Hosanagara | ಯಕ್ಷಗಾನ ಕಲೆಯನ್ನು ಉಳಿಸಿ ,ಬೆಳೆಸುವ ಜವಬ್ದಾರಿ ನಮ್ಮ ಮೇಲಿದೆ – ಪಟ್ಲ ಸತೀಶ್ | ಉಚಿತ ಯಕ್ಷಗಾನ ತರಬೇತಿ ಕಾರ್ಯಗಾರ

Hosanagara | ಯಕ್ಷಗಾನ ಕಲೆಯನ್ನು ಉಳಿಸಿ ,ಬೆಳೆಸುವ ಜವಬ್ದಾರಿ ನಮ್ಮ ಮೇಲಿದೆ – ಪಟ್ಲ ಸತೀಶ್ 

ಸಾಂಸ್ಕೃತಿಕ ಲೋಕಕ್ಕೆ ಅದ್ವಿತೀಯ ಕೊಡುಗೆ ನೀಡಿರುವ ಹೆಮ್ಮೆಯ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ಮಹತ್ವದ ಜವಾಬ್ದಾರಿ ನಮ್ಮ ಮೇಲಿದ್ದು, ಈ ನಿಟ್ಟಿನಲ್ಲಿ ಶಾಲೆಯ ಮಕ್ಕಳಿಗೆ ಯಕ್ಷ ಶಿಕ್ಷಣ ನೀಡಲು ಯಕ್ಷದೃವ ಪಟ್ಲ ಟ್ರಸ್ಟ್ ಫೌಂಡೇಶನ್ ಮುಂದಾಗಿದೆ ಎಂದು ಟ್ರಸ್ಟ್ ಸ್ಥಾಪಕ, ಪ್ರಸಿದ್ಧ ಭಾಗವತ ಪಟ್ಲ ಸತೀಶ್ ಶೆಟ್ಟಿ ಹೇಳಿದರು.

ಪಟ್ಟಣದ ಆರ್ಯಈಡಿಗ ಸಭಾಭವನದಲ್ಲಿ ಯಕ್ಷಧ್ರುವ ಯಕ್ಷ ಶಿಕ್ಷಣ ಯೋಜನೆಯಡಿಯಲ್ಲಿ ನಾಟ್ಯ ತರಬೇತಿ ಶಿಕ್ಷಣ ಅಭಿಯಾನ 2024-25ನೇ ಉಚಿತ ಯಕ್ಷಗಾನ ತರಬೇತಿ ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಸಾವಿರಾರು ಮಕ್ಕಳಿಗೆ ತರಬೇತಿ ನೀಡಲಾಗಿದೆ ಮುಂದಿನ ದಿನದಲ್ಲಿ ಅವರಿಗೆ ವೇದಿಕೆ ಒದಗಿಸುವ ಪ್ರಯತ್ನವೂ ನಡೆಯಲಿದೆ ಎಂದರು.

ಶಾಲೆಯ ಮಕ್ಕಳಿಗೆ ಸಾಂಸ್ಕೃತಿಕ ಶಿಕ್ಷಣಕ್ಕೆ ಹೆಚ್ಚಿನ ಸೌಲಭ್ಯಗಳು ಇರುವುದಿಲ್ಲ. ಅವರಿಗೆ ಬಾಲ್ಯದಲ್ಲೇ ಯಕ್ಷಗಾನದ ಬಗ್ಗೆ ಜ್ಞಾನ ಹಾಗೂ ಅಭಿರುಚಿ ಮೂಡಿಸುವುದು ಟ್ರಸ್ಟ್ ಉದ್ದೇಶವಾಗಿದೆ ಎಂದರು.

