ರಿಪ್ಪನ್ ಪೇಟೆ: ರಾಜ್ಯದ ಬಿಜೆಪಿ ಸರಕಾರದ ಆಡಳಿತ ಕಳಪೆಯಾಗಿದ್ದು ಜನಸಾಮಾನ್ಯರ ಬದುಕು ದುಸ್ತರವಾಗಿದೆ.ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಎಲ್ಲರಿಗೂ ಭಾವ ಅನ್ನೋ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಉತ್ತಮ ಆಡಳಿತವನ್ನು ನೀಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ವಕ್ತಾರ ಬೇಳೂರು ಗೋಪಾಲಕೃಷ್ಣ ಹೇಳಿದರು.
ಪಟ್ಟಣದಲ್ಲಿ ಇಂದು ಸಂಜೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಬೆಲೆ ಏರಿಕೆಯಿಂದ ರಾಜ್ಯದಲ್ಲಿ ಜನಸಾಮಾನ್ಯರ ಬದುಕುವುದು ದುಸ್ತರವಾಗಿದೆ. ಕೂಲಿ ಕಾರ್ಮಿಕರು ಬಡವರು ಹಾಗೂ ಮಧ್ಯಮವರ್ಗದವರು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದು ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರಕ್ಕೆ ಪ್ರತಿನಿತ್ಯ ಹಿಡಿ ಹಿಡಿ ಶಾಪ ಹಾಕುತ್ತಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿಗೆ ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶದ ಪ್ರತಿಭಾವಂತರು ಅವಕಾಶ ವಂಚಿತರಾಗುತ್ತಿದ್ದಾರೆ:
ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಹಗರಣಗಳು ನಡೆಯುತ್ತಿದ್ದು ಭ್ರಷ್ಟಾಚಾರ ರಾಜ್ಯದ ಮೂಲೆಮೂಲೆಯಲ್ಲೂ ತಾಂಡವಾಡುತ್ತಿದೆ. ಕಾಮಗಾರಿ ಗುತ್ತಿಗೆ. ಉಪನ್ಯಾಸಕರ ನೇಮಕಾತಿ. ಪಿಎಸ್ಐ ನೇಮಕಾತಿ ಹೀಗೆ ಪ್ರತಿಯೊಂದರಲ್ಲೂ ಯಾವುದೇ ಸರಕಾರದ ನೇಮಕಾತಿ ನಡೆದರೂ ಹಗರಣಗಳ ಹೊಗೆಯಾಡುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತ ಬಡ ಮಕ್ಕಳು ಉತ್ತಮ ಶಿಕ್ಷಣ ಪಡೆದು ಒಳ್ಳೆಯ ಅಂಕಗಳನ್ನು ಗಳಿಸಿದ್ದರು ಸಹ ಸರ್ಕಾರಿ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ.
ರಾಜ್ಯದ ಗೃಹ ಮಂತ್ರಿ ಆರಗ ಜ್ಞಾನೇಂದ್ರ ರವರಿಗೆ ಗೃಹಖಾತೆ ಕೂಡಿ ಬರುವುದಿಲ್ಲ. ಪ್ರತಿನಿತ್ಯ ಒಂದಲ್ಲ ಒಂದು ಹಗರಣಗಳು ಮತ್ತು ಪ್ರಕರಣಗಳು ರಾಜ್ಯದಲ್ಲಿ ನಡೆಯುತ್ತಿದ್ದು. ರಾಜ್ಯದ ಜನತೆ ಗೃಹ ಖಾತೆಯ ಮಂತ್ರಿಗಳ ಬಗ್ಗೆ ಬೇಸರವನ್ನು ಹೊಂದಿದ್ದಾರೆ.ಈ ಕೂಡಲೇ ಅವರನ್ನು ಗೃಹ ಖಾತೆಯಿಂದ ಬದಲಾಯಿಸಬೇಕೆಂದು ಈ ಸಂದರ್ಭದಲ್ಲಿ ಅವರು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.
ಸಾಗರ ಕ್ಷೇತ್ರದ ಶಾಸಕರು ಇನ್ನೂ ದಿನಗಳ ಲೆಕ್ಕಾಚಾರ ಮಾಡಬೇಕು :
ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರು ಇಂದಿಗೆ ನಾಲ್ಕು ವರ್ಷಗಳ ಅವಧಿಯನ್ನು ಮುಗಿಸಿದ್ದು ಇನ್ನು ಕೇವಲ ಒಂದು ವರ್ಷ ಬಾಕಿ ಇದ್ದು. ಈಗಿನ ರಾಜ್ಯದ ಬಿಜೆಪಿ ಆಡಳಿತ ಸರ್ಕಾರದ ಕಾರ್ಯವೈಖರಿಯನ್ನು ನೋಡಿದರೆ ಇನ್ನು ಕೆಲವೇ ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆಯನ್ನು ಘೋಷಣೆ ಮಾಡಬಹುದು. ಹಾಲಿ ಶಾಸಕರು ನಾಳೆಯಿಂದ ಇನ್ನುಳಿದ ಅಧಿಕಾರದ ಅವಧಿಯನ್ನು ದಿನಗಳ ಲೆಕ್ಕಾಚಾರದಲ್ಲಿ ಮಾಡಬೇಕು.ಈ ಬಾರಿ ಸಾಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಅರಸಾಳು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಉಮಾಕರ್, ಕೆಂಚನಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಬೆದುಲ್ಲಾ ಶರೀಫ್. ಕೆಂಚನಾಲ ಗ್ರಾಮ ಪಂಚಾಯಿತಿ ಸದಸ್ಯ ಮಹಮ್ಮದ್ ಶರೀಫ್.ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿ ಸದಸ್ಯ ಆಸಿಫ್ ಭಾಷಾಸಾಬ್,ಅಶೋಕ್ ಬೇಳೂರು,ರಾಮಚಂದ್ರ ಸೇರಿದಂತೆ ಇನ್ನಿತರರು ಇದ್ದರು.