Headlines

ಸಿಎ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಪ್ರಜ್ವಲ್: ಗ್ರಾಮ ಪಂಚಾಯತ್ ವತಿಯಿಂದ ಸನ್ಮಾನ

ಸಿಎ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಪ್ರಜ್ವಲ್: ಗ್ರಾಮ ಪಂಚಾಯತ್ ವತಿಯಿಂದ ಸನ್ಮಾನ

ಹುಂಚ : ಇತ್ತೀಚೆಗೆ ಪ್ರಕಟವಾದ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಅಂತಿಮ ಪರೀಕ್ಷೆಯಲ್ಲಿ ಯಶಸ್ವಿಯಾಗಿ ತೇರ್ಗಡೆಗೊಂಡ ಪ್ರಜ್ವಲ್ ಅವರಿಗೆ ಇಂದು ಅವರ ಹುಟ್ಟೂರಾದ ಹೊಸನಗರ ತಾಲೂಕಿನ ಹುಂಚ ಗ್ರಾಮ ಪಂಚಾಯತ್ ವತಿಯಿಂದ ಆತ್ಮೀಯ ಸನ್ಮಾನ ಏರ್ಪಡಿಸಲಾಗಿತ್ತು.

ಹುಂಚ ಗ್ರಾಮದ ಪ್ರಜ್ವಲ್ ನಿವಾಸಕ್ಕೆ ತೆರಳಿದ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು, ಗ್ರಾಮದ ಹಿರಿಯರು, ಶಿಕ್ಷಣ ತಜ್ಞರು ಹಾಗೂ ಸಾರ್ವಜನಿಕರು ಪ್ರಜ್ವಲ್ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಇದೇ ಸಂಧರ್ಭದಲ್ಲಿ ಪ್ರಜ್ವಲ್ ಅವರಿಗೆ ಗ್ರಾಮ ಪಂಚಾಯತ್ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಪ್ರಜ್ವಲ್ ಅವರು ಹುಂಚ ಗ್ರಾಮದ ದಿವಂಗತ ವಿಶ್ವಸೇನಾ ಮತ್ತು ನಾಗರತ್ನ ಅವರ ಪುತ್ರರಾಗಿದ್ದಾರೆ.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಜ್ವಲ್, ತಮ್ಮ ಈ ಸಾಧನೆಗೆ ಪೋಷಕರು, ಗುರುಗಳು ಹಾಗೂ ಗ್ರಾಮಸ್ಥರ ಪ್ರೋತ್ಸಾಹವೇ ಕಾರಣ ಎಂದು ಸ್ಮರಿಸಿದರು. “ಸಿಎ ಪರೀಕ್ಷೆ ಸವಾಲಿನದ್ದಾಗಿದ್ದರೂ, ದೃಢ ಸಂಕಲ್ಪ ಮತ್ತು ನಿರಂತರ ಪರಿಶ್ರಮದಿಂದ ಯಶಸ್ಸು ಸಾಧ್ಯ. ಯುವ ಪೀಳಿಗೆಗೆ ನನ್ನ ಈ ಸಾಧನೆ ಪ್ರೇರಣೆಯಾಗಲಿ” ಎಂದು ಅವರು ಆಶಿಸಿದರು.

ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮಾ ಮಾತನಾಡಿ, “ಪ್ರಜ್ವಲ್ ಅವರ ಸಾಧನೆ ನಮ್ಮ ಗ್ರಾಮಕ್ಕೆ ಹೆಮ್ಮೆಯ ವಿಷಯ. ಇದು ಇತರೆ ಯುವಕರಿಗೂ ಸ್ಪೂರ್ತಿ ನೀಡುತ್ತದೆ. ಇಂತಹ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ” ಎಂದು ಹೇಳಿದರು.

ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ವೆಂಕಟೇಶ್ ಈ ಸದಸ್ಯರಾದ ದೇವೇಂದ್ರ ಹುಂಚ, ಆಶಾ ಯದು ಕುಮಾರ್, ರಾಘವೇಂದ್ರ ತೋಟದ ಕಟ್ಟು, ಪಂಚಾಯತಿ ಸಿಬ್ಬಂದಿ ನಾಗೇಶ್, ಇದ್ದರು.

ಪ್ರಜ್ವಲ್ ಅವರ ಸಾಧನೆಯು ಇಡೀ ಗ್ರಾಮಕ್ಕೆ ಸಂತಸ ತಂದಿದ್ದು, ಅವರ ಭವಿಷ್ಯಕ್ಕೆ ಶುಭ ಕೋರಲಾಯಿತು.