ಹಿರಿಯ ಕಲಾವಿದರ ಪೈಕಿ ಕೆಲವರು ಶಾಲಾ ಶಿಕ್ಷಣ ಪಡೆಯದಿದ್ದರೂ ರಂಗದಲ್ಲಿ ಅದ್ಭುತ ಭಾಷಾ ಪಾಂಡಿತ್ಯ, ವಾಕ್ ಚಾತುರ್ಯದ ಮೂಲಕ ಪ್ರಸಿದ್ದಿ ಸಂಪಾದಿಸಿದ್ದಾರೆ. ಅದುವೇ ಯಕ್ಷಗಾನ ಕಲಾವಿದರು ಕನಿಷ್ಟ ಸಂಬಳ ಪಡೆದು ಮೇಳದಲ್ಲಿ ಕೆಲಸ ಮಾಡುತ್ತಿದ್ದರು ತಮ್ಮ ಕುಟುಂಬದ ನಿರ್ವಹಣೆಯ ಜೊತೆಗೆ ಕಲೆಯನ್ನು ಬೆಳೆಸಿಕೊಂಡು ಬಂದಿದ್ದಾರೆ ಕಲಾವಿದರು ಯಾವುದೇ ತೊಂದರೆಗೊಳಗಾಗದೇ ಬದುಕು ಸಾಗಿಸುವುದೇ ಕಷ್ಟಕರವಾಗಿತ್ತು ಇಂತಹ ಸ್ಥಿತಿಯನ್ನು ಕಲಾವಿದರು ಯಾವುದಾದರೂ ರೀತಿಯಲ್ಲಿ ಸಹಾಯ ಮಾಡಬೇಕೆಂಬ ಆಶಯ ಉಂಟಾಯಿತು. ದೇವರ ದಯೆಯಿಂದ ನನ್ನುನ್ನು ಪ್ರೀತಿಸುವ ಯಕ್ಷಗಾನ ಕಲೆಯನ್ನು ಗೌರವಿಸುವ ದೊಡ್ಡ ಜನ ಸಮೂಹದ ಮೂಲಕ ನನಗೆ ದೊರೆತಿದೆ ಇದರಿಂದ ಯಶಸ್ವಿಯಾಗಿ ಯಕ್ಷಧೃವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪನೆ ಮಾಡಲಾಗಿದೆ. ಮಲೆನಾಡಿನಲ್ಲಿ ಬಾಲ್ಯದಲ್ಲಿಯೇ ಯಕ್ಷಗಾನವನ್ನು ಮಕ್ಕಳಿಗೆ ಕಲಿಸಬೇಕೆಂದು ಕಲೆಯನ್ನು ಉಳಿಸಬೇಕೆಂಬ ಉದ್ದೇಶದಿಂದ ನಾನು ಇಲ್ಲಿಗೆ ಬಂದಿದ್ದು ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಿಮ್ಮ ಮೇಲಿದ್ದು ಎಲ್ಲರೂ ಸೇರಿ ಯಕ್ಷಗಾನ ಕಲೆ ಉಳಿಸೋಣ ಎಂದರು.


ಈ ಕಾರ್ಯಕ್ರಮವನ್ನು ಶಾಸಕರಾದ ಬೇಳೂರು ಗೋಪಾಲಕೃಷ್ಣ ಉದ್ಘಾಟಿಸಿ ಮಾತನಾಡಿ, ಯಕ್ಷಗಾನ ಇಂದಿನ ಕಾಲದಲ್ಲಿ ಟಿ.ವಿ ಮೊಬೈಲ್ ದಾಳಿಯಿಂದ ನಶಿಸಿ ಹೋಗುತ್ತಿದೆ. ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದ್ದು ನಮ್ಮ ಮಕ್ಕಳಿಗೆ ಯಕ್ಷಗಾನ ಕಲೆಯನ್ನು ಕಲಿಸೋಣ ಯಕ್ಷಗಾನ ಕಲೆಯನ್ನು ಉಳಿಸೋಣ ಎಂದರು.

ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಕರಾವಳಿ ಪ್ರದೇಶದಲ್ಲಿ ಇಂದಿಗೂ ಯಕ್ಷಗಾನ ಪ್ರಚಲಿತದಲ್ಲಿದೆ‌. ಕರಾವಳಿ ಪ್ರದೇಶದಲ್ಲಿ ಕಲಾವಿದರು ಸಾಕಷ್ಟಿದ್ದು ಅವರ ಜೀವನ ಕಷ್ಟಕರವಾಗಿದೆ ಜೀವನ ಕಷ್ಟಕರವಾಗಿರುವುದರಿಂದ ಯಕ್ಷಗಾನ ಕಲೆ ನಶಿಸುತ್ತಿದ್ದು ಈ ಕಲೆಯನ್ನು ಮುಂದುವರೆಸಲು ನಾವು ನೀವು ಸೇರಿ ಕಲೆ ಉಳಿಸೋಣ ಬೆಳೆಸೋಣ ಎಂದರು.

ಪತ್ರಕರ್ತ ನಗರ ರಾಘವೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಹೊಸನಗರ ತಾಲ್ಲೂಕಿನಲ್ಲಿ ಹತ್ತು ಶಾಲೆಗಳಲ್ಲಿ 10 ಜನ ಯಕ್ಷಗಾನ ಶಿಕ್ಷಕರನ್ನು ನೇಮಿಸಲಾಗಿದ್ದು ಅವರಿಗೆ ಪ್ರತಿ ತಿಂಗಳು 18 ಸಾವಿರ ಸಂಬಳವನ್ನು ಪಟ್ಲ ಪೌಂಡಿಶನ್ ವತಿಯಿಂದ ನೀಡಲಾಗುತ್ತಿದೆ. ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.


ಈ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಕುಬೇಂದ್ರಪ್ಪ, ಚಂದ್ರಮೌಳಿ ಗೌಡ, ಕೆ.ವಿ ಸುಬ್ರಹ್ಮಣ್ಯ, ಕೆ.ವಿ ಕೃಷ್ಣಮೂರ್ತಿ, ಡಾ. ಶಾಂತರಾಮ ಪ್ರಭು, ಸುಬ್ರಹ್ಮಣ್ಯ, ದುಮ್ಮ ವಿನಯ್‌ಕುಮಾರ್, ದೇವರಾಜ್, ಅಶ್ವಿನಿ ಪಂಡಿತ್ ವೆಂಕಟೇಶ್‌ಮೂರ್ತಿ, ಗೌತಮ್ ಕುಮಾರಸ್ವಾಮಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *