ರಿಪ್ಪನ್ಪೇಟೆ : ಇಲ್ಲಿನ ಹೊಸನಗರ-ಕುಂದಾಪುರ ರಾಜ್ಯ ಹೆದ್ದಾರಿಯಲ್ಲಿನ ಜುಮ್ಮಾ ಮಸೀದಿ ಮುಂಭಾಗದ ರಾಯಲ್ ಕಂಫರ್ಟ್ ಕಟ್ಟಡದಲ್ಲಿ ಮದ್ಯದಂಗಡಿ ಆರಂಭಿಸುವ ಹುನ್ನಾರ ನಡೆಯುತ್ತಿದ್ದು ಇದನ್ನು ವಿರೋಧಿಸಿ ಇಂದು ರಿಪ್ಪನ್ಪೇಟೆ ಮೊಹಿಯುದ್ದೀನ್ ಜುಮ್ಮಾ ಮಸೀದಿ ಸಮಿತಿ ಮತ್ತು ಸರ್ವ ಪಕ್ಷಗಳಿಂದ ಪ್ರತಿಭಟನೆ ನಡೆಸಿದರು.
ಕಳೆದ ಒಂದು ವಾರದ ಹಿಂದೆ ಶಿವಮೊಗ್ಗ ಅಬಕಾರಿ ಜಿಲ್ಲಾಧಿಕಾರಿಗಳಿಗೂ ಮತ್ತು ಜಿಲ್ಲಾಧಿಕಾರಿಗಳ ಕಛೇರಿಗೆ ಪಟ್ಟಣದಿಂದ ಸರ್ವಪಕ್ಷಗಳ ನಿಯೋಗ ತೆರಳಿ ಯಾವುದೇ ಕಾರಣಕ್ಕೂ ಪ್ರಾರ್ಥನಾ ಮಂದಿರದ ಸನಿಹದಲ್ಲಿ ಸಿಎಲ್-7 ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದು ಎಂದು ಆಗ್ರಹಿಸಿ ಮನವಿ ಸಲ್ಲಿಸಲಾಗಿದ್ದರೂ ಕೂಡಾ ಅಧಿಕಾರಿಗಳು ಜನಸಾಮಾನ್ಯರ ವಿರೋಧವಿದ್ದಲಿ ಅಂಗಡಿ ಅರಂಭಿಸುವುದಿಲ್ಲ ಎಂಬ ಭರವಸೆ ನೀಡಿದ್ದು ನಂತರದಲ್ಲಿ ಜಿಲ್ಲಾ ಅಬಕಾರಿ ಜಿಲ್ಲಾಧಿಕಾರಿಗಳು ಏಕಾಏಕಿ ಮದ್ಯದಂಗಡಿಗೆ ಪರವಾನಿಗೆ ನೀಡುವ ಹುನ್ನಾರದಲ್ಲಿ ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಮಸೀದಿಗೂ ರಾಯಲ್ ಕಂಫರ್ಟ್ ಕಟ್ಟಡಕ್ಕೂ ಕೇವಲ 60 ಮೀಟರ್ ಅಂತರದಲ್ಲಿದ್ದರೂ ಅಬಕಾರಿ ನಿಯಮವನ್ನು ಗಾಳಿಗೆ ತೋರಿ ಅವೈಜ್ಞಾನಿಕವಾಗಿ ಅಂಗಡಿ ಆರಂಭಕ್ಕೆ ಹಸಿರು ನಿಶಾನೆ ತೋರಿರುವ ಕ್ರಮವನ್ನು ವಿರೋಧಿಸಿ ಇಂದು ಮುಸ್ಲಿಂ ಮಹಿಳೆಯರು ಸೇರಿದಂತೆ ಸರ್ವಪಕ್ಷಗಳ ಮುಖಂಡರು ಪಕ್ಷಾತೀತವಾಗಿ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.
