ಪೊಲೀಸರ ಮೇಲಿನ ಕೋಪಕ್ಕೆ ವಿಧಾನಸೌಧದ ಮುಂಭಾಗದಲ್ಲಿ ಬೈಕ್ ಗೆ ಬೆಂಕಿ ಹಚ್ಚಿದ ಯುವಕ
ದೂರು ಸಲ್ಲಿಸಲು ತೆರಳಿದ್ದ ತನ್ನ ತಾಯಿಗೆ ಪೊಲೀಸರು ಬೈದಿದ್ದಾರೆ ಎಂಬ ಕೋಪಕ್ಕೆ ತನ್ನ ಬೈಕ್ಗೆ ಯುವಕನೊಬ್ಬ ಬೆಂಕಿ ಹಚ್ಚಿರುವ ಘಟನೆ ಬೆಂಗಳೂರಿನ ವಿಧಾನಸೌಧದ ಬಳಿ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಮೂಲದ ಪೃಥ್ವಿರಾಜ್ ಎಂಬಾತ ಕೃತ್ಯವೆಸಗಿದ್ದಾನೆ. ಬೆಂಗಳೂರಿನ ವಿಧಾನಸೌಧ ಹಾಗು ಹೈಕೋರ್ಟ್ ನಡುವಿನ ರಸ್ತೆಯಲ್ಲಿ ಬೈಕ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಬೆಂಕಿ ಹಚ್ಚಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರೋ ಪೃಥ್ವಿರಾಜ್ ನಾನು ಕೆಲದಿನಗಳ ಹಿಂದೆ ಟ್ರಿಪ್ ಹೋಗಿದ್ದೆ, ಆಗ ಮಳೆಗೆ ನೆಂದು ನನ್ನ ಫೋನ್ ಸ್ವಿಚ್ ಆಫ್ ಆಗಿತ್ತು. ಆಗ ನನ್ನ ತಾಯಿ ನಾನು ಕಾಣ್ತಿಲ್ಲ ಎಂದು ಪೊಲೀಸ್ ಠಾಣೆಗೆ ದೂರು ಕೊಡಲು ಹೋಗಿದ್ರು, ಆದ್ರೆ ಪೊಲೀಸರು ಕಂಪ್ಲೆಂಟ್ ತೆಗೆದುಕೊಳ್ಳದೇ ನನ್ನ ತಾಯಿಗೆ ಬೈದು, ದರ್ಪ ತೋರಿದ್ದಾರೆ. ಬಳಿಕ ನಾನು ಮನೆಗೆ ಬಂದ ಮೇಲೆ ಈ ವಿಚಾರ ನನಗೆ ತಿಳಿಯಿತು. ಇದನ್ನು ಪೊಲೀಸ್ರ ಬಳಿ ಪ್ರಶ್ನೆ ಮಾಡಿದೆ. ಆಗ ನನ್ನನ್ನು ನನ್ನ ತಾಯಿಯ ಎದುರೇ ನಾಯಿಗೆ ಹೊಡೆದಂತೆ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾನೆ.