Headlines

ಎಳ್ಳಮವಾಸ್ಯೆ ನಿಮಿತ್ತ ಶ್ರೀ ಕ್ಷೇತ್ರ ರಾಮತೀರ್ಥದಲ್ಲಿ ಮಿಂದೆದ್ದ ಭಕ್ತ ಸಮೂಹ

ರಿಪ್ಪನ್‌ಪೇಟೆ: ಇಲ್ಲಿಗೆ ಸಮೀಪದ  ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಂಡ್ಲೆಮನೆಯ ಶರ್ಮೀಣ್ಯಾವತಿ ನದಿ ತೀರದಲ್ಲಿ ನೆಲೆಸಿರುವ ಶ್ರೀ ಕ್ಷೇತ್ರ ರಾಮತೀರ್ಥದ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಭಾನುವಾರ ಎಳ್ಳಮಾವಾಸ್ಯೆ ನಿಮಿತ್ತ ಸಾವಿರಾರು ಭಕ್ತರು ತೀರ್ಥಸ್ನಾನ ಮಾಡಿದರು.
ಸುತ್ತಮುತ್ತಲ ಗ್ರಾಮಗಳಿಂದ ತಂಡೋಪತಂಡವಾಗಿ ಬಂದ ಭಕ್ತರು ನದಿಯಲ್ಲಿ ಮಿಂದೆದ್ದು, ನದಿ ತೀರದಲ್ಲಿ ನೆಲೆಸಿರುವ ರಾಮೇಶ್ವರನ ಸನ್ನಿಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. 
ಕೆಂಜಿಗಾಪುರದ ಶ್ರೀಧರ್ ಭಟ್ ಹಾಗೂ ದೇವಸ್ಥಾನದ ಅರ್ಚಕ ಎ.ವಿ. ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಹೋಮ ಹವನ ಮತ್ತು ವಿಶೇಷ ಪೂಜೆ ನಡೆಯಿತು. ಹಾಲಂದೂರು ಶ್ರೀಧರ್ ಭಟ್ ಅವರ ನೇತೃತ್ವದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ನಂತರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಭಕ್ತರಿಗೆ ಸಾಮೂಹಿಕ ಅನ್ನಸಂತರ್ಪಣೆ ನಡೆಯಿತು.
 ಸಂಜೆ ಹೊಳೆ ದೀಪೋತ್ಸವ ಕಾರ್ಯಕ್ರಮವು ಅತ್ಯಂತ ಅದ್ದೂರಿಯಾಗಿ ನೆರವೇರಿತು.
ದೇವಸ್ಥಾನದ ಸೇವಾ ಸಮಿತಿಯ ಗೌರವಾಧ್ಯಕ್ಷ ಕೆ.ವೈ. ಜಯಂತ್, ಅಧ್ಯಕ್ಷ ಅಚ್ಯುತಾಚಾರ್, ಕಾರ್ಯದರ್ಶಿ ಕರುಣಾಕರ, ಖಜಾಂಚಿ ಗಂಗಾಧರ ಮತ್ತು ಎಲ್. ಶೇಖರಪ್ಪ ಮತ್ತು ಸಮಿತಿ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Leave a Reply

Your email address will not be published. Required fields are marked *