕ್ಕೆ ಜಿಲ್ಲಾ ವರದಿಗಾರರು, ಛಾಯಾಗ್ರಾಹಕರು ಕಂಬನಿ ಮಿಡಿದಿದ್ದಾರೆ.
