ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಕಾಂಗ್ರೆಸ್ನಲ್ಲಿ ಸಾಕಷ್ಟು ಬೆಳವಣಿಗಳು ನಡೆಯುತ್ತಿವೆ. ಜಿಲ್ಲಾಧ್ಯಕ್ಷ ಸುಂದರೇಶ್ರವರು, ಇಲ್ಲಿನ ಕಾಂಗ್ರೆಸ್ ಮುಖಂಡರಾದ ಕಿಮ್ಮನೆ ರತ್ನಾಕರ್ ಹಾಗೂ ಆರ್ಎಂ ಮಂಜುನಾಥ್ ಗೌಡರ ನಡುವಿನ ಭಿನ್ನಮತ ಶಮನ ಮಾಡುವ ಸಂಧಾನ ಮಾಡಿದ್ದರು. ಅಲ್ಲದೆ ಇಬ್ಬರು ನಾಯಕರು ಒಗ್ಗಟ್ಟಿನಿಂದ ಸಾಗುತ್ತಾರೆ ಎಂದು ಸುದ್ದಿಗೋಷ್ಟಿಯಲ್ಲಿ ಪ್ರಕಟಿಸಿದ್ದರು.
ಇದರ ಬೆನ್ನೆಲ್ಲೆ ಇದೀಗ ಕಾಂಗ್ರೆಸ್ ಕಾರ್ಯಕರ್ತರು ಕಾಂತಾರ ಸಿನಿಮಾದ ಲಾಸ್ಟ್ ಸೀನ್ ಮಾದರಿಯಲ್ಲಿ ಇಬ್ಬರು ನಾಯಕರನ್ನು ಒಂದು ಮಾಡುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಸಾಕ್ಷಿಯಾಗಿದ್ದು ಗಾಡರಗದ್ದೆ ನರಸಿಂಹ ಸ್ವಾಮಿಯ ದೇವಾಲಯದ ಜಾತ್ರೆ.
ಹೌದು, ಇವತ್ತು ತೀರ್ಥಹಳ್ಳಿಯ ನಾಲೂರು ಸಮೀಪ ಬರುವ ಗಾಡರಗದ್ದೆಯ ಹುರುಳಿ ಎಂಬ ಗ್ರಾಮದ ನರಸಿಂಹ ಸ್ವಾಮಿ ದೇವಸ್ಥಾನದ ಜಾತ್ರೆ ನಡೆಯುತ್ತಿತ್ತು. ಸುಮಾರು 2-3 ಸಾವಿರ ಜನರು ಜಾತ್ರೆಯಲ್ಲಿ ಸೇರಿದ್ದರು. ಈ ಜಾತ್ರೆ 10 ನಿಮಿಷದ ಅಂತರದಲ್ಲಿ ಆರ್ಎಂ ಮಂಜುನಾಥ್ ಗೌಡರು ಹಾಗೂ ಮಾಜಿ ಸಚಿವ ಕಿಮ್ಮನೆ ರತ್ನಾಕರ್ರವರು ಭೇಟಿಕೊಟ್ಟಿದ್ದರು. ಬೇರೆ ಬೇರೆಯಾಗಿ ಬಂದಿದ್ದ ಮುಖಂಡರು ಪರಸ್ಪರ ಮುಖಾಮುಖಿಯಾಗುವ ಸಂದರ್ಭ ಸಹಜವಾಗಿಯೇ ಎದುರಾಗಿತ್ತು.
ಈ ವೇಳೇ ದೇವರ ದರ್ಶನ ಪಡೆದ ಬಳಿಕ, ಕಾರ್ಯಕರ್ತರು ಹಾಗೂ ಸ್ಥಳೀಯರು ಇಬ್ಬರು ನಾಯಕರ ಮುನಿಸು ನಿವಾರಿಸಿದ್ದರಷ್ಟೆ ಅಲ್ಲದೆ ಯಾರಿಗೆ ಟಿಕೆಟ್ ಸಿಕ್ಕರೂ ನಾವು ಕೆಲಸ ಮಾಡುತ್ತೇವೆ, ಭಿನ್ನಮತ ಬೇಡ, ಒಗ್ಗಟ್ಟಿನಿಂದ ಸಾಗೋಣ ಎಂದು ನಾಯಕರಲ್ಲಿ ವಿನಂತಿ ಮಾಡಿದ್ರು. ಅಲ್ಲದೆ ನಾಯಕರಿಬ್ಬರ ಕೈಗಳನ್ನು ಹಿಡಿದು ತಮ್ಮ ಎದೆ ಮೇಲಿಟ್ಟುಕೊಂಡು ಮುಖಂಡರೊಬ್ಬರು ಒಗ್ಗಟ್ಟಿನಿಂದ ಸಾಗೋಣ ಎಂಬ ಸಂದೇಶವನ್ನು ನೀಡಿದರು.