ನಂತರ ಮಾಧ್ಯಮ ಪ್ರತಿನಿದಿಗಳೊಂದಿಗೆ ಮಾತನಾಡಿದ ರಾಜ್ಯ ಜೆಡಿಎಸ್ ಪ್ರಧಾನಕಾರ್ಯದರ್ಶಿ ಆರ್.ಎ.ಚಾಬುಸಾಬ್ ತಿಂಗಳ ಈ ಹಿಂದೆ ಮೊಹಿಯುದ್ದೀನ್ ಜುಮ್ಮಾ ಮಸೀದಿ ಸಮಿತಿ ಹಾಗೂ ರಾಯಲ್ ಕಂಫರ್ಟ್ ಲಾಡ್ಜ್ ಅಕ್ಕಪಕ್ಕದ ನಿವಾಸಿಗಳ ನಿಯೋಗದೊಂದಿಗೆ ಕ್ಷೇತ್ರದ ಶಾಸಕ ಎಂ.ಎಸ್.ಐ.ಎಲ್. ಅಧ್ಯಕ್ಷ ಹರತಾಳು ಹಾಲಪ್ಪನವರೊಂದಿಗೆ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಯಾವುದೇ ಕಾರಣಕ್ಕೂ ಇಲ್ಲಿ ಸಿಎಲ್-7 ಮದ್ಯದಂಗಡಿ ಆರಂಭಿಸದಂತೆ ಮನವಿ ಪತ್ರವನ್ನು ಸಲ್ಲಿಸಲಾಗಿದ್ದರೂ ಕೂಡಾ ಶಿವಮೊಗ್ಗ ಜಿಲ್ಲಾ ಅಬಕಾರಿ ಜಿಲ್ಲಾಧಿಕಾರಿ ಸರ್ವಾಧಿಕಾರಿ ಧೋರಣೆಯಿಂದಾಗಿ ಮದ್ಯದಂಗಡಿಗೆ ಶಿಫಾರಸ್ಸು ಮಾಡಿರುವ ಕ್ರಮವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದು ಕೂಡಲೇ ಈ ಬಗ್ಗೆ ಮದ್ಯದಂಗಡಿ ಪರವಾನಿಗೆ ರದ್ದುಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಅಮರಣಾಂತ ಸತ್ಯಾಗ್ರಹ ನಡೆಸುವ ಎಚ್ಚರಿಕೆಯನ್ನು ನೀಡಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್, ಬಿಜೆಪಿ ,ಜೆಡಿಎಸ್ ಮತ್ತು ಆಮ್ ಆದ್ಮಿ ಪಕ್ಷದ ಮುಖಂಡರು ಭಾಗವಹಿಸಿ ಮಾತನಾಡಿದರು.
ಇದೇ ಸಂಧರ್ಭದಲ್ಲಿ ಬಾರ್ ತೆರೆಯಲು ಉದ್ದೇಶಿಸಿರುವ ಕಟ್ಟಡ ಕಾನೂನುಬಾಹಿರವಾಗಿದ್ದು ಸದರಿ ಜಾಗದ ಮೂಲ ದಾಖಲಾತಿಗಳನ್ನು ನೀಡುವಂತೆ ಗ್ರಾಪಂ ಅಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಬೆಳಿಗ್ಗೆ 10 ಗಂಟೆಯಿಂದ ಪ್ರತಿಭಟನೆ ಪ್ರಾರಂಭವಾಗಿದ್ದರೂ ಪ್ರತಿಭಟನಾ ಸ್ಥಳಕ್ಕೆ ಸಂಜೆ 6 ಗಂಟೆಗೆ ಆಗಮಿಸಿದ ಹೊಸನಗರ ತಹಶೀಲ್ದಾರ್ ವಿ.ಎಸ್ ರಾಜೀವ್ ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವ ಭರವಸೆ ನೀಡಿದರು.
ಈ ಪ್ರತಿಭಟನೆಯಲ್ಲಿ ರಿಪ್ಪನ್ಪೇಟೆ ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುಳಾ ಕೆ ರಾವ್ ಉಪಾಧ್ಯಕ್ಷರಾದ ಮಹಾಲಕ್ಷ್ಮಿ ಅಣ್ಣಪ್ಪ,ಮೊಹಿಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಮಹ್ಮದ್ ರಫಿ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಂಡಿ ರಾಮಚಂದ್ರ, ಗ್ರಾಮ ಪಂಚಾಯ್ತಿ ಸದಸ್ಯರಾದ ಆಸೀಫ಼್ ಭಾಷಾಸಾಬ್, ಡಿ.ಈ.ಮಧುಸೂದನ್,ಧನಲಕ್ಷ್ಮಿ, ಸಾರಾಭಿ,ವೇದಾವತಿ ಪರಮೇಶ್ , ಪ್ರಕಾಶ ಪಾಲೇಕರ್, ಗಣಪತಿ ಗವಟೂರು,ಚಂದ್ರೇಶ್ ,ವಿವಿಧ ಪಕ್ಷಗಳ ಮುಖಂಡರಾದ ಅಮೀರ್ ಹಂಜಾ,ಎಂ ಎಂ ಪರಮೇಶ್,ಗಣೇಶ್ ಸೂಗೋಡು, ಸಂತೋಷ್ ಆಶ್ರಿತಾ,ಕುಕ್ಕಳಲೇ ಈಶ್ವರಪ್ಪ, ವಾಹಿದ್, ಮುಸ್ತಾಫ್ ಅಹಮದ್, ಮಹಮ್ಮದ್ ಶಫ಼ಿ, ಹಸನಬ್ಬ, ಕೆ.ಹೆಚ್.ಆರ್.ಮಹಮ್ಮದ್ (ಮೋಣು) ಇನ್ನಿತರ ಸಮಾಜ ಬಾಂಧವರು ಹಾಗೂ ಇತರ ರಾಜಕೀಯ ಪಕ್ಷದ ಮುಖಂಡರು ಪಾಲ್ಗೊಂಡಿದರು.