Headlines

ದಲಿತ ರೈತರ ಮೇಲೆ ಅರಣ್ಯಾಧಿಕಾರಿಗಳಿಂದ ಹಲ್ಲೆ : ಗ್ರಾಮಸ್ಥರಿಂದ ತೀವ್ರ ಪ್ರತಿಭಟನೆ:

ಶಿವಮೊಗ್ಗ: ದರಕಾಸ್ತಿನಿಂದ ದಲಿತರಿಗೆ ಮಂಜೂರಾಗಿದ್ದ ಜಮೀನನ್ನು ವಶಕ್ಕೊಪ್ಪಿಸಲು ಬಿಡದ ಅರಣ್ಯಾಧಿಕಾರಿಗಳ ಅಧಿಕಾರಿಗಳು ದೌರ್ಜನ್ಯ ನಡೆಸಿ ಹಲ್ಲೆ ಮಾಡಿದ್ದಲ್ಲದೇ ನಾಲ್ವರ ಮೇಲೆ ಏಳೆಂಟು ಸುಳ್ಳು ಮೊಕದ್ದಮೆ ದಾಖಲಿಸಿರುವ‌ ಬಗ್ಗೆ ತಾಲೂಕಿನ ದೇವಕಾತಿಕೊಪ್ಪ‌ ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಇಂದು ಮದ್ಯಾಹ್ನದಿಂದ ಪ್ರತಿಭಟನೆಗಿಳಿದಿದ್ದಾರೆ.

ದೇವಕಾತಿಕೊಪ್ಪ ಹೊರವಲಯದ ಸರ್ವೇ ನಂ115ರಿಂದ 126ರ ವರೆಗಿನ ಭೂಮಿಯಲ್ಲಿ 12ದಲಿತರಿಗೆ 1979ರಲ್ಲಿ ಅಂದಿನ ಸರ್ಕಾರ ತಲಾ 2ಎಕರೆಯಂತೆ 24 ಎಕರೆ ಭೂಮಿಯನ್ನು ಮಂಜೂರು ಮಾಡಿತ್ತು. ಕಂದಾಯ ಇಲಾಖೆ ಈ ಭೂಮಿಗೆ ಪಹಣಿ ಹಾಗೂ ಖಾತೆ ಮಾಡಿ ಕೊಟ್ಟಿತ್ತು.

ಕಳೆದ ಎರಡು ದಿನದ ಹಿಂದೆ ಈ ಭೂಮಿಯಲ್ಲಿದ್ದ ಗಿಡಗಂಟೆಗಳನ್ನು ಕಡಿದು ಸ್ವಚ್ಛಗೊಳಿಸಿ ಸಾಗುವಳಿಗೆ ಮುಂದಾಗಿದ್ದ ರೈತರ ಕ್ರಮದ ವಿರುದ್ಧ ಶಂಕರ ವಲಯ ಅರಣ್ಯ ವಿಭಾಗದ ಕುಮಾರ್, ಗಿರೀಶ್ ಹಾಗೂ ಇತರ ನಾಲ್ವರು ರೈತರ ದಾಖಲೆಗಳನ್ನು ಪರಿಶೀಲಿಸದೇ ಹಿಗ್ಗಾಮುಗ್ಗಾ ತಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಸಂದರ್ಭದಲ್ಲಿ ಮಕ್ಕಳು, ಮಹಿಳೆಯರನ್ನು ನೋಡದೇ ಹಲ್ಲೆ ನಡೆಸಿದ್ದಾರೆಂದು ಹೇಳಲಾಗಿದ್ದು, ಆಗ ಸಿಕ್ಕ ಬಸವರಾಜಪ್ಪ, ನಾಗಣ್ಣ, ಪ್ರದೀಪ ಹಾಗೂ ಬಸಣ್ಣಿ ಎಂಬುವವರನ್ನು ಬಂಧಿಸಿ ಶ್ರೀಗಂಧ ಕಳುವಿನ ಆರೋಪದ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ. ಬಸಣ್ಣಿ ಅವರ ಕೈ ಮುರಿದಿದ್ದು ಆಸ್ಪತ್ರೆಯಲ್ಲಿ ದಾಖಲಾಗಲೂ‌ ಸಹ ಅವಕಾಶ ನೀಡಿಲ್ಲ ಎಂದು ರೈತರು ಆರೋಪಿಸಿದ್ದಾರೆ.

ಅರಣ್ಯ ಇಲಾಖೆಯ ಈ ಅಧಿಕಾರಿಗಳು ಸ್ಥಳಕ್ಕೆ ಬಂದು ಕ್ಷಮೆ ಕೇಳಬೇಕು ಹಾಗೂ ಹಾಕಿರುವ ದೂರುಗಳನ್ನು ವಾಪಸ್ ಪಡೆಯಲು ಒತ್ತಾಯಿಸಿದ್ದಾರಸ. ರೈತರ ಮೇಲೆ ಸುಳ್ಳು ದೂರು ದಾಖಲಾಗಿರುವುದನ್ನು ಶಾಸಕ ಅಶೋಕ್ ನಾಯ್ಕ್ ಖಂಡಿಸಿದ್ದು, ಕೂಡಲೇ ಅದನ್ನು ವಾಪಸ್ ಪಡೆಯಲು ಸೂಚಿಸಿದ್ದಾರೆನ್ನಲಾಗಿದೆ.

ಪ್ರತಿಭಟನೆ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಡಿ.ಬಿ.ವಿಜಯ ಕುಮಾರ್, ಸದಸ್ಯ ಮಾಲತೇಶ್, ಪ್ರಮುಖರಾದ ಡಿ.ಟಿ.ಪ್ರಕಾಶ್, ಡಿ.ಸಿ.ರವಿಕುಮಾರ್, ಶಿವಮೂರ್ತಿ, ವಿರೇಶ್, ಗೌರಮ್ಮ, ರೇಖಾ, ಬಸಮ್ಮ, ಸುಜಾತ ಹಾಗೂ ಇತರರಿದ್ದರು.

About The Author

Leave a Reply

Your email address will not be published. Required fields are marked *