ಹೊಸನಗರ : ಬೆಂಗಳೂರು ಜಿಲ್ಲೆಯ ಆಡುಗೋಡಿ ಆನೆಪಾಳ್ಯದ ರಿಯಲ್ ಎಸ್ಟೇಟ್ ಉದ್ಯಮಿ ಹೊಸನಗರದ ಖಾಸಗಿ ಲಾಡ್ಜ್ ನಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತಪಟ್ಟ ವ್ಯಕ್ತಿ ಮುನಿರಾಜು (48) ಬೆಂಗಳೂರು ಮೂಲದವರಾಗಿದ್ದು ಕುಟುಂಬ ಸಮೇತ ದೇವರ ದರ್ಶನಕ್ಕೆ ಬಂದಿದ್ದರು.
ಜನವರಿ 4ರಂದು ಪುಣ್ಯಕ್ಷೇತ್ರಗಳ ಭೇಟಿಗೆ ಎಂದು ಪತ್ನಿ ಹಾಗೂ ಮಕ್ಕಳೊಂದಿಗೆ ಕಾರಿನಲ್ಲಿ ಬೆಂಗಳೂರಿನಿಂದ ಬೆಳಿಗ್ಗೆ ಹೊರಟು ಹೊರನಾಡು ಶೃಂಗೇರಿ ಕ್ಷೇತ್ರದ ದರ್ಶನ ಮಾಡಿ ಹೊಸನಗರ ಬರುವಾಗ ರಾತ್ರಿ ಆಗಿದ್ದ ಕಾರಣ ಪಟ್ಟಣದ ಖಾಸಗಿ ಲಾಡ್ಜ್ ನಲ್ಲಿ ರೂಮ್ ಮಾಡಿ ಉಳಿದಿದ್ದರು.
ಜನವರಿ 5ರ ಬೆಳಿಗ್ಗೆ 6:45 ಸಮಯದಲ್ಲಿ ಮುನಿರಾಜು ಎದೆ ಉರಿ ಎಂದು ಪತ್ನಿ ಬಳಿ ಹೇಳಿದ್ದು ಅಸಿಡಿಟಿ ಇರಬಹುದೇನೋ ಎಂದು ಆತಂಕ ವ್ಯಕ್ತಪಡಿಸಿ ತಕ್ಷಣ ರೂಮ್ ಬಾಯ್ ಸಹಾಯದಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಮುನಿರಾಜುರವರನ್ನು ಹೊಸನಗರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ತೀವ್ರ ಹೃದಯಘಾತದಿಂದ ಮೃತಪಟ್ಟಿರುವದಾಗಿ ತಿಳಿಸಿದ್ದಾರೆ.
ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು ಹೊಸನಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.